ಕ್ಲೋಜರ್ ಕಾಮಗಾರಿಗೆ ಅನುದಾನ ನೀಡಿ | ಜಿಲ್ಲೆಯ ಎಲ್ಲಾ ಕಾಲುವೆ ಸ್ವಚ್ಛಗೊಳಿಸಿ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಸಲು ಆಗ್ರಹ
ವಿಜಯಪುರ: ಜಿಲ್ಲೆಯಲ್ಲಿ ಎಲ್ಲಾ ಏತನೀರಾವರಿ ಕಾಲುವೆಗಳಲ್ಲಿ ಹುಳು ತುಂಬಿ ಕಂಠಿಗಳು ಬೆಳೆದು ನೀರು ಮುಂದೆ ಹೋಗದಂತಾಗಿದೆ, ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು, ಕಳೆದ ೨ ವರ್ಷಗಳಿಂದ ಈ ಕೆಲಸಗಳಿಗೆ ಅನುದಾನ ಇಲ್ಲವೆಂದು ಎಲ್ಲಾ ಕಾಲುವೆಗಳಲ್ಲಿ ಸ್ವಚ್ಚತೆ ಮಾಡದೇ ಹಾಗೆ ಬಿಟ್ಟಿರುತ್ತಾರೆ, ಕೆಲವು ಕಡೆ ರೈತರೆ ಸ್ವತಃ ಹಣ ಖರ್ಚು ಮಾಡಿ ಸ್ವಚ್ಚತೆ ಮಾಡಿರುವುದು ಇದೆ ಎಂದು ಕೃಷ್ಣಾ ಜಲ ಭಾಗ್ಯ ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ಮೋಹನರಾಜ ಅವರಿಗೆ ಬೆಂಗಳೂರಿನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿ, ಈ ವರ್ಷವಾದರೂ ಎಲ್ಲಾ ಕಾಲುವೆಗಳನ್ನು ಮಳೆಗಾಲದಲ್ಲಿ ಆಣೆಕಟ್ಟಿನಿಂದ ನೀರು ಬಿಡುವ ಮುಂಚಿತವಾಗಿ ಸ್ವಚ್ಚತೆ ಮಾಡಬೇಕೆಂದು ಮತ್ತು ಅದಕ್ಕೆ ಅವಶ್ಯಕವಾದ ಹಣವನ್ನು ಪ್ರತಿವರ್ಷ ತೆಗೆದಿಡಬೇಕು. ಹಾಗೆ ಟೆಂಡರ್ ಕರೆದ ಎಸ್ಟಿಮೆಂಟ್ ಮೊತ್ತದಲ್ಲಿ ಶೇ.೬೫ ಕ್ಕಿಂತ ಕಡಿಮೆ ಹಣದಲ್ಲಿ ಕೆಲಸ ಮಾಡಲು ಗುತ್ತಿಗೆದಾರರು ಮುಂದೆ ಬರುತ್ತಾರೆ, ಆದು ಹೇಗೆ ಸಾಧ್ಯವಾಗಲು ಸಾಧ್ಯ, ಅವರು ನಾಲ್ಕು ದುಡ್ಡು ಉಳಿಸಲು ಕ್ಲೋಜರ್ ಕಾಮಗಾರಿಯೂ ಸಂಪೂರ್ಣ ಮಾಡಲು ಸಾಧ್ಯವಾಗದೇ ಕಳಪೆಯಿಂದ ಮಾಡಿ ಸರಕಾರಕ್ಕೆ ಹಾಗೂ ರೈತರಿಗೆ ಮೊಸ ಮಾಡುತ್ತಿರುತ್ತಾರೆ. ಆದ್ದರಿಂದ ಈ ರೀತಿ ಆಗದಂತೆ ಕ್ರಮ ಜರುಗಿಸಬೇಕು, ಪ್ರತಿವರ್ಷ ಜಿಲ್ಲೆಯ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತಾಗಬೇಕು ಎಂದರು.
ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ, ಸಂತೋಷ ಪೂಜಾರಿ ಸೇರಿದಂತೆ ಇತರರು ಇದ್ದರು.

