೩ ನೇ ದಿನಕ್ಕೆ ಕಾಲಿಟ್ಟ ಜಂಬಗಿ(ಆ), ಹುಣಶ್ಯಾಳ ಕೆರೆ ನೀರು ತುಂಬಿಸುವ ಸತ್ಯಾಗ್ರಹ
ವಿಜಯಪುರ: ಜಿಲ್ಲೆಯ ೨ನೇ ಅತೀ ದೊಡ್ಡ ಕೆರೆ ಜಂಬಗಿ ಆಗಿದ್ದು, ಈ ವರ್ಷ ಭೀಕರ ಬೇಸಿಗೆಯಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕೆರೆ ನೀರು ತುಂಬುವ ಯೋಜನೆಯಡಿ ತುಂಬಿಸಲು ಈಗಾಗಲೇ ಎರಡು ಬಾರಿ ನೀರು ಹರಿಸಿ ಈಗ ಮೂರನೇ ಬಾರಿ ನೀರು ಹರಿಸುತ್ತಿದ್ದರೂ ಜಂಬಗಿ ಕೆರೆಗೆ ಒಂದು ಹನಿ ನೀರು ಕೂಡ ಹರಿಸದೇ, ಕಳೆದ ೧೦ ವರ್ಷಗಳಿಂದ ಈ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಈ ಭಾಗದ ಕೆರೆ ತುಂಬಿಸಬೇಕು ಎಂದು ಮಲ್ಲಿಕಾರ್ಜುನ ಸ್ವಾಮಿಜಿ ಆಗ್ರಹಿಸಿದರು.
ಶನಿವಾರ ಅವರು ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು.
ಈ ಭಾಗದ ರೈತರಿಗೆ ನ್ಯಾಯ ಸಿಗಬೇಕಾದರೆ ಕೆರೆ ನೀರು ತುಂಬುವ ಯೋಜನೆಯಡಿ ಜಂಬಗಿ, ಹುಣಶ್ಯಾಳ ಮಾದಾಳ ಕೆರೆಗೆ ನೀರು ಹರಿಸಬೇಕು, ಇಲ್ಲವಾದಲ್ಲಿ ಈ ಭಾಗದ ಎಲ್ಲಾ ರೈತರು, ಮಹಿಳೆಯರು, ಮಕ್ಕಳು, ಜಾನುವಾರುಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಿ ನೀರು ಹರಿಸುವವರೆಗೂ ಅಲ್ಲಿಯೇ ಸತ್ಯಾಗ್ರಹ ಮಾಡಬೇಕಾಗುತ್ತದೆ. ನಾವೂ ಕೂಡಾ ಜಿಲ್ಲೆಯ ಎಲ್ಲಾ ಸ್ವಾಮೀಜಿಯವರೊಂದಿಗೆ ಸಂಪೂರ್ಣ ಬೆಂಬಲ ನೀಡಿ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ರೈತ ಸಂಘದ ಮುಖಂಡ ಅನಮೇಶ ಜಮಖಂಡಿ ಮಾತನಾಡಿ, ಸಮೀಪದ ಕಗ್ಗೊಡ ಗ್ರಾಮದಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದರೂ ಆಲಮಟ್ಟಿಯಿಂದ ೧೮೭ ಕಿ.ಮೀ ನಾರಾಯಣಪುರಕ್ಕೆ ಹೋಗಿ ಮರಳಿ ದೇವರಹಿಪ್ಪರಗಿ ಕಾಲುವೆಗೆ ಬಂದು ಕೊನೆಯದಾಗಿ ಜಂಬಗಿವರೆಗೆ ನೀರು ಬರಬೇಕಾಗುವುದು, ಪ್ರತಿಸಲ ನೀರು ಈ ಭಾಗಕ್ಕೆ ಮುಟ್ಟುವದರೊಳಗೆ ಅವದಿ ಮುಗಿದು ನೀರು ಹರಿಸದೇ ಈ ಭಾಗದ ರೈತರಿಗೆ ಪ್ರತಿಸರ್ತಿ ಅನ್ಯಾಯ ಮಾಡುತ್ತಿದ್ದಾರೆ, ಆದ್ದರಿಂದ ಒಟ್ಟಾರೆಯಾಗಿ ನಮ್ಮ ಕೆರೆಗೆ ನೀರು ತುಂಬಿಸುವವರೆಗೂ ನಮ್ಮ ಹೋರಾಟವನ್ನು ಮರಳಿ ಪಡೆಯುವುದಿಲ್ಲ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ತಾಲೂಕಾ ಉಪಾಧ್ಯಕ್ಷರಾದ ಮಹಾದೇವಪ್ಪ ತೇಲಿ, ತಾ.ಉಪಾಧ್ಯಕ್ಷರಾದ ಪ್ರಕಾಶ ತೇಲಿ, ಸದಸ್ಯರಾದ ಕಲ್ಲಪ್ಪ ಮಸೂತಿ, ರಾಜಾರಾಮಸಿಂಗ ಡೋಣೂರ, ರಾಮಸಿಂಗ ರಜಪೂತ, ಶ್ರೀಶೈಲ ಮುಡಗಿ, ನಾಗಪ್ಪ ಬೂತಿ, ಕಲ್ಲಪ್ಪ ತಳವಾರ, ವಿನೋದ ಬಡಿಗೇರ, ಭೀಮರಾಯ ಗೋರನಾಳ, ಬಸವಂತ ತೇಲಿ, ಸಂಗಮೇಶ ತೇಲಿ, ಜಯಸಿಂಗ ರಜಪೂತ, ಬಸವರಾಜ ಮಸೂತಿ, ಸೇರಿದಂತೆ ಅನೇಕರು ಇದ್ದರು.

