ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಗೆ ಚಾಲನೆ ನೀಡಿದ ಮಾಜಿ ಎಂಎಲ್ಸಿ ಅರುಣ ಶಹಾಪೂರ ಆರೋಪ
ವಿಜಯಪುರ: ಯಾವ ಅಸುರ ಶಕ್ತಿಗಳು ರಾಮ ಮಂದಿರ ನಿರ್ಮಾಣ ವಿರೋಧಿಸಿದವೋ, ಕರಸೇವಕರನ್ನು ದಮನಿಸಿದವೋ ಆ ಶಕ್ತಿಗಳೇ ಇಂದು ಜೈ ಶ್ರೀರಾಮ ಘೋಷಣೆ ಮೊಳಗಿಸುತ್ತಿದ್ದಾರೆ ಎಂದು ವಿಧಾನ
ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಹೇಳಿದರು.
ವಿಜಯಪುರದ ಸಾಯಿ ವಿಹಾರದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕರಸೇವಕರನ್ನು ಗುಂಡಿಕ್ಕಿದ್ದ ಶಕ್ತಿಗಳು ಸಹ ಇಂದು ರಾಮ ನಾಮವನ್ನು ಜಪಿಸುತ್ತಿವೆ, ಯಾವ ಮುಖ್ಯಮಂತ್ರಿ ತಿಲಕ ಹಚ್ಚಿಕೊಳ್ಳಲು ನಿರಾಕರಿಸುತ್ತಿದ್ದರೋ ಅವರು ಸಹ ರಾಮನ ಸ್ಮರಿಸುತ್ತಿದ್ದಾರೆ, ಬನಾಯೇಂಗೆ ಮಂದಿರ ಎಂಬ ಹಾಡನ್ನು ಹಾಡಿದರೆ ಕೇಸು ದಾಖಲಿಸುವ ಪರಿಸ್ಥಿತಿ ಇತ್ತು, ಅಂದು ಆ ರೀತಿ ರಾಮ ಭಕ್ತರನ್ನು ಕಾಡಿದವರೇ ಇಂದು ರಾಮನನ್ನು ನೆನೆಯುತ್ತಿದ್ದಾರೆ ಎಂದರು.
ರಾಮ ಮಂದಿರ ನಿರ್ಮಾಣದ ಮೂಲಕ ಭಾರತ ವಿಶ್ವ ಗುರುವಾಗಿ ಶೀಘ್ರದಲ್ಲಿಯೇ ಅಲಂಕೃತವಾಗಲಿದೆ ಎಂದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಮಯ ನಿಗದಿಯಲ್ಲೂ ಧರ್ಮದ ಲೇಪನ ಮಾಡಿರುವ ಕಾಂಗ್ರೆಸ್ ಮುಸ್ಲಿಂರ ತುಷ್ಟೀಕರಣ ಪರಾಕಾಷ್ಠೆಗೆ ತಲುಪಿದೆ, ಶುಕ್ರವಾರ ಪ್ರಾರ್ಥನೆಗಾಗಿ ಸಮಯ ಮೀಸಲಿರಿಸಿ ಪರೀಕ್ಷೆಯ ವೇಳಾಪಟ್ಟಿ ನಿಗದಿ ಮಾಡಲು ಧರ್ಮದ ಓಲೈಕೆಯಂತಹ ನೀಚಕೃತ್ಯಕ್ಕೆ ತಲುಪಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಒಂದೇ ಒಂದು ಸಂಸದ ಸ್ಥಾನವನ್ನು ಕಾಂಗ್ರೆಸ್ ಜಯ ಸಾಧಿಸುವುದಿಲ್ಲ, ಎಲ್ಲ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವಿನ ನಗೆ ಬೀರಲಿದೆ ಎಂದರು.
ಕಾಂಗ್ರೆಸ್ ಕಾಲಘಟ್ಟದಲ್ಲಿ ಅಡುಗೆ ಅನೀಲ ಪಡೆಯಲು ಶಿಫಾರಸ್ಸು ಬೇಕಾಗಿತ್ತು, ಈಗ ಕಾಲ ಬದಲಾಗಿದೆ,ಈ ಬಾರಿ ಕಳೆದ ದಾಖಲೆಯನ್ನು ಸಹ ಮುರಿದು ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿದರು.
ವೋಟ್ ಬ್ಯಾಂಕ್ ಗಾಗಿ ಜಾತಿ, ಜಾತಿಗಳ ನಡುವೆ ವೈಷಮ್ಯ ಬಿತ್ತಿದ ಕಾಂಗ್ರೆಸ್ ಕಾಲಘಟ್ಟದಲ್ಲಿ ಯಾವ ಅಭಿವೃದ್ಧಿ ಕಾಮಗಾರಿಗಳು ನಡೆಯಲಿಲ್ಲ ಎಂದರು.
ಬಜೆಟ್ ಅಭಿಪ್ರಾಯ ಹೇಳುವಾಗ ದೇಶವನ್ನೇ ವಿಭಜನೆ ಮಾಡುವ ಹೇಳಿಕೆ ನೀಡುವಷ್ಟು ಹೇಯಕೃತ್ಯಕ್ಕೆ ತೊಡಗಿರುವ ಕಾಂಗ್ರೆಸ್ ನಾಯಕರಿಗೆ ಬೌದ್ಧಿಕ ದಿವಾಳಿಯಾಗಿದೆ ಎಂದು ಲೇವಡಿ ಮಾಡಿದರು.
ಒಂದು ಸಮುದಾಯದವರಿಗೆ ಓಲೈಕೆ ಮಾಡಲು ಪರೀಕ್ಷೆ ಸಮಯ ನಿಗದಿ ಮಾಡಲು ಹೊರಟಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಈ ಹಿಂದೆ ಯುಪಿಎ ಸರ್ಕಾರ ಅವಧಿಯಲ್ಲಿ ಎಲ್ಲಿ ಬಾಂಬ್ ಬೀಳುತ್ತವೆ ಎಂಬ ಭಯ ಇರುತ್ತಿತ್ತು, ಆದರೆ ಈಗ ಯಾವ ಭಯವೂ ಇಲ್ಲದಂತಾಗಿದೆ ಎಂದರು.
ಕಾಂಗ್ರೆಸ್ ಶಾಸಕರೇ ಕಾಂಗ್ರೆಸ್ ಬಗ್ಗೆ ಬೇಸತ್ತಿದ್ದಾರೆ, ಗ್ಯಾರಂಟಿ ಹೊರೆಯಿಂದ ಯಾವ ಅಭಿವೃದ್ಧಿಗೂ ಅನುದಾನ ದೊರಕುತ್ತಿಲ್ಲ, ಹೀಗಾಗಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂದು ಅವರ ಸ್ವ ಪಕ್ಷದ ಶಾಸಕರೇ ಆತಂಕ ಹೊರಹಾಕಿದ್ದಾರೆ, ಲೋಕಸಭೆ ಚುನಾವಣೆವರೆಗೆ ಅವರೆಲ್ಲರೂ ಕಾಯುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮುಖಂಡರಾದ ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಮಲ್ಲಿಕಾರ್ಜುನ ಜೋಗೂರ, ಬಸವರಾಜ ಬಿರಾದಾರ, ಮಲ್ಲಮ್ಮ ಜೋಗೂರ ಪಾಲ್ಗೊಂಡಿದ್ದರು.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಕಾರ್ಯಕ್ರಮ ನಿರೂಪಿಸಿದರು.

