ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ ಗಂಭೀರ ಆರೋಪ
ಇಂಡಿ: ಭೀಮಾಶಂಕರ ಕಾರ್ಖಾನೆಯ ಮೇಲೆ ಕಳೆದ ಐದು ವರ್ಷಗಳಲ್ಲಿ ೨೭೮ ಕೋಟಿ ರೂ ಸಾಲ ಪಡೆದಿದ್ದು, ೧೪೩ ಕೋಟಿ ರೂ ಹಾನಿಯಾಗಿದೆ ಮತ್ತು ಪ್ರತಿ ವರ್ಷ ೨೮ ಕೋಟಿ ರೂ ನಷ್ಟವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ ಆರೋಪಿಸಿದರು.
ಅವರು ಭೀಮೆಯ ದಡದಲ್ಲಿ ಭೀಮಾಶಂಕರ ಕಾರ್ಖಾನೆ ಚುನಾವಣೆ ಪ್ರಚಾರಾರ್ಥ ಡಾ|| ಸಾರ್ವಭೌಮ ಬಗಲಿ, ನಾಗನಾಥ ಬಿರಾದಾರ, ಮುತ್ತಪ್ಪ ಪೋತೆ ಅಭ್ಯರ್ಥಿಗಳ ಗುಂಪಿನಿಂದ ನಡೆದ ಪಟ್ಟಣದ ಅಮರ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಬ್ಬು ಕಟಾವು ಮಾಡುವಾಗ ಕಬ್ಬು ಸಾಗಿಸುವ ಅಥವಾ ಕಾರ್ಖಾನೆಯಲ್ಲಿ ಕಬ್ಬು ನುರಿಸುವಾಗ ಅಪಘಾತ ಸಂಭವಿಸಿ ರೈತರು ಕಾರ್ಮಿಕರು ಮೃತ ಪಟ್ಟರೆ ಅವರಿಗೆ ೫ ಲಕ್ಷ ಪರಿಹಾರವನ್ನು ನೀಡಲಾಗುವದು, ಮತ್ತು ಅಪಘಾತಗೊಂಡು ಆಸ್ಪತ್ರೆಗೆ ದಾಖಲಾದರೆ ಅವರ ವೈದ್ಯಕೀಯ ವೆಚ್ಚವನ್ನು ಕಾರ್ಖಾನೆಯಿಂದ ಭರಿಸಲಾಗುವದು, ಜಮೀನಿನಲ್ಲಿ ಬೆಳೆದಿರುವ ಕಬ್ಬು ವಿದ್ಯುತ್ ಹಾಗೂ ಬೆಂಕಿಯಿಂದ ಸುಟ್ಟರೆ ಕೂಡಲೇ ಇಂತಹ ಕಬ್ಬನ್ನು ಕೂಡಲೇ ಕಾರ್ಖಾನೆಗೆ ಸಾಗಿಸಲಾಗುವದು ಎಂದರು.
ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ ಕಾರ್ಖಾನೆಯಲ್ಲಿ ಈಥನಾಲ ಉತ್ಪಾದನೆ ಪ್ರಾರಂಭಿಸಿ ಮತ್ತು ಮಳ್ಳಿ ಬೂದಿ, ವಿದ್ಯುತ್ ಉತ್ಪಾದನೆಯಿಂದ ಬಂದ ಲಾಭಾಂಶ ರೈತರಿಗೆ ಹಂಚಲಾಗುವದು, ಕಾರ್ಖಾನೆಯ ಪ್ರತಿ ಷೇರುದಾರರಿಗೆ ೫೦ % ಸಬ್ಸಿಡಿ ದರದಲ್ಲಿ ಪ್ರತಿ ವರ್ಷ ೫೦ ಕೆಜಿ ಸಕ್ಕರೆ ವಿತರಣೆ, ಕಬ್ಬಿನ ತೂಕಕ್ಕೆ ಸರಕಾರದಿಂದ ಇಲೆಕ್ಟ್ರಾನಿಕ್ ತೂಕದ ಮಷೀನು, ಜಿಲ್ಲೆಯಲ್ಲಿ ಸಹಕಾರಿ ಕಾರ್ಖಾನೆಗಳು ಕಬ್ಬಿಗೆ ನೀಡುತ್ತಿರುವ ದರಕ್ಕಿಂತ ಹೆಚ್ಚಿನ ೧೦೦ ರೂ ಹೆಚ್ಚಿನ ದರವನ್ನು ನೀಡಲಾಗುತ್ತದೆ ಎಂದರು.
ಶ್ರೀಶೈಲಗೌಡ ಬಿರಾದಾರ ಮಾತನಾಡಿದರು.
ಎಸ್.ಬಿ.ಐ ನಿವೃತ್ತ ಸಿಬ್ಬಂದಿ ಮುಕುಂದ ಕಾಂಬಳೆ ಮಾತನಾಡಿದರು.
ಭೀಮಾಶಂಕರ ಕಾರ್ಖಾನೆಯ ಚುನಾವಣೆಯಲ್ಲಿ ಸ್ಪರ್ಧಿಸಿದ ಮಾಜಿ ಶಾಸಕ ಡಾ|| ಸಾರ್ವಭೌಮ ಬಗಲಿ, ನಾಗನಾಥ ಬಿರಾದಾರ, ಮುತ್ತಪ್ಪ ಪೋತೆ ಮಾತನಾಡಿ, ಭೀಮಾಶಂಕರ ಕಾರ್ಖಾನೆಯಲ್ಲಿ ಆಗುತ್ತಿರುವ ಸೋರಿಕೆ ತಡೆದು ಮೂವರೂ ಪ್ರಭಲ ಶಕ್ತಿಯಾಗಿ ಕಾರ್ಖಾನೆಯನ್ನು ಹಾನಿಯಿಂದ ಲಾಭದ ಕಡೆಗೆ ತೆಗೆದುಕೊಂಡು ಹೋಗುವುದಾಗಿ ಭರವಸೆ ನೀಡಿದರು.

