– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಸಮಾಜ ಸುಧಾರಕ, ದಾರ್ಶನಿಕ, ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಮೇ.೧೦ ರಂದು ಇರುವ ಹಿನ್ನೆಲೆಯಲ್ಲಿ ಬಸವ ಜನಿಸಿದ ಬಸವನಬಾಗೇವಾಡಿಯ ಪಟ್ಟಣದಲ್ಲಿ ಬಸವ ಜಯಂತಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.
ಕಳೆದ ಕೆಲ ದಿನಗಳಿಂದ ಬಸವ ಜನ್ಮಸ್ಮಾರಕ, ಬಸವೇಶ್ವರ ದೇವಸ್ಥಾನದಲ್ಲಿ ಮಂಡಳಿಯ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿರುವದು ಕಂಡುಬಂದಿತ್ತು. ಬಸವೇಶ್ವರ ದೇವಸ್ಥಾನ, ಬಸವಜನ್ಮ ಸ್ಮಾರಕ ಸೇರಿದಂತೆ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಯ ಸುತ್ತ ವಿದ್ಯುದೀಪದ ಅಲಂಕಾರ ಮಾಡಲಾಗಿದೆ.
ನಾಡಿನಲ್ಲಿ ಅಕ್ಷಯ ತೃತೀಯ ಬಸವ ಜಯಂತಿಯಂದು ಶುಭ ಕಾರ್ಯ ಸೇರಿದಂತೆ ಚಿನ್ನದ ಖರೀದಿಯಲ್ಲಿ ಜನರು ತೊಡಗುತ್ತಾರೆ. ಬಸವ ಜಯಂತಿ ಬರುವದೇ ನಾಡಿಗೆ ದೊಡ್ಡ ಸಡಗರ, ಸಂಭ್ರಮ. ಬಸವ ಜಯಂತಿಯನ್ನು ಜನರು ಶ್ರದ್ದಾ ಭಕ್ತಿಯಿಂದ ಆಚರಿಸುವದು ವಿಶೇಷ. ಬಸವೇಶ್ವರರ ತತ್ವ ಗಳನ್ನು ಜಗತ್ತಿನಲ್ಲಿ ಅಳವಡಿಸಿಕೊಳ್ಳುವದು ತುಂಬಾ ಮುಖ್ಯವಾಗಿದೆ. ಇಂದು ಜಗತ್ತಿನ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಸವೇಶ್ವರರ ಸಂದೇಶಗಳು ಪರಿಹಾರ ನೀಡುತ್ತವೆ. ಇವು ಜಗತ್ತಿನಲ್ಲಿ ಪ್ರಸಾರವಾಗಿ ಅವು ಜಾರಿಗೆ ಬರಬೇಕಿದೆ. ಇಂದು ಕೇವಲ ಬಸವೇಶ್ವರರ ಹೆಸರನ್ನು ಹೇಳಿಕೊಂಡು ಬೆಳೆಯುತ್ತಿದ್ದಾರೆ ವಿನಃ ಅವರ ತತ್ವಗಳು ತತ್ವಗಳಾಗಿಯೇ ಉಳಿಯುತ್ತಿರುವದು ವಿಪರ್ಯಾಸ. ಈ ವರ್ಷ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇರುವದರಿಂದಾಗಿ ಬಸವ ಜಯಂತಿ ಕಾರ್ಯಕ್ರಮ ಎಲ್ಲೆಡೆ ಸರಳವಾಗಿ ಆಚರಣೆ ಆಗುತ್ತಿದೆ.
ಬಸವ ಜಯಂತಿ ಅಂಗವಾಗಿ ಕೂಡಲಸಂಗಮ ಅಭಿವೃದ್ದಿ ಮಂಡಳಿಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಸವ ಜಯಂತಿ ಅಂಗವಾಗಿ ಬಸವೇಶ್ವರ ದೇವಸ್ಥಾನದಲ್ಲಿ ಮುಂಜಾನೆ ೭.೩೦ ಗಂಟೆಗೆ ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಂತರ ಬಸವ ಜನ್ಮಸ್ಮಾರಕದಲ್ಲಿ ಬೆಳಗ್ಗೆ ೧೦.೩೦ ಗಂಟೆಗೆ ಬಸವೇಶ್ವರರ ತೊಟ್ಟಿಲು ಹಾಗೂ ನಾಮಕರಣ ಕಾರ್ಯಕ್ರಮ ಮುರುಘೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗಲಿದೆ. ನಂತರ ಮಹಾಪ್ರಸಾದ ನಡೆಯಲಿದೆ.
ಸಂಜೆ ೫ ಗಂಟೆಗೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಬಸವ ಚಿಂತನ ಸಮಾವೇಶ ಹಾಗೂ ವಚನ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಅತಿಥಿ ಉಪನ್ಯಾಸಕರಾಗಿ ಚಿಕ್ಕನಾಯಕನಹಳ್ಳಿಯ ವಿಮರ್ಶಕ, ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ, ವಿರೇಶ ವಾಲಿ, ಕುಮಾರಿ ಸಾಕ್ಷಿ ಹಿರೇಮಠ ಅವರಿಂದ ವಚನ ಸಂಗೀತ ನಡೆಯಲಿದೆ. ಬೆಂಗಳೂಇರನ ನವ್ಯ ನಾಟ್ಯಸಂಗಮ ತಂಡದಿಂದ ಭಕ್ತಿ ಭಂಡಾರಿ ಬಸವಣ್ಣನವರ ನೃತ್ಯ ರೂಪಕ ಜರುಗಲಿದೆ. ನಂತರ ೯.೩೦ ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಅಲಂಕೃತ ಪಲ್ಲಕ್ಕಿ ಉತ್ಸವ ಹಾಗೂ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯ ಮಂಗಲ ವೈಭವದೊಂದಿಗೆ ಜರುಗಲಿದೆ ಎಂದು ಕೂಡಲಸಂಗಮ ಅಭಿವೃದ್ದಿ ಮಂಡಳಿಯ ಆಯುಕ್ತ ನಿಂಗಪ್ಪ ಬಿರಾದಾರ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

