ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಸಮಾಧಾನ
ವಿಜಯಪುರ: ನಗರದ ಬಬಲೇಶ್ವರ ನಾಕಾ ಬಳಿ ನಿರ್ಮಿಸಲಾಗಿರುವ ಸರ್ದಾರ ವಲ್ಲಭಭಾಯಿ ಪಟೇಲ್ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಹಂಚಿಕೆಯಾಗಬೇಕಾಗಿದೆ, ವಿಶೇಷವಾಗಿ ಎಸ್.ಇ.ಪಿ -ಟಿ.ಎಸ್.ಪಿ ಅನುನದಾದಡಿಯಲ್ಲಿ ನಿರ್ಮಿಸಿದ ಈ ಮಳಿಗೆಗಳನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಹಂಚಬೇಕು ಆದರೆ ಮಹಾನಗರ ಪಾಲಿಕೆಯ ಸಭೆಯಲ್ಲಿ ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ, ಈ ವಿಷಯವಾಗಿ ಮಹಾನಗರ ಪಾಲಿಕೆ ನಿಯಮಾವಳಿ ಗಾಳಿಗೆ ತೂರಿದೆಯೇ ಎಂದು ಬಿಜೆಪಿ ಮುಖಂಡ ಉಮೇಶ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು,
ರಸ್ತೆ ಅತಿಕ್ರಮಣದಲ್ಲಿ ಅಂಗಡಿ ಕಳೆದುಕೊಂಡಿರುವವರಿಗೆ ಹಾಗೂ ಉಳಿದವರಿಗೆ ಹಂಚಿಕೆ ಮಾಡುವ ವಿಷಯ ಬರೆಯಲಾಗಿದೆ. ಈ ಮಳಿಗೆಗಳನ್ನು ಉಳಿದ ಸಮುದಾಯಗಳಿಗೆ ಹಂಚಿಕೆ ಮಾಡಲು ಬರುವುದೇ ಇಲ್ಲ. ೨೦೨೦-೨೧ ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್.ಇ.ಪಿ-ಟಿ.ಎಸ್.ಪಿ ಅಡಿಯಲ್ಲಿ ೩.೫೬ ಕೋಟಿ ರೂ. ವೆಚ್ಚದಲ್ಲಿ ಈ ಮಳಿಗೆ ನಿರ್ಮಿಸಿ ೨೦೨೨ ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಹೀಗಿರುವಾಗ ಎಸ್.ಸಿ.ಸಮುದಾಯಕ್ಕೆ ಉಪ ಜೀವನ ಹಾಗೂ ಸ್ವ ಉದ್ಯೋಗಕ್ಕೆ ಅನುಕೂಲವಾಗಲು ಈ ಮಳಿಗೆ ಹಂಚಿಕೆಯಾಗಬೇಕು, ಆದರೆ ಈ
ವಿಷಯವಾಗಿ ಮಹಾನಗರಪಾಲಿಕೆ ಬೇರೆ ನಿಲುವು ತಾಳಿ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಈ ವಿಷಯವನ್ನೇ ಉಲ್ಲೇಖಿಸಿಲ್ಲ, ಹೀಗಾಗಿ ಎಸ್.ಸಿ.-ಎಸ್.ಟಿ.ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡಿದೆ, ಹೀಗಾಗಿ ಕೂಡಲೇ ಇದನ್ನು ತಿದ್ದುಪಡಿ ಮಾಡಿ ಎಸ್.ಸಿ. -ಎಸ್.ಟಿ. ಸಮುದಾಯಗಳಿಗೆ ಹಂಚಿಕೆ ಮಾಡಬೇಕು, ಇಲ್ಲವಾದರೆ ಸುದೀರ್ಘ ಹೋರಾಟಕ್ಕೆ ಅಣಿಯಾಗಲಾಗುವುದು ಎಂದು ಅವರು ಹೇಳಿದ್ದಾರೆ.

