ಬಿಚ್ಚಿಬಿದ್ದಿರುವ ಸಲಕರಣೆಗಳು | ಪುಂಡರ ಕಾಟ | ಪುರಸಭೆ ಕಡೆಗಣನೆ

*– ಚೇತನ ಶಿವಶಿಂಪಿ*
ಮುದ್ದೇಬಿಹಾಳ: ಮುರಿದು ಹೋದ ಜಾರುಬಂಡೆಯ ಮುಖ್ಯ ಪ್ಲಾಸ್ಟಿಕ್, ಕಬ್ಬಿಣದ ಸಳಿಗಳು ಕಿತ್ತಿದ ಜೋಕಾಲಿಗೆ ಅವೈಜ್ಞಾನಿಕ ವೈರ್ ಬಿಗಿತ, ಬಿಚ್ಚಿಬಿದ್ದಿರುವ ನಟ್ಟನ್ನು ಫಿಟ್ ಮಾಡೋರಿಲ್ಲ, ಮತ್ತೊಂದು ಜೋಕಾಲಿಗೆ ಕಟ್ಟಿಗೆಯ ತುಂಡನ್ನು ಬಳಸಿ ಆಟಕ್ಕೆ ನಿಲ್ಲೋ ಮಕ್ಕಳು, ಒಂದು ಕಡೆ ಕೂರುವ ಸೀಟೆ ಇಲ್ಲದ ಮತ್ತೊಂದು ಆಟದ ಸಲಕರಣೆ, ದಿನನಿತ್ಯ ನೂರಾರು ಮಕ್ಕಳು ಆಟವಾಡಿ ಸುಸ್ತಾಗಿ ಆನಂದ ಪಡೋದು ಇದೇ ಉದ್ಯಾನವನದಲ್ಲಿ.
ಪಟ್ಟಣಕ್ಕೇ ಒಂದೇ ಇರೋ ಪ್ರಸಿದ್ಧ ಉದ್ಯಾನವನ ಹುಡ್ಕೋ ಬಡಾವಣೆಯದ್ದು. ಕಳೆದ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿಗೊಂಡು ಜನಪ್ರೀಯತೆ ಪಡೆದಿತ್ತು. ಇಂದಿಗೂ ಸಾಕಷ್ಟು ಜನಪ್ರೀಯತೆ ಪಡೆದಿದೆ. ಆದರೆ ಸಧ್ಯ ನಿರ್ವಹಣೆಯ ಕೊರತೆಯಿಂದಾಗಿ ಈ ಉದ್ಯಾನವನ ಸಂಪೂರ್ಣ ನಿರ್ಲಕ್ಷಕ್ಕೊಳಗಾಗಿ ಅನಾಥ ಸ್ಥಿತಿಗೆ ಬಂದು ತಲುಪಿದೆ.
ನಿರೀಕ್ಷಿತ ಮಟ್ಟದ ನಿರ್ವಹಣೆ ಸೇರಿದಂತೆ ಅಭಿವೃದ್ಧಿಯಿಂದ ಸಂಪೂರ್ಣ ವಂಚನೆಗೊಂಡಿದೆ. ಇನ್ನು ಕುಡಿಯುವ ನೀರಂತೂ ಇಲ್ಲಿಯವರೆಗೂ ಕಂಡಿಲ್ಲ ಈ ಉದ್ಯಾನವನದ ದಿನನಿತ್ಯದ ಭೇಟಿಕಾರರು. ಸಂಜೆಯಾದರೆ ಸಾಕು ಪುಂಡ ಪೋಕರಿಗಳ ಗ್ಯಾಂಗ್, ಕರೆಂಟ್ ಇಲ್ದೆ ಇರೋದಕ್ಕೆ ಈ ಗ್ಯಾಂಗ್ ಗೆ ಹೇಳಿ ಮಾಡಿಸಿದಂತಾಗಿದೆ ಈ ಜಾಗ. ಇನ್ನೂ ಸ್ವಚ್ಛತೆ ಮಾಡೋಕೆ ಅಂತಾನೇ ಗುರುತಿಸಿಕೊಂಡಿದ್ದಾರೆ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು. ಇವರೇ ಆಗಾಗ ಸ್ವಚ್ಛ ಮಾಡ್ತಾರೆ ಕೆಲವು ಬಾರಿ ಪುರಸಭೆಯವರಿಗೆ ಬೆನ್ನಟ್ಟಿ ಸ್ವಚ್ಛ ಮಾಡಿಸ್ತಾರೆ. ಇನ್ನೂ ಗಿಡಗಳಿಗೆ ನೀರು ಉಣಿಸುವ ಕೆಲಸವನ್ನೂ ಬಳಗದ ಕೆಲವರು ಚಾಚೂ ತಪ್ಪದೆ ಪಾಲಿಸ್ತಾರೆ. ಆದರೆ ಉದ್ಯಾನವನ್ನು ಸ್ವಚ್ಛವಾಗಿಡಬೇಕಾದ ಪುರಸಭೆ ಈ ಉದ್ಯಾವನವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಯಾವುದೇ ಭಯವಿಲ್ಲದೇ ಮಕ್ಕಳು ಆಟಕ್ಕೆ ಇಳಿದೇ ಬಿಡ್ತಾರೆ. ಆದರೆ ಇಲ್ಲಿನ ಆಟದ ಸಾಮಾನುಗಳು ಯಾರಿಗೆ ಯಾವ ಗಾಯ ಮಾಡ್ಬೇಕು ಅಂತಾ ಕಾಯ್ಕೊಂಡು ಕುಳಿತಿವೆ. ಬಿಕ್ಕ ಪುಟ್ಟ ಸಮಸ್ಯೆಗಳನ್ನೂ ಸರಿಪಡಿಸಿ ಒಂದೆರಡು ಹೊಸ ಆಟಿಕೆಗಳನ್ನು ಅಳವಡಿಸಿ, ಲೈಟ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ರೆ ಈ ಉದ್ಯಾನವನ ಮತ್ತಷ್ಟು ಮೆರಗು ಪಡೆದುಕೊಳ್ಳುತ್ತೆ. ಈ ಕೂಡಲೇ ಪುರಸಭೆ ಎಚ್ಚೆತ್ತು ಈ ಉದ್ಯಾನವನದ ಸಚ್ಛತೆ ಸೇರಿದಂತೆ ಅಭಿವೃದ್ಧಿಯತ್ತ ಗಮನ ಹರಿಸಬೇಕು ಅನ್ನೋದು *’ಉದಯರಶ್ಮಿ’* ಪತ್ರಿಕೆ ಆಶಯ.

