ಕೊಲೆ ಪ್ರಕರಣದಲ್ಲಿ ನ್ಯಾಯವಾದಿ ಹೆಸರು | ನ್ಯಾಯಾಲಯದಿಂದ ಪೊಲೀಸ್ ಅಧೀಕ್ಷಕರ ಮೇಲೆ ಪ್ರಕರಣ ದಾಖಲು!
ವಿಜಯಪುರ: ವಿಜಯಪುರದಲ್ಲಿ ಹಿಂದೆ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದುರುದ್ದೇಶಪೂರ್ವಕವಾಗಿ ನ್ಯಾಯವಾದಿ ಸೈಯ್ಯದ ಆಸೀಫುಲ್ಲಾ ಖಾದ್ರಿ ಹೆಸರು ಸೇರ್ಪಡೆಗೊಳಿಸಿ ಬೇಕಾಯ್ದೆ ಬಂಧನ ಮಾಡಿ, ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಕುರಿತು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರಿಂದ ವಿಜಯಪುರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತನಿಖೆ ನಡೆಸುವಂತೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ನಿರ್ದೇಶನ ನೀಡಿದ್ದು, ಈ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಂತೆ ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ವಿಜಯಪುರ ನಗರದಲ್ಲಿ ಹಿಂದೆ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದುರುದ್ದೇಶಪೂರ್ವಕವಾಗಿ ನ್ಯಾಯವಾದಿ ಸೈಯ್ಯದ್ ಆಸೀಫುಲ್ಲಾ ಖಾದ್ರಿ ಅವರ ಹೆಸರು ಸೇರ್ಪಡೆ ಮಾಡಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಕುರಿತು ನ್ಯಾಯವಾದಿ ಖಾದ್ರಿ ಅವರು ನ್ಯಾಯಾಲಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಪ್ರಕರಣದ ತನಿಖೆ ನಡೆಸುವಂತೆ ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಿಲ್ಲಾ ಪೊಲೀಸ ಅಧೀಕ್ಷಕರಿಗೆ ನಿರ್ದೇಶನ ನೀಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ಜಿ.ಎಸ್. ಪವಾರ, ನ್ಯಾಯವಾದಿಗಳು ನ್ಯಾಯದಾನದ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಈ ಕಾಯಕದಲ್ಲಿ ಸಕ್ರೀಯವಾಗಿರುವ ಸೈಯ್ಯದ್ ಆಸೀಫುಲ್ಲಾ ಖಾದ್ರಿ ಅವರ ಮೇಲೆ ವಿನಾಕಾರಣ ಕೆಲವು ಶಕ್ತಿಗಳು ಕೊಲೆ ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಸುತ್ತಿವೆ. ಈ ಎಲ್ಲ ಬೆಳವಣಿಗೆ ಅಧರಿಸಿ ತಮ್ಮ ತೇಜೋವಧೆ ಮಾಡಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ನ್ಯಾಯವಾದಿ ಖಾದ್ರಿ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು, ಅದರಂತೆ ಆಗಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ, ಆಗಿನ ಗೋಳಗುಮ್ಮಟ ಸಿಪಿಐ ವಿಜಯಮಹಾಂತೇಶ ಮಠಪತಿ, ಸೇರಿದಂತೆ ಮೊದಲಾದವರ ಮೇಲೆ ಪ್ರಕರಣ ಜಲನಗರ ಪೊಲೀಸ್ ಠಾಣೆಯಲ್ಲಿ ಜಲನಗರ ಗುನ್ನಾ ನಂ. ೧೫/೨೪ರಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ಪಾರದರ್ಶಕವಾಗಿರಬೇಕು, ಎಲ್ಲರಿಗೂ ನ್ಯಾಯ ನೀಡುವ ನ್ಯಾಯವಾದಿಗೆ ನ್ಯಾಯ ದೊರಕದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಈ ತನಿಖೆ ಪಾರದರ್ಶಕ ಆಗದೇ ಹೋದರೆ ರಾಜ್ಯದಾದ್ಯಂತ ವಕೀಲರ ಸಮೂಹ ಧರಣಿ, ಆಂದೋಲನಕ್ಕೆ ಸಜ್ಜಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ನ್ಯಾಯವಾದಿ ಟಿ.ಸಿ. ದೊಡಮನಿ ಮಾತನಾಡಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಚಾಗಶೆಟ್ಟಿ, ಸಂಜೀವ ಜಹಾಗೀರದಾರ, ಅಶೋಕ ಜೈನಾಪೂರ, ಪೂಜಾರಿ, ರವಿ ಅಗರಖೇಡ, ಅಂಜುಮ್ ಖಾದ್ರಿ ಸೇರಿದಂತೆ ೧೧೫ ಕ್ಕೂ ಹೆಚ್ಚು ನ್ಯಾಯವಾದಿಗಳು ಸಹಿ ಮಾಡಿದ ಮನವಿ ಪತ್ರವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿದ್ದಾರೆ.

