ಡಿಎಚ್ಓ ಅವರನ್ನು ತರಾಟೆಗೆ ತೆಗೆದುಕೊಂಡ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ
ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯಲ್ಲಿ ಕೆಲ ಹೆರಿಗೆತಜ್ಞ ಆಸ್ಪತ್ರೆಗಳಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ಸೂಚನೆಗಳನ್ನ ನೀಡಿದರೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದೆ. ಅಲ್ಲದೇ ಅಂತಹ ಆರೋಪ ಕೇಳಿಬಂದ ಆಸ್ಪತ್ರೆಗಳ ಸ್ಕ್ಯಾನಿಂಗ್ ಸೆಂಟರ್ ಮಾತ್ರ ಸೀಜ್ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ಶುಕ್ರವಾರ ವಿಜಯಪುರದ ಅಥಣಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡಿದ್ದಲ್ಲದೇ, ಆಸ್ಪತ್ರೆ ಸೀಜ್ ಮಾಡದೇ ಕೇವಲ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿರುವ ಕ್ರಮ ಸರಿಯಲ್ಲ ಎಂದು ಡಿಎಚ್ಓ ಅವರನ್ನು ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ತಿಂಗಳ ಹಿಂದಷ್ಟೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ನರ್ಸ್ ಒಬ್ಬರ ಮನೆಯಲ್ಲಿ ಭ್ರೂಣ ಪತ್ತೆ ಮಾಡಲಾಗುತ್ತಿದೆ ಎನ್ನುವ ಪ್ರಕರಣ ಬೆಳಕಿಗೆ ಬಂದಿತ್ತು. ಆ ಘಟನೆ ಮಾಸುವ ಮುನ್ನವೇ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಪ್ರಕರಣ ನಡೆದಿದೆ. ಈಗಾಗಲೇ ಇದು ಇಲಾಖೆಯ ಗಮನಕ್ಕೆ ಬಂದಿದೆ. ಇಲಾಖೆಯ ಗಮನಕ್ಕೆ ಬಂದೂ ಕೂಡ ಒಂದು ತಿಂಗಳ ಕಾಲ ಕಳೆದಿದೆ. ಆದರೆ ಇಲಾಖೆಯವರು ಪಿಸಿಆರ್ ಮಾಡಲು ವಿಳಂಬ ಮಾಡುತ್ತಿರುವುದು ಬಹಳ ದುರ್ಧೈವದ ಸಂಗತಿ. ಭ್ರೂಣ ಪತ್ತೆ ಪ್ರಕರಣಗಳು ನಡೆಯುತ್ತಿರುವುದು ನಾಗರಿಕ ಸಮಾಜ ಇಂತಹ ಆಧುನಿಕ ಯುಗದಲ್ಲಿ ಸಹ ತಲೆ ತಗ್ಗಿಸುವಂತಹ ಸಂಗತಿ. ಇದು ಇನ್ನೂ ಜೀವಂತವಾಗಿರುವುದು ಬಹಳ ನೋವಿನ ಸಂಗತಿ. ಹೀಗಾಗಿ ನಾನು ಇಂದು ಡಿಎಚ್ಓ ಅವರು ರಜೆಯಲ್ಲಿದ್ದಾರೆ, ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದೆ. ಕಾನೂನು ನಿಯಮಾವಳಿಗಳ ಪ್ರಕಾರ ಇಂತಹ ಪ್ರಕರಣಗಳ ಪತ್ತೆಯಾದ ನಲವತ್ತೆಂಟು ಗಂಟೆಗಳಲ್ಲಿ ಪಿಸಿಆರ್ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ನ್ಯಾಯಾಲಯದ ಮುಖಾಂತರವೇ ಕ್ರಿಮಿನಲ್ ಪ್ರಕರಣ ದಾಖಲಾಗುತ್ತೆ. ಆದರೆ ಈ ಪ್ರಕರಣದಲ್ಲಿ ತಿಂಗಳಾದರೂ ಸಹ ಅವರು ಈ ಕೆಲಸ ಮಾಡಿಲ್ಲ. ಆ ಕಾರಣದಿಂದ ನಾವು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಲ್ಲಿ ಸ್ವಯಂಪ್ರೇರಿತ ದೂರನ್ನ ದಾಖಲು ಮಾಡಿಕೊಳ್ಳುತ್ತಿದ್ದೇವೆ. ಜೊತೆಗೆ ಈಗಾಗಲೇ ಅವರಿಗೆ ದೂರವಾಣಿಯಲ್ಲಿ ಮಾತನಾಡಿರುವಂತೆ ಸಂಜೆಯೊಳಗೆ ಕಾನೂನಿನಡಿ ಕ್ರಮ ಜರುಗಿಸಿ ಆಯೋಗಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದೇನೆ, ಮತ್ತೆ ವಿಳಂಬ ನೀತಿ ಅನುಸರಿಸಿದರೆ ಸರಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದೇನೆ. ಈ ಪ್ರಕರಣ ಸಾರ್ವಜನಿಕರಿಂದ ನಮ್ಮ ಇಲಾಖೆ ಮತ್ತು ಆಯೋಗಕ್ಕೆ ದೂರು ಬಂದಿದ್ದು, ಬಂದ ತಕ್ಷಣ ಸ್ಪಾಟ್ ವಿಸಿಟ್ ಮಾಡಿ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿದ್ದಾರೆ. ಆದರೆ ಇಡೀ ಆಸ್ಪತ್ರೆ ಸೀಜ್ ಮಾಡಬೇಕು. ಅದನ್ನೂ ಸಹ ನಾನು ಡಿಎಚ್ಓ ಅವರಿಗೆ ಹೇಳಿದ್ದೇನೆ. ಕಾನೂನಿನಡಿ ಕ್ರಮ ಜರುಗಿಸಿದಾಗ ಮಾತ್ರ ಇಂತಹ ಪ್ರಕರಣ ಮರುಕಳಿಸದಂತೆ ತಡೆಗಟ್ಟಲು ಸಾಧ್ಯ. ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳಿಗೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ನಮ್ಮ ಆಯೋಗಕ್ಕೆ ಅನಾಮಧೇಯ ಕರೆಗಳು ಬಂದಿವೆ. ಆ ಕಾರಣದಿಂದ ನೀವು ಜಿಲ್ಲೆಯಲ್ಲಿರುವ ಎಲ್ಲಾ ೧೫೯ ಸ್ಕ್ಯಾನಿಂಗ್ ಸೆಂಟರ್ಗಳನ್ನ ರ್ಯಾಂಡಮ್ ಆಗಿ ಚೆಕ್ ಮಾಡಿರಿ, ಸ್ಟಿಂಗ್ ಆಪರೇಶನ್ ಮಾಡಿ, ಇಂತಹ ಭ್ರೂಣ ಪತ್ತೆ ಪ್ರಕರಣಗಳನ್ನ ನಿಯಂತ್ರಣ ಮಾಡಿ ಎಂದು ಹೇಳಿದರೂ ಸಹ ಅವರು ಎಚ್ಚೆತ್ತುಕೊಂಡಿಲ್ಲ. ಇದು ದುರ್ಧೈವದ ಸಂಗತಿ. ಇದೇ ತರಹ ಮುಂದುವರೆದರೆ ನಮ್ಮ ಆಯೋಗ ಖಂಡಿತ ಸುಮ್ಮನಿರುವುದಿಲ್ಲ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಯಾರೇ ಇದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದರು.
ಈ ವೇಳೆ ಆಯೋಗದ ಮತ್ತೋರ್ವ ಸದಸ್ಯರಾದ ಶೇಖರ್ ಗೌಡ ರಾಮತನಾಳ, ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ವರಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.

