
ತಿಕೋಟಾ: ವಿಜೃಂಭಣೆಯಿಂದ ತನ್ನ ಹುಟ್ಟು ಹಬ್ಬವನ್ನು ಆಚರಿಸದೇ ದುಂದು ವೆಚ್ಚಕ್ಕೆ ಸಾವಿರಾರು ರೂಪಾಯಿ ಹಣ ವ್ಯಯ ಮಾಡದೆ ಕಡಿವಾಣ ಹಾಕಿ ಅದೇ ಹಣದಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ವಿಧ್ಯಾರ್ಥಿಗಳಿಗೆ ಶುಕ್ರವಾರ ನೋಟಬುಕ್ ಹಾಗೂ ಪೆನ್ನು ವಿತರಿಸಿ ವಿಶೇಷವಾಗಿ ತನ್ನ 21ನೇಯ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಯುವ ಪೀಳಿಗೆಗೆ ಯುವಕನೊಬ್ಬ ಮಾದರಿಯಾಗಿದ್ದಾನೆ.
ಹೌದು, ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಚಿನ ಹಣಮಂತ ಗದ್ಯಾಳ ಎಂಬ ಯುವಕ ಮೂರು ವರ್ಷದಿಂದ ಪ್ರತಿ ವರ್ಷ ₹ 50 ಸಾವಿರ ವೆಚ್ಚ ಮಾಡಿ ನೋಟಬುಕ್, ಪೆನ್ನು ಹಾಗೂ ಮಕ್ಕಳಿಗೆ ಸಿಹಿ ವಿತರಿಸಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾನೆ.
ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲಿಕಾರವಸ್ತಿ ಹಾಗೂ ಉಪ್ಪಾರವಸ್ತಿ, ಹಿರಿಯ ಪ್ರಾಥಮಿಕ ಶಾಲೆ ಕಳ್ಳಕವಟಗಿ ಹಾಗೂ ತಾಂಡಾ ಶಾಲೆ, ಪ್ರೌಢ ಶಾಲೆ ಹಾಗೂ ಸಂಗಮನಾಥ ಕಿರಿಯ ಪ್ರಾಥಮಿಕ ಶಾಲೆಗಳ ಒಟ್ಟು ಐದನೂರಕ್ಕೂ ಹೆಚ್ಚು ಮಕ್ಕಳಿಗೆ ನೋಟಬುಕ್ ವಿತರಿಸಿ ಕಿರಿಯ ವಯಸ್ಸಿನಲ್ಲೆ ಶೈಕ್ಷಣಿಕ ಸೇವೆ ಮಾಡುತ್ತಿದ್ದಾನೆ.
ದುಂದು ವೆಚ್ಚ ಮಾಡಿ ಹುಟ್ಟು ಹಬ್ಬ ಆಚರಿಸಿಕೊಳ್ಳದೇ ಅದೇ ಹಣದಿಂದ ಬಡ ಮಕ್ಕಳಿಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ಸಮಾಜಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ ಎಂದು ಯುವಕ ಸಚಿನ ಗದ್ಯಾಳ “ಉದಯರಶ್ಮಿ” ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪರಮಾನಂದ ಕಣಮುಚನಾಳ, ಮಲ್ಲನಗೌಡ ಬಿರಾದಾರ, ರಾಜೇಂದ್ರ ಶಿರದವಾಡ, ಸಂತೋಷ ಗಿಡ್ನವರ, ನಾಗರಾಜ ಗದ್ಯಾಳ, ಶಿಕ್ಷಕರು ಹಾಗೂ ಮಕ್ಕಳು ಇದ್ದರು.