ತಂದೆಯ ಸಾವಿನ ಹಿಂದೆ ಹಿರಿಯ ಪುತ್ರಿಯ ಕೈವಾಡದ ಶಂಕೆ | ಮೃತನ ಕಿರಿಯ ಪುತ್ರಿಯಿಂದ ದೂರು ದಾಖಲು | ಮೃತನ ಹಿರಿಯ ಪುತ್ರಿ ಹಾಗೂ ಆಕೆಯ ಪರಿಚಿತ ವ್ಯಕ್ತಿ ಪೊಲೀಸರು ವಶಕ್ಕೆ
ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ: ಶಂಕರ್ ಎಸ್ ಬಿ
ಇಂಡಿ: ಭಾನುವಾರ ಕೊಲೆಯಾದ ನಿವೃತ್ತ ಶಿಕ್ಷಕ ಸಿದ್ದಪ್ಪ ಬಸಪ್ಪ ಅಂಜುಟಗಿ (62) ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಇದೀಗ ಮತ್ತಷ್ಟು ತಿರುವು ಪಡೆದುಕೊಂಡಿದೆ. ಮೃತನ ಹತ್ಯೆಯ ಹಿಂದೆ ಹಿರಿಯ ಪುತ್ರಿ ಪ್ರಿಯಾಂಕಾ ಅವರ ಕೈವಾಡವಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮೃತನ ಹಿರಿಯ ಪುತ್ರಿ ಪ್ರಿಯಾಂಕಾ (30) ಹಾಗೂ ಆಕೆಯೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದರು ಎನ್ನಲಾಗಿರುವ ಸಂತೋಷ ಸಿಂಧೆ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಿದ್ದಪ್ಪ ಅಂಜುಟಗಿ ಅವರು ನಿವೃತ್ತ ಶಿಕ್ಷಕರಾಗಿದ್ದು, ಅವರ ಮೃತದೇಹ ಬೆಡ್ಶೀಟ್ನಲ್ಲಿ ಸುತ್ತಿದ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ತಲೆ ಹಾಗೂ ಎದೆ ಭಾಗಕ್ಕೆ ಬಲವಾದ ಹೊಡೆತ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಕಿರಿಯ ಪುತ್ರಿಯಿಂದ ದೂರು
ಮೃತ ಸಿದ್ದಪ್ಪ ಅವರ ಎರಡನೇ ಪುತ್ರಿ ನಿಖಿತಾ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿರುವ ಅಂಶಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
ಮೃತರ ಹಿರಿಯ ಪುತ್ರಿ ಪ್ರಿಯಾಂಕಾ ಅವರ ಪತಿ ಸುರೇಶ ಮಸಳಿ ಅವರು ಕೊರೊನಾ ಅವಧಿಯಲ್ಲಿ ಮೃತಪಟ್ಟಿದ್ದರು. ಬಳಿಕ ಪ್ರಿಯಾಂಕಾ ವಿಜಯಪುರದ ಸಂತೋಷ ಸಿಂಧೆ ಎಂಬ ವ್ಯಕ್ತಿಯೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಈ ಸಂಬಂಧಕ್ಕೆ ತಂದೆ ಸಿದ್ದಪ್ಪ ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವಿಚಾರವಾಗಿ ತಂದೆ-ಮಗಳ ನಡುವೆ ಮನಸ್ತಾಪ ಉಂಟಾಗಿತ್ತೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಸಿದ್ದಪ್ಪ ಅವರು ನಿವೃತ್ತರಾದ ಬಳಿಕ ದೊರೆತ ಹಣ ಹಾಗೂ ಕುಟುಂಬದ ಆರ್ಥಿಕ ವಿಚಾರಗಳ ಬಗ್ಗೆಯೂ ಮನೆಯಲ್ಲಿ ಭಿನ್ನಾಭಿಪ್ರಾಯವಿತ್ತು ಎನ್ನಲಾಗುತ್ತಿದೆ. ನಿವೃತ್ತಿ ಹಣದ ಬಳಕೆ ವಿಚಾರದಲ್ಲಿ ಕುಟುಂಬದೊಳಗೆ ಅಸಮಾಧಾನ ಇತ್ತೇ ಎಂಬ ಅಂಶವನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ತಂದೆಯ ವಿರೋಧ, ಕುಟುಂಬದೊಳಗಿನ ಮನಸ್ತಾಪ, ಹಣಕಾಸಿನ ವಿಚಾರ ಹಾಗೂ ಪುತ್ರಿಯ ವೈಯಕ್ತಿಕ ಸಂಬಂಧ—ಈ ಎಲ್ಲಾ ಅಂಶಗಳು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿವೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಸದ್ಯ ಪೊಲೀಸರು ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದ್ದು, ವಿಚಾರಣೆ ಹಾಗೂ ಮುಂದಿನ ಪೊಲೀಸ್ ಮತ್ತು ನ್ಯಾಯಾಂಗ ಪ್ರಕ್ರಿಯೆಯಿಂದಲೇ ಪ್ರಕರಣದ ನಿಜಾಂಶ ಹೊರಬರಬೇಕಿದೆ.
ತಂದೆಯ ವಿರೋಧವೇ ಕೊಲೆಗೆ ಕಾರಣವಾಯಿತೇ?
ಒಬ್ಬ ನಿವೃತ್ತ ಶಿಕ್ಷಕರ ಅನುಮಾನಾಸ್ಪದ ಸಾವು ಇದೀಗ ಕುಟುಂಬದೊಳಗಿನ ಸಂಬಂಧಗಳತ್ತ ತನಿಖೆಯ ಕಣ್ಣು ತಿರುಗುವಂತೆ ಮಾಡಿದೆ. ಆದರೆ ಆರೋಪಗಳು ಇನ್ನೂ ತನಿಖಾ ಹಂತದಲ್ಲಿದ್ದು, ಅಂತಿಮ ಸತ್ಯ ಪೊಲೀಸ್ ತನಿಖೆ ಹಾಗೂ ನ್ಯಾಯಾಲಯದ ಪ್ರಕ್ರಿಯೆಯಿಂದಲೇ ನಿರ್ಧಾರವಾಗಬೇಕಿದೆ.

ಇಬ್ಬರು ಪೊಲೀಸ್ ವಶಕ್ಕೆ
ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ ಪ್ರಿಯಾಂಕಾ ಹಾಗೂ ಸಂತೋಷ ಸಿಂಧೆ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿ ರಸ್ತೆ ಬದಿಯಲ್ಲಿ ಎಸೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹತ್ಯೆ ಬೇರೆಡೆ ನಡೆದ ಬಳಿಕ ಮೃತದೇಹವನ್ನು ಇಲ್ಲಿಗೆ ತಂದು ಎಸೆಯಲಾಗಿದೆಯೇ? ಹತ್ಯೆಗೆ ಬಳಸಿದ ವಸ್ತು ಯಾವುದು? ಘಟನೆಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕಿರಿಯ ಮಗಳು ನೀಡಿದ ದೂರಿನ ಆಧಾರದ ಮೇಲೆ ಮೃತನ ಹಿರಿಯ ಪುತ್ರಿ ಪ್ರಿಯಾಂಕಾ ಹಾಗೂ ಸಂತೋಷ ಸಿಂಧೆ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.”
– ಪ್ರದೀಪ ಭಿಸೆ
ಸಿಪಿಐ, ಶಹರ ಪೊಲೀಸ್ ಠಾಣೆ, ಇಂಡಿ

