ಅಪಾಯದಲ್ಲಿ ಸರಕಾರಿಶಾಲೆಗಳು | ಮಕ್ಕಳು ಪೋಷಕರಲ್ಲಿ ಆತಂಕ | ಕೆಲವೆಡೆ ರೂಂಗಳು ಅಧ್ವಾನ
ಇಂಡಿ: ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ, ದಾಖಲಾತಿ ಅಂದೋಲನ ಎಂದೆಲ್ಲ ದುಡಿಯುತ್ತಿರುವ ಶಿಕ್ಷಣ ಇಲಾಖೆಯೂ ತನ್ನ ಸರಕಾರಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯವನ್ನೇ ಮರೆತಿದ್ದು ತಾಲೂಕಿನಲ್ಲಿ ೫೦ ಕ್ಕೂ ಹೆಚ್ಚು ಕೊಠಡಿಗಳು ಶಿಥಿಲಾವಸ್ತೆ ತಲುಪಿ ಈ ವರೆಗೂ ದುರಸ್ತಿ ಭಾಗ್ಯವನ್ನೇ ಕಾಣ ದಂತಾಗಿದೆ.
ಇಂಡಿ ತಾಲೂಕಿನಲ್ಲಿ ೨೭೮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು ಅದರಲ್ಲಿ ೧೮ ಸರಕಾರಿ ಪ್ರೌಢಶಾಲೆಗಳಿವೆ. ಇದರಲ್ಲಿ ೩೦ ಕ್ಕೂ ಹೆಚ್ಚು ಮೇಜರ್ ರಿಪೇರಿ ಆಗಬೇಕಾಗಿದ್ದು ೨೦ ಕ್ಕೂ ಹೆಚ್ಚು ಕೊಠಡಿಗಳು ಮೈನರ್ ರಿಪೇರಿ ಆಗಬೇಕಿದೆ. ಹೀಗಾಗಿ ಇಷ್ಟು ಶಾಲೆಗಳ ಕೊಠಡಿ ಗಳಲ್ಲಿ ಓದುವ ಮಕ್ಕಳ ಜೀವ ಕೈಯಲ್ಲಿ ಹಿಡಿದುಕೊಂಡು ಓದಬೇಕಿದೆ.
ಪ್ರತಿ ವರ್ಷವೂ ಕೊಠಡಿಗಳ ಗುಣಮಟ್ಟದ ಬಗ್ಗೆ ರಿಪೋರ್ಟ ಕಾರ್ಡು ಸಿದ್ಧ ಪಡಿಸುವ ಶಿಕ್ಷಣ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಆದರೆ ಈ ವರೆಗೂ ಕೊಠಡಿಗಳ ದುರಸ್ತಿಗೆ ಜಾಣಮೌನ ವಹಿಸಿರುವದು ವಿಪರ್ಯಾಸ
ಮೇಜರ ಸಮಸ್ಯೆ: ೫೦ ಕೊಠಡಿಗಳಲ್ಲಿ ಮೇಜರ ರಿಪೇರಿ ಕೆಲಸಗಳು ನಡೆಯಬೇಕಿದೆ.ಇಲ್ಲಿ ಗೋಡೆಗಳು ಬಿರುಕು ಬಿಟ್ಟಿದ್ದು ಚಾವಣಿ ಸಹ ಉದುರುವದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ.ಕೊಠಡಿಗಳು ಕುಸಿಯುವ ಹಂತ ತಲುಪಿದ್ದು ಮಕ್ಕಳ ಜೀವದ ಜತೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮೈನರ್ ರಿಪೇರಿ ನಡೆಯ ಬೇಕಿರುವ ೨೦ ಕೊಠಡಿಗಳಲ್ಲಿ ಸಣ್ಣ ಪುಟ್ಟ ತೇಪೆ ಕೆಲಸಗಳು ವಿದ್ಯುತ್ ವೈರ್ ಕಡಿತ ಗಾರೆ, ಪ್ಲಾಸ್ಟಿಂಗ ಉದುರುತ್ತಿರುವ ಪ್ರಕರಣಗಳೇ ಹೆಚ್ಚಾಗಿವೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿನಿ ಸಹ ಸರಕಾರಿ ಶಾಲೆಯ ವಿದ್ಯಾರ್ಥಿಯೇ ಆಗಿದ್ದಾಳೆ. ಗುಣಮಟ್ಟದ ಶಿಕ್ಷಣದಲ್ಲಿ ರಾಜ್ಯದ ಸರಕಾರಿ ಶಾಲೆಯೇ ಬೆಸ್ಟ. ಆದರೆ ಕೆಲ ತಾಲೂಕಿನ ಶಾಲೆಗಳು ಕೊಠಡಿಗಳು ಬೀಳುವ ಹಂತ ತಲುಪಿರುವದು ವಿಪರ್ಯಾಸ. ಒಂದೆಡೆ ಸುಭದ್ರ ಶಿಕ್ಷಣ ಇದ್ದರೂ ಕೊಠಡಿಗಳೇ ಮಕ್ಕಳಿಗೆ ಜೀವಭಯವನ್ನುಂಟು ಮಾಡುತ್ತಿವೆ. ಹೀಗಾಗಿ ಕೊಠಡಿಗಳು ಆದಷ್ಟು ಶೀಘ್ರದಲ್ಲಿ ದುರಸ್ತಿಗೊಳಿಸಬೇಕು ಎನ್ನುವದು ಸಾರ್ವಜನಿಕರ ಆಗ್ರಹವಾಗಿದೆ.
ಇನ್ನೂ ತಾಲೂಕಿನ ೨೭೮ ಶಾಲೆಗಳಲ್ಲಿ ೧೦೦ ಕ್ಕೂ ಹೆಚ್ಚು ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಸೌಲಭ್ಯವಿಲ್ಲ. ಶೌಚಾಲಯಗಳಿವೆ ಆದರೆ ಅದಕ್ಕೆ ಸದಾ ಕೀಲಿ ಹಾಕಿರುತ್ತಾರೆ ಇಲ್ಲವೆ ಸ್ವಚ್ಛತೆ ಇರುವದಿಲ್ಲ ಅಥವಾ ನೀರಿನ ತೊಂದರೆ ಅನುಭವಿಸುತ್ತಿವೆ. ಹೀಗಾಗಿ ಹಳ್ಳಿಗಳಲ್ಲಿ ವಿದ್ಯಾರ್ಥಿನಿಯರಿಗೆ ರಸ್ತೆಯೇ ಗತಿ.
ಇನ್ನೂ ಕೆಲವು ಶಾಲೆಗಳಿಗೆ ಗ್ರಂಥಾಲಯ ಮತ್ತು ಕೆಲವು ಶಾಲೆಗಳಿಗೆ ಆಟದ ಮೈದಾನ ವ್ಯವಸ್ಥೆ ಮಾಡಬೇಕಾಗಿದೆ. ಇನ್ನೂ ಕೆಲವೊಂದು ಶಾಲೆಗಳಲ್ಲಿ ಮಳೆ ಬಂದರೆ ಆಟದ ಮೈದಾನದಲ್ಲಿ ನೀರು ನಿಲ್ಲುತ್ತದೆ.
ತಾಲೂಕಿನಲ್ಲಿ ಕೆಲವೆಡೆ ಹೈಟೆಕ್ ಸರಕಾರಿ ಶಾಲೆಗಳಿವೆ. ಆದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕೋಣೆಗಳನ್ನು ದುರಸ್ತಿ ಮಾಡುವ ಜವಾಬ್ದಾರಿ ವಹಿಸಬೇಕಾಗಿದೆ.


