ಕೋಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ಅಭಿಮತ
ವಿಜಯಪುರ: ನಾವು ಆರೋಗ್ಯಕರ ಆಹಾರ ಸೇವಿಸುವದಕ್ಕಿಂತ ಹೆಚ್ಚಾಗಿ ಅನಾರೋಗ್ಯಕರ ಆಹಾರ ಪದ್ಧತಿಯಿಂದ ತಲಾ ಸರಸರಿ ರೂ.150 ಗಳನ್ನು ಪ್ರತಿ ನಿತ್ಯ ಔಷಧಿ ಸೇವನೆಗಾಗಿ ಖರ್ಚು ಮಾಡುತ್ತಿದ್ದೇವೆ ಎಂದು ಕೋಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ಮಧುರಾ ಆಯಿಲ್ ಇಂಡಸ್ಟ್ರೀಸ್ನಲ್ಲಿ ಕಟ್ಟಿಗೆ ಗಾಣದಿಂದ ಕುಸಬಿ, ಶೇಂಗಾ ಮತ್ತು ಕೊಬ್ಬರಿ ಎಣ್ಣೆ ಉತ್ಪಾದಿಸುವ ಘಟಕವನ್ನು ಆರಂಭಿಸಿ ಮಾತನಾಡಿದ ಅವರು, ಯಾವ ದೇಶದಲ್ಲಿ ಜನರ ಆರೋಗ್ಯ ಸರಿ ಇರುವುದಿಲ್ಲವೋ ಆ ದೇಶದ ಆರ್ಥಿಕ ಬೆಳವಣಿಗೆ ಸಾಧ್ಯವಿಲ್ಲ. ರಿಫಾಯಿನ್ಡ್ ಎಣ್ಣೆ ಬಳಸುವದರಿಂದ ಮಧುಮೇಹ, ಹೃದಯ ರೋಗ, ಕ್ಯಾನ್ಸರ್ ಕಾಯಿಲೆಗಳು ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಪ್ಯಾರಲೈಸಿಸ್ ಕಾಯಿಲೆಗೆ ನಾವು ಬಳಸುತ್ತಿರುವ ಎಣ್ಣೆ ಕೂಡ ಕಾರಣ ಆಗಿದೆ ಎಂದರು.
ಒಂದು ಲೀಟರ್ ಶೇಂಗಾ ಎಣ್ಣೆ ತಯಾರಿಸಲು 3 ಕೆ.ಜಿ ಶೇಂಗಾ ಕಾಳುಗಳು ಬೇಕು. 3 ಕೆ.ಜಿ ಶೇಂಗಾ ಕಾಳುಗಳ ಬೆಲೆ ರೂ.330 ಆಗುತ್ತದೆ. ಹಾಗಿದ್ದರೆ ರೂ.110 ಗೆ ಶೇಂಗಾ ಎಣ್ಣೆ ಮಾರುಕಟ್ಟೆಯಲ್ಲಿ ಸಿಗಲು ಹೇಗೆ ಸಾಧ್ಯ? ಇದರಲ್ಲಿ ಮಿಕ್ಸಿಂಗ್ ಇದೆ. ನಾವು ಬಳಸುವ ಪ್ರತಿಯೊಂದು ಪದಾರ್ಥಗಳಲ್ಲಿಯೂ ಮಿಕ್ಸಿಂಗ್ ಇದೆ. ಐಸ್ಕ್ರೀಂ ತಯಾರಿಸಲು ದನದ ಕೊಬ್ಬನ್ನು ಬಳಸುತ್ತಾರೆ. ನಾವು ಬಾಯಿ ಚಪ್ಪರಿಸಿ ಸೇವಿಸುತ್ತೇವೆ. ತರಕಾರಿ ಮಾರುವವರು ಕೂಡ ತಾವು ಬೆಳೆದ ತರಕಾರಿಯನ್ನು ಸೇವಿಸುವುದಿಲ್ಲ. ಬದಲಿಗೆ ಮಾರಾಟ ಮಾಡುತ್ತಾರೆ. ಏಕೆಂದರೆ ಅದಕ್ಕೆ ಅಷ್ಟೊಂದು ರಾಸಾಯನಿಕ ಸಿಂಪಡಿಸಿರುತ್ತಾರೆ. ಆ ವಿಷವನ್ನು ನಾವು ಪ್ರತಿನಿತ್ಯ ತಿನ್ನುತ್ತೇವೆ. ಪ್ರತಿಯೊಬ್ಬರು ತಾವು ತಿನ್ನುವ ತರಕಾರಿಯನ್ನು ಮತ್ತು ಬಳಸುವ ಕಾಳು-ಕಡಿಗಳನ್ನು ತಾವೇ ಸ್ವತಃ ರಾಸಾಯನಿಕ ಮುಕ್ತವಾಗಿ ಬೆಳೆದುಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, 30 ವರ್ಷಗಳಿಂದಿಚೆಗೆ ಹೃದಯ ರೋಗಿಗಳ ಮತ್ತು ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಅದರ ತಕ್ಕಂತೆ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗಿ ರಾಜ್ಯ ಮಧುಮೇಹಿಗಳ ರಾಜಧಾನಿ ಎನಿಸಿಕೊಂಡಿದೆ. ಇದಕ್ಕೆ ಆಹಾರ ಪದ್ಧತಿಯೇ ಕಾರಣವಾಗಿದೆ ಎಂದರು.
ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಅಪ್ಪು ಪಟ್ಟಣಶೆಟ್ಟಿ ಮಾಜಿ ಶಾಸಕ ಆನಂದ ನ್ಯಾಮಗೌಡ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಕೆ.ಎಚ್.ಮುಂಬಾರೆಡ್ಡಿ, ಸಂಗಮೇಶ ಬಬಲೇಶ್ವರ, ಶ್ರೀಶೈಲಗೌಡ ಪಾಟೀಲ ನಿಡೋಣಿ ಈ ಸಂದರ್ಭದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಧುರಾ ಆಯಿಲ್ ಇಂಡಸ್ಟ್ರೀಸ್ ಮಾಲೀಕ ಉಮೇಶ ಮಲ್ಲಣ್ಣನವರ ಸನ್ಮಾನಿಸಿದರು. ಮರೇಗುದ್ದಿ ನಿರುಪಾಧೀಶ ಮಹಾಸ್ವಾಮಿಗಳು, ಶಿರೋಳ ಶಂಕರಾರೂಢ ಮಹಾಸ್ವಾಮಿಗಳು, ಮಮದಾಪುರ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಗುಣದಾಳ ಡಾ.ವಿವೇಕಾನಂದ ದೇವರು, ನಾವದಗಿ ಶ್ರೀಶೈಲ ಸ್ವಾಮಿಗಳು, ಕಂಬಾಗಿ ಚನ್ನಬಸಯ್ಯ ಹಿರೇಮಠ ವೇದಿಕೆಯಲ್ಲಿದ್ದರು. ಎಸ್.ಎಂ.ಸೊನ್ನದ ಸ್ವಾಗತಿಸಿದರು, ಸುಭಾಷಚಂದ್ರ ಕನ್ನೂರ ನಿರೂಪಿಸಿದರು.

