ರೇವತಗಾಂವದಲ್ಲಿ ಕುಂಭ-ಕಳಶಗಳೊಂದಿಗೆ ಕಾಶಿ ಜಗದ್ಗುರುಗಳ ಸಾರೋಟ ಉತ್ಸವ
ಚಡಚಣ: ಮಾನಸಿಕ ನೆಮ್ಮದಿಯನ್ನು ನೀಡುವುದಕ್ಕಾಗಿಯೇ ಜಗತ್ತಿನಲ್ಲಿ ಧರ್ಮಗಳ ಆವಿಷ್ಕಾರವಾಗಿದೆ. ಆದರೆ ಧರ್ಮದ ಹೆಸರಿನಿಂದಲೇ ಜನಮನದ ಶಾಂತಿಯನ್ನು ಕದಡುವ ವ್ಯರ್ಥ ಪ್ರಯತ್ನಕ್ಕೆ ಯಾರೂ ಮುಂದಾಗಬಾರದು. ನೈತಿಕ ನೆಲೆ, ಸಾಂಸ್ಕೃತಿಕ ಭಾವನೆ, ಸಾಹಿತ್ಯಿಕ ಚಿಂತನೆ ಹಾಗೂ ಅಧ್ಯಾತ್ಮಿಕ ಸ್ಪರ್ಶದಿಂದ ಬದುಕಿಗೆ ನಿರಂತರ ಪ್ರಸನ್ನತೆ ಪ್ರಾಪ್ತವಾಗುತ್ತದೆ ಎಂದು ಕಾಶಿ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಕರು ಹೇಳಿದರು.
ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಮಹಾದ್ವಾರದ ಕಳಸಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು. ಭಕ್ತಿ, ಭಾವದಿಂದ ಜಂಗಮರನ್ನು ಆರಾಧಿಸುವ ಮೂಲಕ ದೇವರ ಸ್ವರೂಪವನ್ನು ಕಾಣಬಹುದಾಗಿದೆ. ಪರಸ್ಪರ ವಿಶ್ವಾಸ ಇಲ್ಲದೆ ಮನುಷ್ಯ ಬದುಕು ಸಾಗಿಸಲು ಸಾಧ್ಯವಿಲ್ಲ. ಭೌತಿಕ ಬದುಕು ಸುಗಮವಾಗಿ ಸಾಗಲು ಮನುಷ್ಯ ಪರಸ್ಪರ ವಿಶ್ವಾಸ ಹೊಂದಬೇಕು. ಯಾವ ವ್ಯಕ್ತಿ ಸಮಾಜದ ಹಿತವನ್ನು ಬಯಸುತ್ತಾನೋ, ಅಂತಹ ವ್ಯಕ್ತಿ ಬದುಕು ಎಂದಿಗೂ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.
ಕೃಷಿಕರಿಗೆ ಕಿವಿಮಾತು: ರೈತನು ದೇಶದ ಬೆನ್ನೆಲುಬು. ರಾಸಾಯನಿಕ ಗೊಬ್ಬರ ಬಳಸಿ ಬೇಸಾಯ ಮಾಡುವಂತಹ ಪದ್ಧತಿಯನ್ನು ರೈತರು ತೋರೆಯಬೇಕು. ಬದಲಿಗೆ ಇಳುವರಿ ಹೆಚ್ಚಿಸುವ ಹಾಗೂ ಭೂಮಿ ಫಲವತ್ತತೆ ಕಾಯ್ದುಕೊಳ್ಳುವಂಥ ಸಾವಯವ ಕೃಷಿಗೆ ಮುಂದಾಗಬೇಕು.
ರಸಗೊಬ್ಬರವನ್ನು ಅತಿಯಾದ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಕೃಷಿ ಭೂಮಿ ದಿನೇ ದಿನೇ ಫಲವತ್ತತೆ ಕಳೆದುಕೊಳ್ಳುತ್ತಿದೆ. ಅಲ್ಲದೇ, ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಆಹಾರ ಇಂದು ವಿಷವಾಗುತ್ತಿದೆ. ಇಂಥ ಆಹಾರ ಸೇವಿಸಿದರೆ ಮನುಷ್ಯನ ಜೀವನ ಕ್ರಮವೇ ಬದಲಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ದೇಶದಲ್ಲಿ ಕೃಷಿಕರು ಇಲ್ಲದಿದ್ದರೇ ದೇಶವೇ ಉಪವಾಸದಿಂದ ಮಲಗಬೇಕಾಗುತ್ತದೆ ಎಂದು ಕಾಶಿ ಜಗದ್ಗುರುಗಳಾದ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು ರೈತರಿಗೆ ಕಿವಿ ಮಾತು ಹೇಳಿದರು.
ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ವಿಠ್ಠಲ ಕಟಕದೊಂಡ ಮಾತನಾಡುತ್ತ, ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ. ಇದಕ್ಕೆ ಪೂರಕವಾದ ರೂಪ-ರೇಷೆಗಳನ್ನು ಸಿದ್ಧಗೊಳಿಸಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಜಾರಿಗೊಳಿಸಲಾಗಿದ್ದು. ಇಂಥಹ ವಿವಿಧ ಜನಪರ ಯೋಜನೆಗಳ ಮೂಲಕ ಅಭಿವೃದ್ಧಿ ಸಾಧ್ಯ. ಮತಕ್ಷೇತ್ರದ ಪ್ರತಿಯೊಂದು ಗ್ರಾಮೀಣ ಪ್ರದೇಶಗಳಿಗೆ ಸಕಲ ನಾಗರಿಕ ಸೌಕರ್ಯ ಕಲ್ಪಿಸುವ ಮೂಲಕ ರಾಜ್ಯದಲ್ಲಿಯೇ ನನ್ನ ಕ್ಷೇತ್ರ ಮಾದರಿ ಗ್ರಾಮಗಳಾಗಿ ಕಂಗೊಳಿಸುವಂತೆ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಧರ್ಮಸಭೆ ಉದ್ಘಾಟಿಸಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡುತ್ತ, ನನಗೆ ಯಾವ ಪದವಿ, ಪುನಸ್ಕಾರಗಳು ಬೇಕಾಗಿಲ್ಲ. ಭಾರತವು ಬಲಿಷ್ಠ ಭಾರತವಾಗಬೇಕು. ಬಲಿಷ್ಠವಾಗಬೇಕಾದರೆ ಯುವಕರು ಶಕ್ತಿವಂತರಾಗಬೇಕು. ಇಂದಿನ ಯುವಕರು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗಿ ಶಕ್ತಿ ಹೀನರಾಗಿದ್ದಾರೆ. ಯುವಕರು ವ್ಯಸಮುಕ್ತರಾದಾಗ ಬಲಿಷ್ಠ ಭಾರತ, ಬಲಿಷ್ಠ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಗುರುವಾರದಂದು ಮಹಾದ್ವಾರದ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕಾಶಿ ಜಗದ್ಗುರುಗಳಾದ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಕರು ಸಾರೋಟ ಮಹೋತ್ಸವವು ಸುಮಂಗಲೆಯರಿಂದ ಕುಂಭ-ಕಳಸ, ಆರತಿಗಳೊಂದಿಗೆ, ವಿವಿಧ ವಾದ್ಯ ಮೇಳದವರೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನ ತಲುಪಿತು.
ನಂತರ ಜಗದ್ಗುರುಗಳಿಂದ ಮಹಾದ್ವಾರದ ಕಳಸಾರೋಹಣ ಕಾರ್ಯಕ್ರಮವು ನಡೆಯಿತು. ನಂತರ ಧರ್ಮಸಭೆ ಜರುಗಿತು.
ಈ ಧರ್ಮಸಭೆಯ ನೇತೃತ್ವ ಹಾವಿನಾಳ-ಹತ್ತಳ್ಳಿಯ ಮಹಾಸ್ವಾಮಿಗಳಾದ ಗುರುಪಾದೇಶ್ವರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ತಡವಲಗಾದ ಅಬಿನವ ರಾಜೋಟೇಶ್ವರ ಶಿವಾಚಾರ್ಯರು, ಜೈನಾಪುರದ ರೇಣುಕಾ ಶಿವಾಚಾರ್ಯರು, ಕಾರ್ಯಕ್ರಮದ ಜ್ಯೋತಿ ಬೆಳಗಿಸಿದವರು ಭೈರವನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾದೇವಸಾಹುಕಾರ ಭೈರಗೊಂಡ, ಮುಖ್ಯ ಅತಿಥಿಗಳಾಗಿ ಉದಯ ಕಾರಜೋಳ, ಕಾಶುಗೌಡ ಬಿರಾದಾರ, ಸಂಜು ಐಹೊಳ್ಳಿ, ಡಿ.ಎಲ್.ಚವ್ಹಾಣ್, ಬೀಮುಸಾಹುಕಾರ ಬಿರಾದಾರ, ಸಾಹೇಬಗೌಡ ಬಿರಾದಾರ, ಮಹಾದೇವ ಹಿರೇಕುರುಬರ, ಆರ್.ಡಿ.ಹಕ್ಕೆ, ಬಸುಸಾಹುಕಾರ ಬಿರಾದಾರ, ಸಂತೋಷಗೌಡ ಪಾಟೀಲ, ಕಲ್ಲಪ್ಪ ಉಟಗಿ, ಕಾಂತುಗೌಡ ಪಾಟೀಲ, ಹಣಮಂತ ಚಿಂಚಲಿ, ಶ್ರೀ ರೇವಣಸಿದ್ದೇಶ್ವರ ಜಾತ್ರಾ ಕಮೀಟಿ ಸದಸ್ಯರುಗಳು ಸೇರಿದಂತೆ ಗ್ರಾಪಂ ಸದಸ್ಯರುಗಳು, ಸುತ್ತ-ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಕಾರ್ಯಕ್ರಮದ ಸ್ವಾಗತ ಗುರು ಜೇವೂರ, ನಿರೂಪಣೆ ಮಕುಂದ ಅಡಕೆ ಹಾಗೂ ವಂದನಾರ್ಪಣೆಯನ್ನು ಕಾಮೇಶ ಪಾಟೀಲರು ನೆರವೇರಿಸಿದರು.

