ಬಸವನಬಾಗೇವಾಡಿ: ಪಟ್ಟಣದಲ್ಲಿ ಕಳೆದ ಐದು ವಾರದಿಂದ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಗ್ರಾಮದೇವತೆಗೆ (ದ್ಯಾಮವ್ವದೇವಿ) ಹಿಡಿದ ವಾರದ ವಾರದ ಕೊನೆಯ ದಿನ ಮಂಗಳವಾರ ಜನರು ಶ್ರದ್ದಾ ಭಕ್ತಿಯಿಂದ ಉಡಿತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಮಹಿಳೆಯರು ತಮ್ಮ ಮಕ್ಕಳು, ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಯಿ, ಕರ್ಪೂರ, ಜೋಳದ ಕಡಬು, ಹೂರಣದ ಕಡಬು ಸೇರಿದಂತೆ ವಿವಿಧ ನೈವೇದ್ಯ, ಬಾಳೆಹಣ್ಣು, ಉಡಕ್ಕಿ ಸಾಮಾನುಗಳೊಂದಿಗೆ ಗ್ರಾಮದೇವಿಯ ದೇವಸ್ಥಾನಕ್ಕೆ ಆಗಮಿಸಿ ಗ್ರಾಮದೇವಿ ದರ್ಶನ ಪಡೆದು ದೇವಿಗೆ ಉಡಿ ತುಂಬಿ ತಮ್ಮ ಭಕ್ತಿ ಸಮರ್ಪಿಸುವುದು ಕಂಡುಬಂದಿತು.
ಪಟ್ಟಣದ ಗ್ರಾಮದೇವತೆ (ದ್ಯಾಮವ್ವದೇವಿ)ಯ ಉಡಿ ತುಂಬುವ ಕಾರ್ಯಕ್ರಮದಂಗವಾಗಿ ಸಂಜೆ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನದಿಂದ ಬಸವೇಶ್ವರ ಭಾವಚಿತ್ರದೊಂದಿಗೆ ಗ್ರಾಮದೇವಿಗೆ ಸೀರೆ-ಕುಪ್ಪಸ, ಬಾಳೆಹಣ್ಣು, ಉಡಿ ತುಂಬುವ ಸಾಮಾನುಗಳನ್ನು ದೈವಮಂಡಳಿಯು ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಗ್ರಾಮದೇವಿ ದೇವಸ್ಥಾನಕ್ಕೆ ತಂದಿತ್ತು. ನಂತರ ದೇವಸ್ಥಾನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಗ್ರಾಮದೇವಿಗೆ ವಿಶೇಷ ಪೂಜೆ ನೆರವೇರಿಸಿ ಉಡಿ ತುಂಬಿ ನಾಡಿಗೆ ಉತ್ತಮ ಮಳೆ-ಬೆಳೆ ನೀಡಿ ಎಲ್ಲ ಜನರನ್ನು ಸುಖ-ಸಂತೋಷ-ನೆಮ್ಮದಿಯಿಂದ ಇಡುವಂತೆ ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಕರ್ಪೂರದ ಆರತಿಯೊಂದಿಗೆ ಜನರು ದೇವಿಗೆ ನಮನ ಸಲ್ಲಿಸಿದರು. ದೇವಸ್ಥಾನದಲ್ಲಿ ಸುಮಂಗಲೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಯಿತು.
ಬಹುತೇಕ ಎಲ್ಲ ಗ್ರಾಮಗಳಲ್ಲಿ ಮುಂಗಾರು ಮಳೆ ಆರಂಭವಾಗುವ ಮುನ್ನ ಜನರು ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಗ್ರಾಮದೇವಿಗೆ ವಾರ ಹಿಡಿಯುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಐದು ವಾರ ಹಿಡಿದು ಕೊನೆ ವಾರದ ದಿನದಂದು ಗ್ರಾಮದೇವತೆಗೆ ಉಡಿ ತುಂಬಿ ಮಳೆ,ಬೆಳೆ ಉತ್ತಮವಾಗಿ ಬರಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸುತ್ತಾರೆ ಎಂದು ಹಿರಿಯರಾದ ಬಸವರಾಜ ಹಾರಿವಾಳ ಹೇಳಿದರು.
ಗ್ರಾಮದೇವತೆಯ ಉಡಿ ತುಂಬುವ ಕಾರ್ಯಕ್ರಮದಲ್ಲಿ ಶಿವಾನಂದ ಈರಕಾರಮುತ್ಯಾ, ಚಂದ್ರಶೇಖರ ಮುರಾಳ, ಬಸವರಾಜ ಹಾರಿವಾಳ, ವಿರುಪಾಕ್ಷಿ ನಿಡಗುಂದಿ, ರಾಯಣ್ಣ ಮಸಬಿನಾಳ, ಸುರೇಶ ಚಿಂಚೋಳಿ, ಗೌಡಪ್ಪ ಮಸಬಿನಾಳ, ಮಂಜುನಾಥ ಬಡಿಗೇರ, ಮುದುಕು ಬಸರಕೋಡ, ದಯಾನಂದ ಸಾರವಾಡ, ಸಿದ್ದು ಅವಟಿ, ಮುದಕಣ್ಣ ಅವಟಿ, ಡಾ. ಎಸ್.ಆರ್.ಮಠ, ಡಾ.ಎಸ್.ಎಸ್.ಪುರಾಣಿಕಮಠ, ಜಗದೀಶ ಪಾಟೀಲ, ಸಂತೋಷ ಮಸಬಿನಾಳ, ಬಸವರಾಜ ಅವಟಿ, ಬಾಬು ನಿಡಗುಂದಿ, ಗಾಯತ್ರಿ ಬಡಿಗೇರ, ಶೈಲಾ ನಿಡಗುಂದಿ, ಅನ್ನಕ್ಕ ಅವಟಿ, ವಿಜಯಲಕ್ಷ್ಮೀ ನಿಡಗುಂದಿ, ಸುಮಾ ಅವಟಿ, ಜಯಶ್ರೀ ಚಿಂಚೋಳಿ, ಲಲಿತಾ ಅವಟಿ, ರೂಪಾ ಸಾರವಾಡ, ಶಿವಲೀಲಾ ಪಟ್ಟಣಶೆಟ್ಟಿ, ರಾಚಮ್ಮ ಮಸಬಿನಾಳ ಇತರರು ಇದ್ದರು. ರಾತ್ರಿ ಬಂಡಿಗೆರೆಯ ಬಸವೇಶ್ವರ ನಾಟ್ಯ ಸಂಘದಿಂದ ದುಡ್ಡು ದಾರಿ ಬಿಡಿಸಿತು ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಯಿತು.
Subscribe to Updates
Get the latest creative news from FooBar about art, design and business.
ಉತ್ತಮ ಮಳೆ-ಬೆಳೆಗಾಗಿ ಗ್ರಾಮದೇವತೆಗೆ ಉಡಿ ತುಂಬಿದ ಗ್ರಾಮಸ್ಥರು
Related Posts
Add A Comment

