ಮುದ್ದೇಬಿಹಾಳ: ಪಟ್ಟಣದಲ್ಲಿ ರವಿವಾರ ಸದ್ದು ಮಾಡಿದ್ದ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾದ ಪ್ರಕರಣದ ಹಿಂದೆ ಪ್ರೇಮ್ ಕಹಾನಿ ಇರೋದು ಖಚಿತವಾಗಿದೆ.
ರಾಹುಲ್ ಬಿರಾದಾರ ಮತ್ತು ಐಶ್ವರ್ಯ ಮದರಿ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೋ “ಉದಯರಶ್ಮಿ” ಗೆ ಲಭ್ಯವಾಗಿದ್ದು ಫೋಟೋಗಳಲ್ಲಿ ಇವರಿಬ್ಬರೂ ಸಲುಗೆಯಿಂದಿರೋದು ಸಾಬೀತಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಇವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದು ಇವರ ಪ್ರೀತಿಗೆ ಮನೆಯವರು ಅಡ್ಡಿಯಾಗಿದ್ದಾರೆ ಎನ್ನಲಾಗಿದೆ. ಮೊದಲು ಪ್ರೀತಿಸಿ ಏಕಾಏಕಿ ನಿರಾಕರಿಸಿದ ಐಶ್ವರ್ಯಳ ಪ್ರೀತಿ ಮರು ಪಡೆಯಬೇಕು ಮತ್ತು ಆಕೆಯನ್ನ ಮದುವೆಯಾಗಬೇಕು ಎಂದು ರಾಹುಲ್ ಸಾಕಷ್ಟು ಪ್ರಯತ್ನಿಸಿದ್ದಾನೆ. ಮನೆ ಎದುರೆಲ್ಲ ಹುಚ್ಚನಂತೆ ಬೈಕ್ ಒದರಿಸುತ್ತ ಓಡಾಡಿದ್ದಾನೆ. ಯಾವುದೂ ಪ್ರಯೋಜನಕ್ಕೆ ಬಾರದಿದ್ದಾಗ ಮೊಬೈಲ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ.
ಜೊತೆಗಿರುವ ಫೋಟೋಗಳು ಆಚೆ ಹೋದರೆ ಏಶ್ವರ್ಯಳ ಭವಿಷ್ಯಕ್ಕೆ ಸಮಸ್ಯೆಯಾಗುತ್ತದೆ ಎಂದು ಅರಿತ ಆಕೆಯ ಮನೆಯವರು ಬುದ್ದಿವಾದ ಹೇಳಲು ಮುಂದಾಗಿದ್ದು, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಸತ್ಯಾ ಸತ್ಯತೆಯ ಹಿಂದೆ ಬೆನ್ನಟ್ಟಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಎಡಿಷನಲ್ ಎಸ್.ಪಿ. ಎಸ್.ಕೆ.ಮಾರಿಹಾಳ, ಡಿವಾಯ್ಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಸಂಜೀವ ತಿಪರೆಡ್ಡಿ ಮತ್ತು ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಾಕ್ಷಗಳ ಕಲೆ ಹಾಕುತ್ತಿದ್ದಾರೆ. ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು ಪೆಟ್ರೋಲ್ ಬಾಟಲಿ ಸೇರಿದಂತೆ ಇನ್ನೀತರ ವಸ್ತುಗಳ ಬೆರಳಚ್ಚು ಮಾದರಿ ಪಡೆದಿರುವದಾಗಿ ಮೂಲಗಳು ತಿಳಿಸಿವೆ.
ಇತ್ತ ವಿಜಯಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಹುಲ್ನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕುಟುಂಬದವರು ಕರೆದೊಯ್ದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ರಾಹುಲ್ ನ ತಂದೆ ರಾಮನಗೌಡರು ದೇಹದ ಶೇ೬೦ ಭಾಗದಷ್ಟು ಗಾಯಗಳಾಗಿವೆ. ಘಟನೆಗೆ ಹುಡುಗಿಯೇ ಸಂಪೂರ್ಣ ಕಾರಣ ಇದ್ದು ಅವರ ಮನೆಯವರು ನಮ್ಮ ಮಗನ ಮೇಲೆ ದೂರಿದ್ದಾರೆ. ನನ್ನ ಮಗ ಆಕೆಯನ್ನು ಬಿಟ್ಟರೂ ಆ ಹುಡುಗಿ ಬಿಟ್ಟಿಲ್ಲ. ಈ ಬಗ್ಗೆ ಎಲ್ಲ ದಾಖಲೆಗಳು ಅವನ ಮೊಬೈಲ್ ನಲ್ಲಿವೆ. ಆ ಮೊಬೈಲನ್ನು ಘಟನೆಯ ದಿನ ಹುಡುಗಿಯ ಮನೆಯವರು ಕಸಿದುಕೊಂಡಿದ್ದು ಅದರ ತನಿಖೆ ನಡೆಯಬೇಕು ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ನ ತಂದೆ ರಾಮಗೌಡರು ನೀಡಿದ ದೂರಿನಲ್ಲಿ ೬ ನೇ ಆರೋಪಿಯನ್ನಾಗಿ ಕಿರಣ ಮದರಿಯನ್ನ ಸೇರಿಸಲಾಗಿತ್ತು. ರಾಹುಲ್ನಿಗೆ ಪ್ರಜ್ಞೆ ಬಂದಾಗ ವಿಚಾರಿಸಲಾಗಿ ಘಟನೆಯಲ್ಲಿ ಆತ ಇಲ್ಲದಿರುವದಾಗಿ ತಿಳಿಸಿದ್ದರಿಂದ ಆತನನ್ನು ಪ್ರಕರಣದಿಂದ ಕೈಬಿಡುವಂತೆ ಪೊಲೀಸರಿಗೆ ತಿಳಿಸಿರುವದಾಗಿ ಹೇಳಿದ್ದಾರೆ.

