ಭೀಮಾಶಂಕರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಪ್ರಚಾರ ಸಭೆಯಲ್ಲಿ ಶಾಸಕ ಯಶವಂತ್ರಾಯಗೌಡ ಸ್ಪಷ್ಠನೆ
ಇಂಡಿ: ೨೦೧೩ರ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟಿ ಕಬ್ಬು ನುರಿಸಲು ಪ್ರಾರಂಭಿಸಲಾಗಿದೆ. ಈಗ ಇಥೆನಾಲ್ ಘಟಕವನ್ನೂ ಸ್ಥಾಪಿಸಲಾಗುತ್ತಿದೆ. ಅಲ್ಲದೆ ಕಾರ್ಖಾನೆಗೆ ಸಾಲ ನೀಡಿದ ಬ್ಯಾಂಕ್ಳಿಗೆ ಪ್ರತೀ ವರ್ಷ ಮಾರ್ಚ ೩೧ ರ ಒಳಗಾಗಿ ಕಂತು ಹಾಗೂ ಬಡ್ಡಿಯನ್ನು ನಿಯಮಿತವಾಗಿ ಕಟ್ಟಲಾಗುತ್ತಿದೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
೧೮೪ ಎಕರೆ ಪ್ರದೇಶದಲ್ಲಿ ೧೦೦ ವರ್ಷ ಬಾಳಿಕೆ ಬರುವ ಟರ್ಬೈನ್ ಅಳವಡಿಸಿ ಕಾರ್ಖಾನೆ ಕಟ್ಟಲಾಗಿದೆ. ಇದು ಮುಂದಿನ ೧೦೦ ವರ್ಷಗಳ ಕಾಲ ಕೆಲಸ ಮಾಡುವಂತೆ ಕ್ರಮ ಜರುಗಿಸಲಾಗಿದೆ. ನನ್ನ ಶಕ್ತಿ ಮೀರಿ ಕಾರ್ಖಾನೆ ಕಟ್ಟಿದ್ದೇನೆ. ಇದಕ್ಕೆ ಸಾಲ ಇದ್ದದ್ದು ನಿಜ. ನಿಸರ್ಗ ಅನುಕೂಲ ಕೊಟ್ಟರೆ ಕಾರ್ಖಾನೆ ಹೆಚ್ಚಿನ ಲಾಭದಲ್ಲಿರುತ್ತದೆ. ರೈತರಿಗೆ ಎಫ್ಆರ್ಪಿ ದರಕ್ಕಿಂತ ಹೆಚ್ಚಿನ ದರ ನೀಡುತ್ತಿದ್ದೇವೆ ಎಂದರು.
ಈ ಕಾರ್ಖಾನೆಯನ್ನು ಶೇರುದಾರ ರೈತರ ಆಸ್ತಿಯನ್ನಾಗಿ ಮಾಡಿದ್ದೇನೆ. ೧ ಸಾವಿರ ರೂ, ಗಳ ಶೇರಿನ ಬೆಲೆ ಇದೀಗ ೧ ಲಕ್ಷ ರೂ ಆಗಿದೆ. ರೈತರು ಸಹಕಾರ ನೀಡಿ ಸಂಪೂರ್ಣ ಬೆಳವಣಿಗೆಯಾದ ಕಬ್ಬನ್ನು ನೀಡಿದರೆ ರಿಕವರಿ ಹೆಚ್ಚಾಗಿ ಕಾರ್ಖಾನೆಗೆ ಲಾಭವಾಗುತ್ತದೆ. ಆ ನಿಟ್ಟಿನಲ್ಲಿ ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಬರುವ ದಿನಾಂಕ ಫೆ. ೧೧ ರಂದು ಕಾರ್ಖಾನೆಗೆ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಯಲಿದ್ದು, ಸಾಮಾನ್ಯ “ಅ” ವರ್ಗಕ್ಕೆ ೫ ಜನರನ್ನು ಆಯ್ಕೆ ಮಾಡಬೇಕಿದೆ. ೮ ಜನ ಕಣದಲ್ಲಿದ್ದಾರೆ. ಇವರಲ್ಲಿ ನನ್ನನ್ನು ಸೇರಿ ಇನ್ನಿತರ ಅಭ್ಯರ್ಥಿಗಳಾದ ಬಸವರಾಜ ಸಿದ್ರಾಮಪ್ಪ ಧನಶ್ರೀ, ಮಲ್ಲನಗೌಡ ರಾಮಚಂದ್ರಗೌಡ ಪಾಟೀಲ, ರೇವಗೊಂಡಪ್ಪ ಅಣ್ಣಾರಾಯ ಪಾಟೀಲ ಮತ್ತು ಸಿದ್ದಣ್ಣ ರಾಮಣ್ಣ ಬಿರಾದಾರ ಅವರಿಗೆ ಅದರಂತೆ ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿರುವ ಲಲಿತಾ ಅಡಿವೆಪ್ಪ ನಡಗೇರಿ ಮತ್ತು ಸರೋಜಿನಿ ಸಿದ್ದಾರಾಯ ಪಾಟೀಲ ಅವರಿಗೆ ಪರಿಶಿಷ್ಟ ಜಾತಿಯ ಮೀಸಲು ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಅಶೋಕ ಅಂಬಾಜಿ ಗಜಾಕೋಶ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಇನ್ನೋರ್ವ ಅಭ್ಯರ್ಥಿ ದಾನಮ್ಮ ಕರಬಸಪ್ಪ ಬಿರಾದಾರ ಈಗಾಗಲೇ ಕಣದಿಂದ ಹಿಂದಕ್ಕೆ ಸರಿದಿರುವದಾಗಿ ಹೇಳಿಕೆ ನೀಡಿದ್ದಾರೆ. ಅವರಿಗೆ ಅಭಿನಂದಿಸುವದಾಗಿ ಹೇಳಿದರು.
ಚುನಾವಣಾ ಪ್ರಚಾರ ಸಭೆಯಲ್ಲಿ ಎಂ.ಆರ್. ಪಾಟೀಲ ಬಳ್ಳೊಳ್ಳಿ, ಬಿಜೆಪಿಯ ಹಿರಿಯ ಮುಖಂಡ ಸಿದ್ಧಲಿಂಗ ಹಂಜಗಿ, ಶಾಂತೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಮಂತ ಇಂಡಿ, ಧನರಾಜ್ ಮುಜಗೊಂಡ, ಇಲಿಯಾಸ್ ಬೋರಾಮಣಿ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಖಾನೆ ಕಟ್ಟಿ ಬೆಳೆಸಿದ್ದಾರೆ, ಕಳೆದ ೫ ವರ್ಷಗಳ ಕಾಲ ಚೆನ್ನಾಗಿ ನಡೆಸಿಕೊಂಡು ಬಂದಿದ್ದಾರೆ. ಅವರು ಶಾಸಕರಾಗಿದ್ದರಿಂದ ಸರಕಾರದಿಂದ ಏನಾದರೂ ಸಹಾಯ ಪಡೆಯಲು ಸಾಧ್ಯವಾಗುತ್ತದೆ ಕಾರಣ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು.
ಡಿ.ಎ.ಮುಜಗೊಂಡ ನಿರೂಪಿಸಿ, ವಂದಿಸಿದರು.

