ಲೇಖನ
– ಜಯಶ್ರೀ ಜೆ ಅಬ್ಬಿಗೇರಿ
ಇಂಗ್ಲಿಷ್ ಉಪನ್ಯಾಸಕರು
ಬೆಳಗಾವಿ
ಮೊ: 9449234142
ಉದಯರಶ್ಮಿ ದಿನಪತ್ರಿಕೆ
ಪ್ರಾಣಸಖಿ ಪ್ರೀತಿ,
ಅರ್ಧ ತೆರೆದ ಕಿಟಕಿಯ ಹೊರಗೆ ಸದ್ದಿಲ್ಲದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತಣ್ಣನೆಯ ಗಾಳಿ ಜೊತೆಯಾಗಿತ್ತು. ನನ್ನ ಮನಸ್ಸು ಮಾತ್ರ ಹಿಂದಕ್ಕೆ ಪಯಣಿಸುತ್ತಿತ್ತು.

ಕೈಯಲ್ಲಿ ಹಿಡಿದಿರುವ ಕಾಫಿ ಕಪ್ಪಿನಿಂದ ಹಬೆಯಾಡುತ್ತಿತ್ತು. ನನ್ನ ಬಾಳಿನ ಪ್ರೀತಿಯೇ, ನಿನ್ನೊಂದಿಗೆ ಕಳೆದ ಆ ಪುಟ್ಟ ಪುಟ್ಟ ಮಧುರವಾದ ಕ್ಷಣಗಳು ನನ್ನ ಬದುಕಿನ ಲೇಖನಿಯಿಂದ ಬರೆದ ಸುಂದರ ಕಾವ್ಯದಂತಿತ್ತು.
ಹಿಂದಿನ ರಾತ್ರಿ ಹಳೆಯ ಡೈರಿ ತೆರೆದಾಗ ನಾನು ನೀನು ಮೊದಲು ಭೇಟಿಯಾದ ಆ ಸಂಜೆ ಕಣ್ಣಮುಂದೆ ಬಂತು. ಅಂದು ನೀನು ಧರಿಸಿದ್ದ ಆ ಆಕಾಶ ನೀಲಿ ಬಣ್ಣದ ಲಂಗ ದಾವಣಿ, ನಿನ್ನ ಹಣೆಯ ಮೇಲೆ ಅಲೆಯಂತೆ ಆಡುತ್ತಿದ್ದ ಆ ಮುಂಗುರುಳು ನನ್ನ ಮನದಲ್ಲಿ ಇಂದಿಗೂ ಹಾಗೇ ಹಸಿರಾಗಿದೆ. ನಿನ್ನ ಕಂಗಳು ಕವಿಯ ಕಲ್ಪನೆಗೂ ಸಿಗದ ನೀಲ ಸರೋವರಗಳು. ಆ ಕಾಡಿಗೆ ಕಣ್ಣುಗಳ ಒಂದು ಸಣ್ಣ ನೋಟದಲ್ಲಿ ಎಂಥ ಸನ್ಯಾಸಿಯು ಮರಳಾಗುವಷ್ಟು ಮಾದಕತೆ. ನೀನು ಮೆಲ್ಲನೆ ರೆಪ್ಪೆ ಬಡಿಯುವಾಗ, ಇಡೀ ಸೃಷ್ಟಿಯೇ ಒಂದು ಕ್ಷಣ ನಿಂತು ಮೌನವಾಗಿ ಆ ಅಂದವನ್ನು ಆಸ್ವಾದಿಸುವಂತೆ ಭಾಸವಾಗುತ್ತಿತ್ತು.
ಇದು ಸಾಲದೆಂಬಂತೆ
ಕಡಲಿನಷ್ಟು ಆಳವಾದ ಪ್ರೀತಿಯ ನಿಷ್ಕಲ್ಮಶ ಮಂದಹಾಸವಿತ್ತು.
ನೀನೊಂದು ಮುಗುಳ್ನಗೆಯ ಚಂದ್ರಿಕೆ.
ನಿನ್ನ ತುಟಿಗಳ ಅಂಚಿನಲ್ಲಿ ಅಂದದ ಮಂದಹಾಸ ಅರಳಿತ್ತು.
ಆ ಸಣ್ಣ ಮುಗುಳ್ನಗೆ, ಶರತ್ಕಾಲದ ಹುಣ್ಣಿಮೆಯ ಚಂದ್ರನ ಬೆಳಕಿನಂತೆ ಅತ್ಯಂತ ಶೀತಲ ಮತ್ತು ಸುಂದರವಾಗಿತ್ತು. ನೀನು ನಕ್ಕಾಗ, ಒಣಗಿದ ಮರದಲ್ಲೂ ಹೂವು ಅರಳುವಂತೆ, ಕಲ್ಲಿನ ಹೃದಯದಲ್ಲೂ ಪ್ರೀತಿಯ ಕಾರಂಜಿ ಚಿಮ್ಮುವಂತೆ ಭಾಸವಾಗುತ್ತದೆ. ಆ ನಗುವಿನಲ್ಲಿ ಯಾವುದೇ ಕೃತಕತೆ ಇಲ್ಲ; ಅದು ನಿನ್ನೊಳಗಿನ ಮುಗ್ಧತೆಯ ಸುಂದರ ಪ್ರತಿಬಿಂಬ.
ಮುಂಗುರುಳ ಲಾಸ್ಯ ಕಾರ್ಗತ್ತಲ ರಾತ್ರಿಯಂತೆ. ಸುಂದರವಾದ ನಿನ್ನ ಮುಂಗುರುಳುಗಳು ಹಣೆಯ ಮೇಲೆ ತೇಲಿ ಬರುವಾಗ, ತಂಗಾಳಿಯೂ ಸಹ ನಿನ್ನ ಕೆನ್ನೆಯನ್ನು ಸವರಿ ಧನ್ಯತೆಯನ್ನು ಅನುಭವಿಸುತ್ತತ್ತು. ನೀನು ನಾಚಿ ತಲೆ ತಗ್ಗಿಸಿದಾಗ, ಆ ಮುಂಗುರುಳುಗಳು ನಿನ್ನ ಮುಖದ ಅಂದವನ್ನು ಮರೆಮಾಚುವ ರೇಷ್ಮೆಯ ಪರದೆಯಂತೆ ಕಾಣುತ್ತವೆ. ಆ ಕೂದಲ ಸುವಾಸನೆಯು ಮಲ್ಲಿಗೆಯ ಗಂಧವನ್ನೂ ಮರೆಸುವಷ್ಟು ಮಾದಕ ಮತ್ತು ಪವಿತ್ರ.
ನೀನು ನಡೆಯುವ ದಾರಿ ಸುಂದರವಾದ ಕಾವ್ಯದ ಸಾಲುಗಳಂತೆ ಲಯಬದ್ಧವಾಗಿರುತ್ತದೆ. ನಿನ್ನ ಪ್ರತಿ ಹೆಜ್ಜೆಯಲ್ಲೂ ಒಂದು ಅಪರೂಪದ ಗಾಂಭೀರ್ಯ ಮತ್ತು ಹೆಣ್ಣಿನ ಸಹಜ ನಯನ ಮನೋಹರ ಗುಣ ಎದ್ದು ಕಾಣುತ್ತದೆ. ಜಗತ್ತಿನ ಎಲ್ಲಾ ಆಭರಣಗಳಿಗಿಂತ ನಿನ್ನ ನಾಚಿಕೆಯೇ ನಿನಗೆ ಅತ್ಯಂತ ಶ್ರೇಷ್ಠವಾದ ಅಲಂಕಾರವಾಗಿದೆ.
ನಿನ್ನ ಸೌಂದರ್ಯವು ಕೇವಲ ಕಣ್ಣಿಗೆ ಕಾಣುವ ರೂಪವಲ್ಲ; ಅದು ನನ್ನ ಮನವನ್ನು ಮುಟ್ಟುವ
ಹೃದಯವನ್ನು ತಟ್ಟುವ ದಿವ್ಯ ಚೇತನದಂತಿದೆ.
ಯಾವ ಜನ್ಮದ ಪುಣ್ಯವೋ ಏನೋ ನೀನು ನನ್ನ ಆಪ್ತಸಖಿ ಆದೆ. ಆ ಗೆಳೆತನ ಪ್ರೀತಿಗೆ ತಿರುಗಿತ್ತು. ನೀನು ಮಾತನಾಡುತ್ತಾ ಕೈಸನ್ನೆ ಮಾಡುವಾಗ, ನಿನ್ನ ಕೈಬೆರಳಿನ ಉಂಗುರ ಮಿನುಗುತ್ತಿದ್ದ ಆ ಕ್ಷಣಕ್ಕೆ ನನ್ನ ಹೃದಯ ಸೋತು ಹೋಗಿತ್ತು. ನಾವಿಬ್ಬರೂ ಜೊತೆಯಾಗಿ ರಸ್ತೆ ದಾಟುವಾಗ, ಹಠಾತ್ತನೆ ಬಂದ ವಾಹನಕ್ಕೆ ಹೆದರಿ ನೀನು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಆ ಕ್ಷಣ ನೆನಪಿದೆಯೇ? ನಿನ್ನ ಕೈಬೆರಳುಗಳ ಬೆಚ್ಚಗಿನ ಸ್ಪರ್ಶ ನನ್ನ ನರನಾಡಿಗಳಲ್ಲಿ ಹೊಸ ಸಂಚಲನ ಮೂಡಿಸಿತ್ತು. ಅದು ಕೇವಲ ಒಂದು ಕ್ಷಣದ ಸ್ಪರ್ಶವಾಗಿರಲಿಲ್ಲ, ಇಡೀ ಜನ್ಮಕ್ಕೆ ಸಾಕಾಗುವಷ್ಟು ಪ್ರೀತಿಯ ಭರವಸೆಯಾಗಿತ್ತು.
ಮತ್ತೊಂದು ಮಧುರ ನೆನಪೆಂದರೆ ಕಾಲೇಜಿನಿಂದ ಮರಳಿ ಬರುವಾಗ ಆ ಸಂಜೆಯ ಬಸ್ ಪ್ರಯಾಣ. ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತು, ಒಂದೇ ಇಯರ್ಫೋನ್ ಹಂಚಿಕೊಂಡು ನಮ್ಮಿಬ್ಬರಿಗೂ ಇಷ್ಟವಾದ ಮಧುಮಾಸ ಚಂದ್ರಮ ಕಣ್ಣಿಗದು ಭೂಷಣ ಎನ್ನುವ ಹಳೆಯ ಕನ್ನಡ ಹಾಡನ್ನು ಕೇಳುತ್ತಿದ್ದೆವು. ಗಾಳಿಗೆ ನಿನ್ನ ಕೂದಲ ಸುವಾಸನೆ ನನ್ನ ಮುಖಕ್ಕೆ ಸೋಕಿದಾಗ, ಈ ಜಗತ್ತಿನ ಎಲ್ಲಾ ಗದ್ದಲಗಳೂ ನಿಂತುಹೋದಂತೆ ಭಾಸವಾಗಿತ್ತು. ನೀನು ನನ್ನ ಹೆಗಲ ಮೇಲೆ ಮೆಲ್ಲನೆ ತಲೆಯಿಟ್ಟು ಕಣ್ಣು ಮುಚ್ಚಿದಾಗ, ನನ್ನ ಉಸಿರಾಟದ ವೇಗ ಹೆಚ್ಚಾಗಿತ್ತು. ಆ ಕ್ಷಣದಲ್ಲಿ ಕಾಲ ಹಾಗೇ ನಿಂತುಬಿಡಲಿ ಎಂದು ಮನಸ್ಸು ತೀವ್ರವಾಗಿ ಬಯಸಿತ್ತು. ಅದು ಅತಿಯಾದ ಪ್ರೀತಿಯಲ್ಲ, ಎರಡು ಮನಸ್ಸುಗಳ ನಡುವಿನ ಮೌನ, ಮಧುರ ಸಂವಾದವಾಗಿತ್ತು.

ನಿನ್ನ ಕಣ್ಣುಗಳಲ್ಲಿ ನನಗಾಗಿ ಮಿನುಗುವ ಆ ಪ್ರೀತಿ, ನಿನ್ನ ಆ ಮುಗ್ಧ ನಗು ನನ್ನ ಬದುಕಿನ ಎಲ್ಲಾ ನೋವುಗಳನ್ನು ಮರೆಸುವ ಸಂಜೀವಿನಿ. ಹತ್ತಿರ ಕುಳಿತಾಗ ನೀನು ನಾಚಿ ಕೆಂಪಾಗುವ ಆ ಕೆನ್ನೆಗಳು, ಏನನ್ನೋ ಹೇಳಲು ಹೊರಟು ತಡಕಾಡುವ ನಿನ್ನ ಮಾತುಗಳು—ಇವೆಲ್ಲವೂ ನನ್ನ ಹೃದಯದಲ್ಲಿ ಎಂದಿಗೂ ಅಳಿಯದ ಸುಂದರ ಲಹರಿಗಳು. ನೀನು ದೂರವಿದ್ದರೂ, ನಿನ್ನ ನೆನಪುಗಳೇ ನನ್ನನ್ನು ಮುನ್ನಡೆಸುವ ಬೆಳಕು. ಈ ಸುಂದರ ನೆನಪುಗಳ ಸುರುಳಿಯಲ್ಲಿ ನಾನು ಎಂದಿಗೂ ನಿನ್ನ ಪ್ರೀತಿಯ ಕೈದಿಯಾಗಿಯೇ ಇರಲು ಬಯಸುತ್ತೇನೆ.
ನಮ್ಮ ನಡುವಿನ ಪ್ರೀತಿ ಎಂದಿಗೂ ಆರ್ಭಟದ ಕಡಲಾಗಿರಲಿಲ್ಲ; ಅದು ಕಲ್ಲಿನ ಸಂದಿನಿಂದ ಸದ್ದಿಲ್ಲದೆ ಹರಿಯುವ ತಿಳಿ ತೊರೆಯಂತೆ ನವಿರಾದದ್ದು. ದೊಡ್ಡ ಮಾತುಗಳಿಲ್ಲದೆ, ಕೇವಲ ಕಣ್ಣುಗಳಲ್ಲೇ ಕವಿತೆ ಓದುವ ಕಲೆ ನಮಗೆ ಒಲಿದಿತ್ತು. ಆ ಸಂಜೆ ನಾವಿಬ್ಬರೂ ಹಳೆಯ ಬೇವಿನ ಮರದ ಕೆಳಗಿನ ಬೆಂಚಿನ ಮೇಲೆ ಕುಳಿತಾಗ, ನಮ್ಮ ನಡುವೆ ಯಾವ ಮಾತುಗಳೂ ಇರಲಿಲ್ಲ. ಆದರೆ, ಆ ಮೌನದಲ್ಲೂ ಒಂದು ಅದ್ಭುತವಾದ ನಾದವಿತ್ತು.ನನ್ನ ಬಲಗೈ ನಿನ್ನ ಎಡಗೈ ಬೆರಳುಗಳನ್ನು ಮೆಲ್ಲನೆ ಸ್ಪರ್ಶಿಸಿದ ಆ ಕ್ಷಣ ಇಂದಿಗೂ ನನ್ನ ಎದೆಯೊಳಗೆ ಕಂಪನ ಸೃಷ್ಟಿಸುತ್ತದೆ. ನಿನ್ನ ರೇಷ್ಮೆಯಂತಹ ಮೃದುವಾದ ಹಸ್ತವನ್ನು ನನ್ನ ಕೈಯೊಳಗೆ ತೆಗೆದುಕೊಂಡಾಗ, ನಿನ್ನ ಮುಖದಲ್ಲಿ ಮೂಡಿದ ಆ ಸಣ್ಣ ನಾಚಿಕೆ ಜಗತ್ತಿನ ಅತ್ಯಂತ ಸುಂದರ ದೃಶ್ಯವಾಗಿತ್ತು. ನೀನು ನಿನ್ನ ತಲೆಯನ್ನು ನನ್ನ ಹೆಗಲ ಮೇಲೆ ಇಟ್ಟಾಗ, ನಿನ್ನ ಕೂದಲಿನಿಂದ ಸೂಸಿದ ಆ ಮಲ್ಲಿಗೆಯ ಗಂಧ ನನ್ನ ಉಸಿರನ್ನು ಆವರಿಸಿಕೊಂಡಿತು. ಆ ಕ್ಷಣ ನಮ್ಮ ಉಸಿರಾಟದ ಲಯ ಒಂದೇ ಆಗಿತ್ತು. ನನ್ನ ಶರ್ಟಿನ ಗುಂಡಿಯನ್ನು ಸುಮ್ಮನೆ ತಿರುಗಿಸುತ್ತಾ ನೀನು ಪಿಸುಮಾತಿನಲ್ಲಿ ಏನೋ ಹೇಳಲು ಹೋದಾಗ, ನಿನ್ನ ತುಟಿಗಳ ಮೇಲಿದ್ದ ಆ ಸಣ್ಣ ಮುಗುಳ್ನಗೆ ನನ್ನನ್ನು ಸಂಪೂರ್ಣವಾಗಿ ಮಂತ್ರಮುಗ್ಧನನ್ನಾಗಿಸಿತ್ತು.
ತಂಗಾಳಿಯು ನಿನ್ನ ಮುಂಗುರುಳನ್ನು ನಿನ್ನ ಮುಖದ ಮೇಲೆ ತಂದಾಗ, ನಾನು ನನ್ನ ಬೆರಳುಗಳಿಂದ ಅದನ್ನು ನಿನ್ನ ಕಿವಿಯ ಹಿಂದೆ ಸರಿಸಿದ ಆ ಒಂದು ಸೆಕೆಂಡಿನ ಸ್ಪರ್ಶ—ಅದು ಕೇವಲ ದೈಹಿಕ ಸ್ಪರ್ಶವಾಗಿರಲಿಲ್ಲ; ಎರಡು ಮನಸ್ಸುಗಳು ಪರಸ್ಪರ ಅಪ್ಪಿಕೊಂಡ ದಿವ್ಯ ಕ್ಷಣವಾಗಿತ್ತು.ನಮ್ಮ ನಡುವಿನ ಪ್ರಣಯವು ನಿಗೂಢವಾದ ಕಾವ್ಯದಂತೆ ಸುಂದರ.
ನೀನು ನನ್ನ ಕಣ್ಣುಗಳನ್ನು ನೇರವಾಗಿ ನೋಡಿ, ಏನನ್ನೂ ಹೇಳದೆ ಕೇವಲ ಒಂದು ನಿಟ್ಟುಸಿರು ಬಿಟ್ಟಾಗ, ಆ ನಿಟ್ಟುಸಿರಿನಲ್ಲೂ ನನಗಾಗಿ ಕಾದಿರಿಸಿದ ಪ್ರೀತಿಯ ಸಾಮ್ರಾಜ್ಯವೇ ಕಾಣಿಸುತ್ತಿತ್ತು. ಇಂತಹ ಸಣ್ಣ, ನವಿರಾದ ಮತ್ತು ಪವಿತ್ರವಾದ ಕ್ಷಣಗಳೇ ನಮ್ಮ ಪ್ರೀತಿಯನ್ನು ಕಾಲಾತೀತವಾಗಿ ಇರಿಸಿವೆ.
ಈಗ ನಮ್ಮಿಬ್ಬರಿಗೂ ವಿವಾಹ ಬಂಧನದಲ್ಲಿ ಒಂದಾಗಿ ಹೊಸ ಜೀವನಕ್ಕೆ
ಮುನ್ನುಡಿ ಬರೆಯುವಷ್ಟು ಪ್ರಾಯವಾಗಿದೆ. ಮನೆಯಲ್ಲಿ ಜೋಡಿ ಹುಡುಕಲು ಮುಂದಾಗಿದ್ದಾರೆ. ನೀನೇ ಪ್ರಾಣಸಖಿ ಬಾಳಸಖಿ ಹಾಗಂತ ನೀನೂ ಒಪ್ಪಿಯಾಗಿದೆ. ಅಪ್ರಾಪ್ತ ವಯಸ್ಸಿನಲ್ಲಿ ಊರು ಬಿಟ್ಟು ದೂರ ಹೋಗಿ
ತಂದೆ ತಾಯಿ ಮನಸ್ಸು ನೋಯಿಸಿ ಒಂದಾದರೆ ಸುಖವಿಲ್ಲ ಎಂದು ಬುದ್ಧಿ ಹೇಳಿದ ಸುಮತಿ ನೀನು.
ಈಗ ಮದುವೆಯ ಮಮತೆಯ ಕರೆಯೋಲೆ ಹಂಚಿಯಾಗಿದೆ. ಇನ್ನೇನು ಎರಡು ದಿನದಲ್ಲಿ ನಾವಿಬ್ಬರು ಜೋಡಿ ಹಕ್ಕಿಗಳು. ಪ್ರತಿ ರಾತ್ರಿ ಪ್ರಥಮ ರಾತ್ರಿಯಾಗಿಸಲು ಮಧುಮಾಸ ಚಂದ್ರಮ ಹಾಡು ಹಾಡುತ್ತ ನಿನ್ನ ತುಟಿಯಂಚಿನ ಮಧು ಹೀರಲು ತುದಿಗಾಲಲ್ಲಿ ಕಾದಿರುವೆ.
ಬಂದು ಬಿಡು ಸುಮತಿ
ಇತಿ ನಿನ್ನ ಪ್ರಾಣಸಖ
ಪ್ರೇಮ


