ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ದಾವಣಗೆರೆಯಲ್ಲಿ ಎರಡು ದಿನ ಆಯೋಜಿಸಿದ್ದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಅರ್ಥಪೂರ್ಣವಾಗಿ ತೆರೆಕಂಡಿದೆ. ಅದಕ್ಕಾಗಿ ದಾವಣಗೆರೆ ಜಿಲ್ಲಾ ಘಟಕ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು.
ಮಧ್ಯ ಕರ್ನಾಟಕದ ದೇವನಗರಿ, ಬೆಣ್ಣೆ ನಗರಿ ಎಂದೇ ಹೆಸರುವಾಸಿಯಾದ ದಾವಣಗೆರೆಗೆ ನಾಡಿನಾದ್ಯಂತ ಐದು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಬಂದು ನಮ್ಮ ಮನೆಯ ಕಾರ್ಯಕ್ರಮ ಎನ್ನುವಷ್ಟರ ಮಟ್ಟಿಗೆ ಸಮ್ಮೇಳನದ ಮೆರಗು ಹೆಚ್ಚಿಸಿದ್ದು ಅವಿಸ್ಮರಣೀಯ.
ಕೆಯುಡಬ್ಲ್ಯುಜೆ ವ್ಯಾಪ್ತಿ ಮತ್ತು ಶಕ್ತಿ ಇಮ್ಮಡಿಯಾಗಿರುವುದನ್ನು ಸಮ್ಮೇಳನ ಮತ್ತೊಮ್ಮೆ ನಿರೂಪಿಸಿದೆ.
ಎರಡು ದಿನಗಳಲ್ಲಿ ನಡೆದ ನಾಲ್ಕು ವಿಚಾರಗೋಷ್ಠಿಗಳು, ಸಂವಾದ ಸುದ್ದಿ ಮನೆಗೆ ಹೊಸ ಮುನ್ನೋಟವನ್ನು ನೀಡಿದೆ. ಸಾಧಕ ಬಾಧಕಗಳ ಬಗ್ಗೆ ವಿಚಾರ ಮಂಥನವಾಗಿರುವುದು ಸುದ್ದಿ ಮನೆಗೆ ಪ್ರಜ್ವಲವಾದ ಬೆಳಕು ನೀಡಿದೆ.
ನಾನಾ ಧೋರಣೆ ಹೊಂದಿದವರನ್ನೆಲ್ಲ ಒಂದು ವೇದಿಕೆಗೆ ತರುವುದು ಮತ್ತು ಎಲ್ಲರನ್ನೊಳಗೊಳ್ಳುವ ಸಮ್ಮೇಳನವನ್ನಾಗಿ ಸಂಘಟಿಸುವುದು ನಿಜಕ್ಕೂ ಸವಾಲು. ಹಲವು ವೈರುಧ್ಯಗಳ ನಡುವೆ ಆ ಸವಾಲುಗಳನ್ನು ದಾಟಿರುವುದು ಸಮಾಧಾನ ಸಂಗತಿ.
ಸಮ್ಮೇಳನ ಹಬ್ಬದ ಸಡಗರದಲ್ಲಿ ನಡೆಯುವಂತೆ ಸಂಘಟಿಸಲು
ಶ್ರಮಿಸಿದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ನೇತೃತ್ವದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ವಿಶೇಷ ಧನ್ಯವಾದಗಳು.
ಊಟ, ತಿಂಡಿ ಜೊತೆಗೆ
ಆತಿಥ್ಯ ವಹಿಸುವುದರಲ್ಲಿ ದಾವಣಗೆರೆ ಎತ್ತಿದ ಕೈ ಎನ್ನುವುದನ್ನು ಬೆಣ್ಣೆ ನಗರಿಯ ಸಮ್ಮೇಳನ ಮತ್ತೊಮ್ಮೆ ನಿರೂಪಿಸಿದೆ. ಅದಕ್ಕಾಗಿ ಸಂಘದ ಪ್ರತಿ ಸದಸ್ಯರಿಗೂ, ತೆರೆ ಮರೆಯಲ್ಲಿ ಸಹಕರಿಸಿದವರಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಾರ್ಗದರ್ಶನ ಮಾಡಿ ಕೊನೆಯ ತನಕ ಬೆಂಬಲವಾಗಿ ನಿಂತವರಿಗೆ, ಅದಕ್ಕಿಂತಲೂ ಹೆಚ್ಚಾಗಿ ಉತ್ಸಾಹದಿಂದ ಎರಡೂ ದಿನ ಸಕ್ರಿಯವಾಗಿ ಸಮ್ಮೇಳನದಲ್ಲಿ ಭಾಗಿಯಾಗಿದ್ದ ತಮಗೆಲ್ಲರಿಗೂ ಅಭಿನಂದನೆಗಳು. ಇದರಾಚೆಗೂ ಲೋಪದೋಷಗಳಾಗಿದ್ದರೆ ಅದಕ್ಕೆ ಕ್ಷಮೆ ಇರಲಿ.
ಮುಂದಿನ ರಾಜ್ಯ ಸಮ್ಮೇಳನದ ತೇರು ಎಳೆಯುವ ಸಂಕಲ್ಪ ತೊಟ್ಟಿರುವ ತುಮಕೂರು ಜಿಲ್ಲೆ ಎಲ್ಲವನ್ನೂ ಮೀರುವ ಹಾಗೆ ಸಮ್ಮೇಳನ ಮಾಡಲಿ ಎಂದು ನಿರೀಕ್ಷಿಸೋಣ.
ಸಮ್ಮೇಳನ ಅರ್ಥಪೂರ್ಣವಾಗಿಸಿದ ನಿಮ್ಮೆಲ್ಲರಿಗೂ, ದಾವಣಗೆರೆ ಜಿಲ್ಲಾ ಘಟಕಕ್ಕೂ ಮತ್ತೊಮ್ಮೆ
ಧನ್ಯವಾದಗಳು.
– ಶಿವಾನಂದ ತಗಡೂರು
ರಾಜ್ಯಾಧ್ಯಕ್ಷರು, ಕೆಯುಡಬ್ಲ್ಯೂಜೆ.

