ವಿಜಯಪುರ ನಗರದ ಕೋಟೆಗೋಡೆ ಸುತ್ತಮುತ್ತ ಮಳೆ ನೀರು ಹರಿವಿಗೆ ಅಡೆತಡೆ ತೆರವು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶಿವಾಜಿ ಸರ್ಕಲ್ನಿಂದ ಲಿಂಗದಗುಡಿ ರಸ್ತೆ ಹಾಗೂ ಗಚ್ಚಿನ ಕಟ್ಟಿ ಕಾಲೋನಿಗೆ ಹೊಂದಿಕೊಂಡಿರುವ ಕೋಟೆಗೋಡೆ ಸುತ್ತಲೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಮತ್ತು ಪ್ರವಾಹ ಉಂಟಾಗದಂತೆ ತಡೆಯಲು ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ನಿರ್ಧರಿಸಲಾಗಿದೆ ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪಾಲಿಕೆ ಆಯುಕ್ತರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು ಎಂದು ತಿಳಿಸಿದ ಅವರು, ಕೋಟೆಗಳ ಸುತ್ತಮುತ್ತಲೂ ಬೆಳೆದಿರುವ ಕಂಟಿ ಬೇಲಿ ಹಾಗೂ ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಉಭಯ ಅಧಿಕಾರಿಗಳು ತೀರ್ಮಾನಿಸಿದರು.
ಜೊತೆಗೆ ಕೋಟೆ ಕಂದಕದ ಸುತ್ತಮುತ್ತ ಹೂಳೆತ್ತಿ, ನೀರಿನ ಹರಿವಿಗೆ ಅನುಕೂಲವಾಗುವಂತೆ ಅಗಲೀಕರಣಗೊಳಿಸಲು ನಿರ್ಧರಿಸಿದರು.
ನೀರು ಸುಗಮವಾಗಿ ಹರಿಯಲು ತಡೆಗೋಡೆ ನಿರ್ಮಾಣ ಮತ್ತು ಮಾರ್ಗ ಮಧ್ಯೆದಲ್ಲಿರುವ ಅಡೆತಡೆಗಳನ್ನು ತೆರವುಗೊಳಿಸಲು ಸಭೆ ನಿರ್ಧರಿಸಿತು.
ಶಾಶ್ವತ ಪರಿಹಾರ:
ಈ ಕಾಮಗಾರಿಗಳು ಪೂರ್ಣಗೊಂಡ ನಂತರ ಮಳೆಗಾಲದಲ್ಲಿ ನಗರದಲ್ಲಿ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗಂಗಾಧರ ಸಂಬಣ್ಣಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರದ ಸೌಂದರ್ಯೀಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಗಾಂಧಿ ವೃತ್ತದ ಮರು ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಪಾಲಿಕೆಯಿಂದ ಬೇಗಂ ತಲಾಬ್ ಕೆರೆ ಅಭಿವೃದ್ಧಿ ಕಾಮಗಾರಿ ಹಾಗೂ ಕೆರೆಯ ಬಂಡ್ ಕನೆಕ್ಟಿಂಗ್ ಕಾಮಗಾರಿ ಕೈಗೊಳ್ಳಲು ಹಾಗೂ ಮಹಾಬಲೇಶ್ವರ ನಗರ ಉದ್ಯಾನವನದ ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

