ಇಂದು ಕನ್ನಡದ ಜಗದ್ಗುರು ತೋಂಟದ ಸಿದ್ಧಲಿಂಗ ದೇವರ ಜನ್ಮದಿನದ ಸ್ಮರಣೆ..
– ರಂಗನಾಥ ಥೊರ್ಪೆ, ಸಿಂದಗಿ
ಸಿದ್ದರಾಮರಿಗೆ ಪ್ರಾಥಮಿಕ ಶಾಲಿಯಲ್ಲಿ ಕನ್ನಡ ಅಕ್ಷರಗಳ ಶ್ರೀಕಾರ ಹಾಕಿದವರು ಗುರುಗಳಾದ ಶ್ರೀ ಸಿ.ಮ.ಮಣೂರ ಅವರು. ತಮ್ಮ ಪ್ರೌಢ ಶಿಕ್ಷಣದ ಹಂತದಲ್ಲಿ, ಪಠ್ಯ ವಿಷಯದ ಹೊರತಾಗಿಯೂ ಬೇರೆ ಬೇರೆ ವಿಷಯಗಳ ಓದಿನ ಕಡೆ ಗಮನ ಹರಿಸತೊಡಗಿದನು. ಅವರ ಓದುವ ಹುಚ್ಚು ಎಷ್ಟಿತ್ತೆಂದರೆ, ಕಿರಾಣಿ ಅಂಗಡಿಯವರು ಕಟ್ಟಿಕೊಡುವ ಬೆಲ್ಲ, ಸಕ್ಕರೆ, ಚಹಾಪುಡಿ, ಪೊಟ್ಟಣಗಳ ಕಾಗದದ ಚೂರನ್ನು ಸೀದಾಮಾಡಿ ಅದರ ಮೇಲಿನ ಸಾಹಿತ್ಯ ಓದುತ್ತಿದ್ದನು. ‘ಬಾಲಮಿತ್ರ’ ‘ಚಂದಮಾಮ’ ಪತ್ರಿಕೆಗಳ ಪುಟ ಯಾವುದಾದರೂ ಬಂದರಂತೂ ಅದನ್ನು ಓದಿ ಜೋಡಿಸುತ್ತಿದ್ದ. ಅದರಲ್ಲಿ ಬಂದ ವಿಷಯ ಅರ್ಧಮರ್ಧ ತಿಳಿದು ಮುಂದೇನಾಯಿತು? ಈ ಪುಟದ ಹಿಂದಿನ ವಿಷಯ ಏನಿದ್ದಿರಬಹುದು! ಎಂದು ತಡಬಡಿಸುತ್ತಿದ್ದ. ದೊಡ್ಡಪ್ಪ ಶಾಂತವೀರ ಪಟ್ಟಾಧ್ಯಕ್ಷರು ಯಾವಾಗಲೂ ಓದಿನಲ್ಲಿ ನಿರತರಾಗಿರುತ್ತಿದ್ದರೂ ಅವರ ಓದಿನ ಪುಸ್ತಕಗಳು ಬೇರೆಯೇ ಆಗಿರುತ್ತಿದ್ದವು. ಇವರ ಸಲುವಾಗಿ ಸಿದ್ಧರಾಮನ ಓದಿನ ಆಸಕ್ತಿಗೆ ಅವರು ನೀರೆರೆದು ಪೋಷಿಸಿದರು. ಅವರಿಗೆ ಬೇಕಾದ ಪತ್ರಿಕೆ, ಸಾಹಿತ್ಯದ ಕೆಲವು ಪುಸ್ತಕಗಳನ್ನು ಆಗಾಗ ತಂದು ಕೊಡುತ್ತಿದ್ದವರು ಸಿಂದಗಿಯ ಹಿರಿಯ ಪತ್ರಕರ್ತ ರೇ.ಚ. ರೇವಡಿಗಾರ. ಸಿದ್ದರಾಮನ ಆಸಕ್ತಿಯನ್ನು ದೂರದಿಂದ ಗಮನಿಸಿ, ಕಾರಂತ, ಬೈರಪ್ಪ, ಬೇಂದ್ರೆ, ಅ.ನ.ಕೃ ಮುಂತಾದವರ ಕೃತಿಗಳನ್ನು, ಮಾಸ್ತಿ, ಚದುರಂಗರಂತವರ ಕಥೆಗಳನ್ನು ಓದಲು ಕೊಟ್ಟು, ಅವರ ಓದಿನ ಹಸಿವಿಗೆ ಸಹಾಯ ಮಾಡಿದರು. ಸಾಹಿತ್ಯದ ದಿಗ್ಗಜರ ಕೃತಿಗಳನ್ನು ಓದಿ, ಅರ್ಥೈಸಿ ಹೇಳುವ ತಾಕತ್ತು ಸಿದ್ಧರಾಮನಿಗೆ ಹೈಸ್ಕೂಲಿನ ಹಂತದಲ್ಲೇ ಬಂದಿತ್ತು. ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಸಾಧಕರಾಗಿದ್ದಾಗ ಸಿದ್ಧರಾಮನ ದೈತ್ಯ ಓದನ್ನು ಕಂಡು ಅಲ್ಲಿಯ ಜಗದ್ಗುರುಗಳು, ಸಹಪಾಟಿಗಳು ಬೆರಗಾಗಿದ್ದರು. ಓದಿನಲ್ಲಿರುವ ಏಕಾಗ್ರತೆ, ವೇಗದ ಓದು, ವಿಷಯ ಗ್ರಹಿಸುವ ಶಕ್ತಿ ಎಲ್ಲವೂ ಅಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿದ್ದವು. ‘ರಾಮಕೃಷ್ಣರ ಶಿಷ್ಯ ಕೋಟಿ’ ಎಂಬ ಮಹಾಗ್ರಂಥವನ್ನು ಸಿದ್ಧರಾಮ ಓದಿದ ಅವಧಿಯನ್ನು, ಅವರು ಅದನ್ನು ವಿವರಿಸಿದ ಅನುಭವವನ್ನು, ಅವರ ಆಗಿನ ಸಹಪಾಟಿಗಳು ಇನ್ನೂ ಮರೆತಿಲ್ಲ, ಕಥೆ ಮಾಡಿ ಹೇಳುತ್ತಾರೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಸಂಶೋಧಕ ಪ್ರಾದ್ಯಾಪಕ ಡಾ. ಎಮ್ ಎಮ್ ಕಲಬುರ್ಗಿ ಸರ್ ಮಾರ್ಗದರ್ಶನ. ಹೀಗೆ ಓದಿನ ಹಸಿವು ಮುಂದೆ ಪುಸ್ತಕದ ಸ್ವಾಮಗೊಳು ಅಂತ ಸಾಮಾನ್ಯ zಜನರಿಂದ ಕರೆಯಿಸಿಕೊಂಡ ಅಸಾಮಾನ್ಯ ಸ್ವಾಮಿಜಿಯಾದರು. ಕನ್ನಡಕ್ಕೊಬ್ಬರೆ ಜಗದ್ಗುರು ನಮ್ಮ ಸಿಂದಗಿಯಲ್ಲಿ ಜನಿಸಿದ ತೋಂಟದ ಸಿದ್ಧಲಿಂಗ ಶ್ರೀಗಳು.

