ವಿಜಯಪುರ: ನಡೆದಾಡುವ ದೇವರೆಂದೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ ಬದುಕಿನ ಕೊನೆಯ ಗಳಿಗೆಯಲ್ಲಿ ಅವರಿಗೆ ಚಿಕಿತ್ಸೆ ನೀಡುವ ಮೂಲಕ ಭಕ್ತಿಯ ಸಮರ್ಪಣೆ ಮಾಡಿದ ವೈದ್ಯರು ಇಂದು ನಮ್ಮ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾರೆ ಎಂದರೆ ಇದು ನಿಜಕ್ಕೂ ನಮಗೆಲ್ಲ ಅಭಿಮಾನದ ವಿಷಯವಾಗುತ್ತದೆ. ಪೂಜ್ಯರ ಮಾರ್ಗದಲ್ಲಿ ಹೆಜ್ಜೆ ಹಾಕಿದರೆ ವೈದ್ಯರಿಂದ ಸಾರ್ಥಕ ಸೇವೆ ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ರಾ. ಪಾಟೀಲ್ ಯತ್ನಾಳ ಅವರು ಹೇಳಿದರು.
ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಸಿದ್ಧೇಶ್ವರ ಶಿವಾನುಭವ ಮಂಟಪದ ಪಕ್ಕದ ಸಿದ್ಧೇಶ್ವರ ಮೆಡಿಕಲ್ ಪಕ್ಕ ನೂತನವಾಗಿ ನಿರ್ಮಾಣ ಮಾಡಲಾದ ಕ್ಲೀನಿಕ್ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು; ಭಾರತದ ಎರಡನೇ ವಿವೇಕಾನಂದ ಎಂದು ಗುರುತಿಸಿಕೊಂಡಿರುವ ಪೂಜ್ಯ ಸಿದ್ಧೇಶ್ವರರು ಅನುಭಾವದ ಬದುಕನ್ನು ತೊರೆದು ಚಿರಶಾಂತಿಗೆ ತೆರಳುವ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡಿದ ಡಾ.ಸಂತೋಷ ಬಿ.ಟಿಯವರು ಇಂದು ನಮ್ಮ ಸಂಸ್ಥೆಯ ಜೆಎಸ್ಎಸ್ ಹಾಸ್ಪಿಟಲ್ಸ್ ವತಿಯಿಂದ ನಿರ್ಮಾಣ ಮಾಡಲಾಗಿರುವ ಓಪಿಡಿ ಕ್ಲೀನಿಕ್ನಲ್ಲಿ ಇದ್ದು ಸಾರ್ವಜನಿಕರಿಗೆ ನೆರವಾಗುವುದಕ್ಕೆ ಅಣಿಯಾಗಿರುವುದು ಅವರಲ್ಲಿನ ಸೇವಾ ಬದ್ಧತೆಗೆ ಸಾಕ್ಷಿ ನೀಡುತ್ತದೆ. ವೈದ್ಯನಾದವನಿಗೆ ಸೇವಾ ಮನೋಭಾವ ಇದ್ದಾಗ ಮಾತ್ರ ಅತ್ಯುತ್ತಮವಾದ ಕಾರ್ಯ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಸಿದ್ಧೇಶ್ವರ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ವೈದ್ಯಕೀಯ ಲೋಕವು ನಡೆದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಉತ್ತಮ ಆರೋಗ್ಯ ಒದಗಿಸುವುದಕ್ಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವ ನಮ್ಮ ಆಸ್ಪತ್ರೆಯು ಇಂದು ಈ ಓಪಿಡಿ ಕ್ಲೀನಿಕ್ ಪ್ರಾರಂಭಿಸುವ ಮೂಲಕ ಸಾರ್ವಜನಿಕರಿಗೆ ನೆರವಾಗುವುದಕ್ಕೆ ಸಿದ್ಧವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಅಥರ್ಗಾದ ಶಣ್ಮುಖಸ್ವಾಮಿ ಗುರುದೇವಾಶ್ರಮದ ಪೂಜ್ಯ ಶ್ರೀ ಈಶ ಪ್ರಸಾದ ಮಹಾಸ್ವಾಮಿಗಳು; ಜನರ ಸೇವೆಗೆಂದು ನಿರ್ಮಾಣವಾಗಿರುವ ಆಸ್ಪತ್ರೆ ಇಂದು ತನ್ನ ಬಾಹುವನ್ನು ವಿಸ್ತಿರಿಸಿಕೊಳ್ಳುತ್ತ ಅತ್ಯುತ್ತಮವಾದ ಸೇವೆಯನ್ನು ನೀಡುತ್ತ ಭರವಸೆಯಲ್ಲಿ ಹೆಜ್ಜೆ ಹಾಕುತ್ತಿದೆ. ಅದಕ್ಕೆ ಇಂದು ಪ್ರಾರಂಭಗೊಂಡಿರುವ ಓಪಿಡಿ ಮತ್ತೊಂದು ಗರಿಯಾಗಿದೆ. ಮುಂದಿನ ದಿನಗಳಲ್ಲಿ ಸರ್ವ ಭಾಗಗಳಲ್ಲಿ ಈ ರೀತಿಯ ಆರೋಗ್ಯ ಸೇವಾ ಕೇಂದ್ರಗಳು ಪ್ರಾರಂಭಗೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದಕ್ಕೆ ನೆರವಾಗಬೇಕು ಎಂದು ತಿಳಿಸಿದರು.
ಇನ್ನೋರ್ವ ಪೂಜ್ಯರಾದ ಹಿರೇ ಪಪಡಸಲಾಗಿ ಗುರುದೇವಾಶ್ರಮದ ಪೂಜ್ಯ ಶ್ರೀ ಶಿಪ್ರಸಾದ ಸ್ವಾಮೀಜಿ; ಇಂದು ಪ್ರಾರಂಭಗೊಂಡ ಓಪಿಡಿ ಮೂಲಕ ಆರೋಗ್ಯದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗುವ ಮೂಲಕ ಸಾರ್ವಜನಿಕ ವಲಯದಲ್ಲಿ ಸೇವೆಯ ಮಹತ್ವವನ್ನು ಸಾರುವ ಕಾರ್ಯವನ್ನು ವೈದ್ಯರು ಮಾಡಬೇಕಿದ್ದು ಆ ನಿಟ್ಟಿನಲ್ಲಿ ತಮ್ಮ ಗಮನ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ್, ವಿಜಯಪುರದ ಸೀನಿಯರ್ ಪಿಸಿಷಿಯನ್ ಡಾ.ವಿಲಾಸ ಕುಲಕರ್ಣಿ, ಜೆಎಸ್ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶರಣ ಮಳಖೇಡ್ಕರ್, ಡಾ.ರವೀಂದ್ರ ತೋಟದ, ಡಾ.ಸಂತೋಷ ಬಿಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

