ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಮಾಹಿತಿ
ವಿವಿಧ ಕಂಪನಿಗಳಿಂದ ಬಂಡವಾಳ ಹೂಡಿಕೆ | ವಿವಿಧ ಕೈಗಾರಿಕೆಗಳ ಸ್ಥಾಪನೆ | ಐದು ಸಾವಿರ ಉದ್ಯೋಗ ಸೃಷ್ಠಿ
ವಿಜಯಪುರ: ಜಿಲ್ಲೆಯಲ್ಲಿ ವಿದೇಶಿ ಸೇರಿದಂತೆ ವಿವಿಧ ಕಂಪನಿಗಳು ಬಂಡವಾಳ ಹೂಡಲು ಮುಂದಾಗಿದ್ದು, ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಐದು ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಅವರು ಜಿಲ್ಲಾಡಳಿತದ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜ.೨೬ರಂದು ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ವಿಜಯಪುರದಲ್ಲಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ಮುಂದೆ ಬಂದಿದ್ದು, ಈ ಪೈಕಿ ಲುಲು ಕಂಪನಿ ವಿಜಯಪುರದಲ್ಲಿ ೩೦೦ ಕೋಟಿ ರೂ. ವೆಚ್ಚದಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣ ಘಟಕವನ್ನು ತೆರೆಯಲು ಒಪ್ಪಿಕೊಂಡಿದೆ ಎಂದು ಹೇಳಿದರು.
ಉತ್ತರಪ್ರದೇಶ ಮೂಲದ ಬಿ.ಎಲ್. ಆಗ್ರೋ ಕಂಪನಿ ಕೂಡ ನಮ್ಮ ಜಿಲ್ಲೆಯಲ್ಲೇ ತನ್ನ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಲು ಮುಂದೆ ಬಂದಿದೆ. ಇದರಿಂದ ಬಂಡವಾಳ ಹೂಡಿಕೆಯಾಗಿ ಉದ್ಯೋಗ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಇದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೆಚ್ಚೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇದಕ್ಕೆ ಪೂರಕವಾಗಿ ನಮ್ಮ ಜಿಲ್ಲೆಯು ಕೈಗಾರಿಕೆಗಳ ಬೆಳವಣಿಗೆಯನ್ನೂ ಸಾಧಿಸಬೇಕು. ೨೧ನೇ ಶತಮಾನದ ಜಾಗತಿಕ ಸ್ಪರ್ಧೆಯಲ್ಲಿ ನಾವು ಉಳಿದುಕೊಳ್ಳಬೇಕು ಎಂದರೆ ಇದು ಅನಿವಾರ್ಯವಾಗಿದೆ. ಏಕೆಂದರೆ, ಇದರಿಂದ ಕೃಷಿ ಕ್ಷೇತ್ರದ ಮೇಲಿನ ಅತಿಯಾದ ಅವಲಂಬನೆ ಕಡಿಮೆಯಾಗಿ, ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಹೆಜ್ಜೆ ಇಡುತ್ತಿದ್ದೇವೆ. ಇದರ ಪರಿಣಾಮವಾಗಿ ಪ್ರಸಕ್ತ ಸಾಲಿನಲ್ಲಿ ೧,೪೫೨ ಕೈಗಾರಿಕೆಗಳು ಜಿಲ್ಲೆಯಲ್ಲಿ ೧೨೨ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿದ್ದು, ೧೪,೫೨೦ ಉದ್ಯೋಗಗಳು ಇದರಿಂದ ಸೃಷ್ಟಿಯಾಗಿವೆ ಎಂದು ಹೇಳಿದರು.
ನನ್ನ ನೇತೃತ್ವದ ನಿಯೋಗವು ೨೦೨೩ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿ, ಜಾಗತಿಕ ಮಟ್ಟದ ಹಲವು ಕಂಪನಿಗಳೊಂದಿಗೆ ಮಹತ್ವದ ಮಾತುಕತೆಗಳನ್ನು ನಡೆಸಿದೆ. ಇದರಿಂದಾಗಿ ಕರ್ನಾಟಕಕ್ಕೆ ೨೪ ಸಾವಿರ ಕೋಟಿ ರೂ. ಆದಾಯ ಹರಿದು ಬರುವುದು ನಿಚ್ಚಳವಾಗಿದೆ. ಇದರಲ್ಲಿ ೮೫೦೦ ಕೋಟಿ ಬಂಡವಾಳ ಹೂಡಲು ಕಂಪನಿಗಳು ಈಗಾಗಲೆ ಕಾರ್ಯಾರಂಭ ಮಾಡಿವೆ.
ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ಕಳೆದ ಎಂಟು ತಿಂಗಳಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಯು ವೇಗವನ್ನು ಪಡೆದುಕೊಂಡಿದೆ. ಮುಖ್ಯವಾಗಿ, ಇಲ್ಲಿ ನಿರ್ಮಿಸಲಾಗುತ್ತಿರುವ ಸುಸಜ್ಜಿತ ವಿಮಾನ ನಿಲ್ದಾಣದ ಕಾಮಗಾರಿಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಇದರ ಉದ್ಘಾಟನೆಯು ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ಈ ವಿಮಾನ ನಿಲ್ದಾಣವು ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕಗಳ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯಲಿದೆ. ಇದರಿಂದ ಈ ಭಾಗದ ರೈತರು ದ್ರಾಕ್ಷಿ ಸೇರಿದಂತೆ ತಮ್ಮ ಹಲವು ಬೆಳೆಗಳನ್ನು ದೇಶದ ನಾನಾ ಭಾಗಗಳಿಗೆ ರವಾನಿಸಲು ಇದು ಹೆಬ್ಬಾಗಿಲಾಗಲಿದೆ. ಜೊತೆಗೆ ಜಿಲ್ಲೆಯ ಶೈಕ್ಷಣಿಕ, ಕೈಗಾರಿಕಾ ಮತ್ತು ಆರ್ಥಿಕ ಪ್ರಗತಿಗಳಿಗೆ ಈ ವಿಮಾನ ನಿಲ್ದಾಣವು ಸೋಪಾನವಾಗಲಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದರು.
ಈ ವರ್ಷ ಎಲ್ಲೆಡೆಯೂ ಬರಗಾಲವಿದೆ. ಇದಕ್ಕೆ ನಮ್ಮ ಜಿಲ್ಲೆಯೇನೂ ಹೊರತಲ್ಲ. ಹೀಗಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಾಗಿದ್ದು, ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ಕೊಡಲಾಗಿದೆ. ಇದಲ್ಲದೆ, ಜಾನುವಾರುಗಳಿಗೆ ಮೇವು ಪೂರೈಕೆ, ಉದ್ಯೋಗ ಖಾತ್ರಿ, ಪರಿಹಾರ ವಿತರಣೆ ಇತ್ಯಾದಿಗಳಿಗೂ ಆದ್ಯತೆ ಕೊಡಲಾಗಿದೆ. ಬ್ರಿಟಿಷರ ಕಾಲದಿಂದಲೂ ಬರಗಾಲಕ್ಕೆ ತುತ್ತಾಗಿದ್ದ ವಿಜಯಪುರ ಜಿಲ್ಲೆಯಲ್ಲಿ ಮಳೆ ಬೀಳುವ ಪ್ರಮಾಣ ಸರಾಸರಿಗಿಂತ ಕಡಿಮೆ ಇತ್ತು. ೪ ವರ್ಷಗಳಲ್ಲಿ ಒಂದು ವರ್ಷ ಮಾತ್ರ ಉತ್ತಮ ಮಳೆ, ಉಳಿದ ೩ ವರ್ಷಗಳು ಕಡಿಮೆ ಪ್ರಮಾಣದ ಮಳೆ ಕಾರಣ ಇಲ್ಲಿ ಸತತ ಬರಗಾಲದಿಂದ ಕೃಷಿಯನ್ನೆ ನಂಬಿರುವ ಜನತೆ ಅನಿವಾರ್ಯವಾಗಿ ಬದುಕು ಕಟ್ಟಿಕೊಳ್ಳಲು ಗುಳೆ ಹೋಗುವ ಪ್ರಮಾಣ ಹೆಚ್ಚಿತ್ತು. ಜಿಲ್ಲೆಯ ಬರಗಾಲ ನಿವಾರಣೆಗಾಗಿ ಈ ಹಿಂದೆ ನಾನು ಜಲಸಂಪನ್ಮೂಲ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವನಾಗಿ ೨೦೧೩-೧೮ರ ಅವಧಿಯಲ್ಲಿ ವಿಜಯಪುರ ಜಿಲ್ಲೆಗೆ, ಸದ್ಭಳಕೆಗೆ ೧೦೦ ಟಿ.ಎಂ.ಸಿ ನೀರು ನಿಗದಿಪಡಿಸಿ, ಕೃಷ್ಣಾ ನ್ಯಾಧೀಕರಣದ ಅಂತಿಮ ಅಧಿಸೂಚನೆ ಮುಂಚೆಯೇ ಅಗತ್ಯ ಕ್ರಮಗಳನ್ನು ಜರುಗಿಸಿ, ತಾತ್ಕಾಲಿಕವಾಗಿ ನೀರು ಅವಕಾಶ ಮಾಡಲಾಗಿದೆ ಎಂದು ಹೇಳಿದರು.
ಮುಳವಾಡ, ಚಿಮ್ಮಲಗಿ, ತುಬಚಿ-ಬಬಲೇಶ್ವರ ಸೇರಿದಂತೆ ೧೦ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಯುದ್ದೋಪಾದಿಯಲ್ಲಿ ಪೂರ್ಣಗೊಳಿಸಿ, ಮುಖ್ಯ ಕಾಲುವೆಗಳಿಗೆ ನೀರು ಹರಿಸಿ, ಕೆರೆಗಳನ್ನು ತುಂಬಿಸಿದ್ದರಿಂದ ಜಿಲ್ಲೆಯ ಜನತೆಗೆ ಸದ್ಯ ಬರಗಾಲದಲ್ಲಿಯೂ ನೆಮ್ಮದಿಯಿಂದ ಇದ್ದು, ಇಂದು ಗುಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ಗುಳೆ ಹೋದವರು ಮರಳಿ ತಮ್ಮ ಗ್ರಾಮಗಳಲ್ಲಿ ವ್ಯವಸಾಯ ಆರಂಭಿಸಿದ್ದಾರೆ. ಸತತ ಬರಗಾಲ ಜಿಲ್ಲೆ ವಿಜಯಪುರ ಇದೀಗ ಹಸಿರುಮಯ ಜಿಲ್ಲೆಯಾಗಿ ಮಾರ್ಪಡಿಸಿದ ಹೆಮ್ಮೆ ಇದೆ ಎಂದರು.
ಹಾಗೆಯೇ, ಕಳೆದ ವಾರ ಸ್ವಿಟ್ಜರ್ಲೆಂಡ್ ದೇಶದ ದಾವೋಸ್ನಗರದಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದಲ್ಲಿ ಕೂಡ ನಾನು ರಾಜ್ಯ ಸರಕಾರದ ಉನ್ನತ ನಿಯೋಗದ ನೇತೃತ್ವವನ್ನು ವಹಿಸಿ ಪಾಲ್ಗೊಂಡಿದ್ದೆ. ಇಲ್ಲೂ ಕೂಡ ಜಗತ್ತಿನ ಪ್ರಮುಖ ಕಂಪನಿಗಳಾದ ಎಚ್.ಪಿ., ಲುಲು, ನೆಸ್ಲೆ, ಬಿಎಲ್ ಆಗ್ರೋ, ಎಚ್.ಸಿ.ಎಲ್, ಮುಂತಾದ ಕಂಪನಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ರಾಜ್ಯಕ್ಕೆ ೨೨ ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಬಂಡವಾಳ ಬರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ. ಹಾಗೆಯೇ, ಜಿಲ್ಲೆಯಲ್ಲಿ ೩,೨೩೯ ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಪೈಕಿ ಕೊಲ್ಹಾರ ತಾಲ್ಲೂಕಿನಲ್ಲಿ ೨೪೫ ಕೋಟಿ ರೂ. ವೆಚ್ಚದಲ್ಲಿ ೬೧೪ ಎಕರೆ ಇಂಡಸ್ಟ್ರಿಯಲ್ ಏರಿಯಾವನ್ನು ಸಜ್ಜುಗೊಳಿಸಲಾಗಿದೆ. ಇಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ೪೧೧ ನಿವೇಶನಗಳು ಲಭ್ಯವಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ್ ಶಹಾಪೂರ, ಮೇಯರ್ ಮಹೇಜಬಿನ ಹೋರ್ತಿ, ಉಪ ಮೇಯರ್ ದಿನೇಶ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್.ಪಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

