ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಜಾರಿಯಿಂದ ೫.೨೦ ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೊಳಪಡಲಿದೆ, ಆದರೆ ಅದನ್ನು ಜಾರಿಗೊಳಿಸಲು ಭೂಸ್ವಾಧೀನವೇ ಸವಾಲಾಗಿದೆ ಎಂದು ಕೆಬಿಜೆಎನ್ ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಿರಿಯ ಐಎಎಸ್ ಅಧಿಕಾರಿ ಕೆ.ಪಿ. ಮೋಹನರಾಜ್ ಹೇಳಿದರು.
ಆಲಮಟ್ಟಿಗೆ ಪ್ರಥಮ ಬಾರಿಗೆ ಆಗಮಿಸಿದ ಅವರು ವಿವಿಧ ಉದ್ಯಾನಗಳಲ್ಲಿನ ಕಾಮಗಾರಿ ಪರಿಶೀಲಿಸಿ, ರಾಕ್ ಉದ್ಯಾನದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ, ಅವಾರ್ಡ್ ಹಂತದಲ್ಲಿರುವ ಜಮೀನಿಗೆ ಪರಿಹಾರ ಕೊಡಲು ಇರುವ ತಾಂತ್ರಿಕ ತೊಂದರೆ ಬಗೆಹರಿಸಲಾಗುವುದು ಎಂದರು. ಕಳೆದ ಮೂರು ದಿನಗಳಿಂದ ಆಲಮಟ್ಟಿಯಲ್ಲಿದ್ದು, ವಲಯವಾರು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ, ಯೋಜನೆ ಜಾರಿಗೆ ಉಂಟಾಗಿರುವ ತೊಡಕುಗಳನ್ನು ನಿವಾರಿಸಿ ಯಾವ ರೀತಿ ಜಾರಿಗೊಳಿಸಬೇಕು ಎಂದು ಒಂದು ಯೋಜನೆ ಹಾಗೂ ಕಾಲಮಿತಿ ಹಾಕಿಕೊಂಡು ಕಾರ್ಯೋನ್ಮುಖಗೊಳ್ಳಲಾಗುವುದು ಎಂದರು.
ನಾರಾಯಣಪುರ ಭಾಗದ ಕಾಲುವೆಗಳಿಗೆ ಅಳವಡಿಸಿರುವ ಸ್ಕಡಾ ತಂತ್ರಜ್ಞಾನವನ್ನು ಆಲಮಟ್ಟಿ ಭಾಗದ ಕೆಲ ಕಾಲುವೆಯ ಯೋಜನೆಗಳಿಗೆ ಅಳವಡಿಸಲು ಉದ್ದೇಶಿಸಲಾಗಿದೆ, ಇದರಿಂದ ಕಾಲುವೆಯ ನೀರು ಹಿತಮಿತ ಬಳಕೆಗೆ ಅವಕಾಶ ಒದಗಲಿದೆ ಎಂದರು.
ಕಾಲುವೆಗಳ ನಿರ್ವಹಣೆ:
ಈ ಬಾರಿ ಕಾಲುವೆಗೆ ನಿರ್ವಹಣೆಗಾಗಿ ಸಾಕಷ್ಟು ಕಾಲವಧಿಯಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಯುಕೆಪಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಶೇ ೨೦ ರಷ್ಟು ಭೂಮಿ ಸವುಳು-ಜವುಳಿಗೆ ತುತ್ತಾಗಿದೆ, ಅದನ್ನು ನಿಯಂತ್ರಿಸಲು ಹಾಗೂ ಆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಮಥಾಳ ಹನಿನೀರಾವರಿ ಯೋಜನೆಯ ಹಾಗೆ ಕೊಪ್ಪಳ ಭಾಗದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ನೀರಾವರಿ ಯೋಜನೆಗೂ ಹನಿ ನೀರಾವರಿ ಪದ್ಧತಿ ಬಳಸಲು ಯೋಚಿಸಲಾಗಿದೆ. ಹನಿ ನೀರಾವರಿಯಿಂದ ನೀರಾವರಿ ಪ್ರದೇಶ ಹೆಚ್ಚಾಗಲಿದೆ ಎಂದರು.
ಉದ್ಯಾನಗಳ ಅಭಿವೃದ್ಧಿ:
ಆಲಮಟ್ಟಿಯಲ್ಲಿರುವ ವಿವಿಧ ಉದ್ಯಾನಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಪ್ರಥಮ ಆದ್ಯತೆ ಎಂದರು. ಶೌಚಾಲಯಗಳ ನಿರ್ಮಾಣಕ್ಕೆ, ಶುದ್ಧ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಲಾಗುವುದು, ಪಾರ್ಕಿಂಗ್ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಆಲಮಟ್ಟಿ-ಸೀತಿಮನಿ ಮಧ್ಯೆ ರೋಪ್ ವೇ ನಿರ್ಮಿಸುವ ಪ್ರಸ್ತಾಪ ಇದ್ದು, ಈ ಬಗ್ಗೆಯೂ ಪರಿಶೀಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ, ಡಿ.ಬಸವರಾಜ, ಗೋವಿಂದ ರಾಠೋಡ, ಡಿಎಫ್ ಓ ರಾಜಣ್ಣ ನಾಗಶೆಟ್ಟಿ, ಆರ್.ಎಫ್.ಓ. ಮಹೇಶ ಪಾಟೀಲ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

