ಪರ್ಯಾಯ ವ್ಯವಸ್ಥೆಗೆ ಬೀದಿಬದಿ ವ್ಯಾಪಾರಿಗಳ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಸುಪ್ರೀಕೋರ್ಟ್ ಆದೇಶವನ್ನು ನಾವು ಉಲ್ಲಂಘಿಸಿಲ್ಲ. ಫುಟ್ಪಾತ್ ತೆರವಿಗೆ ನಾವು ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಬಡವರಿಗೊಂದು, ಉಳ್ಳವರಿಗೊಂದು ಆದೇಶ ತರಬೇಡಿ. ತಾಲೂಕಿನ ಹ್ಯಾಂಡ್ ಪೋಸ್ಟ್ ಸರ್ಕಲ್ ಬಳಿ ಪ್ರಭಾವಿಗಳು ೩೪ ಕುಂಟೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ. ಮೊದಲು ಅದನ್ನು ತೆರವು ಮಾಡಿಸಿ, ಆ ಜಾಗದಲ್ಲಿ ನಮಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿ ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
ತಾಲೂಕಿನ ಹ್ಯಾಂಡ್ ಪೋಸ್ಟ್ ಸರ್ಕಲ್ ಮುಂಭಾಗ ಶ್ರೀ ಚಿಕ್ಕದೇವಮ್ಮ ಬೀದಿಬದಿ ವ್ಯಾಪಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಜಮಾಯಿಸಿದ ಬೀದಿಬದಿ ವ್ಯಾಪಾರಿಗಳು, ರಸ್ತೆ ಬದಿ ಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಅದನ್ನೇ ನಂಬಿಕೊಂಡು ಫೈನಾನ್ಸ್ ಕಂಪನಿಗಳಿಂದ ಸಾಲ ತೆಗೆದುಕೊಂಡು ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬ ನಿರ್ವಣೆ ಮಾಡುತ್ತಿದ್ದೆವು. ಆದರೆ ಇದೀಗ ಏಕಾಏಕಿ ಫುಟ್ಪಾತ್ ತೆರವು ಮಾಡಿರುವುದರಿಂದ ನಮಗೆ ದಿಕ್ಕೇ ತೋಚದಂತಾಗಿದೆ. ಅಂಗಡಿಗಳನ್ನು ತೆರವು ಮಾಡಿ ೧೧ ದಿನಗಳು ಕಳೆಯುತ್ತಾ ಬಂದರೂ ಇಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ವ್ಯಾಪಾರ ಮಾಡಲು ನಮಗೆ ಸ್ಥಳ ನಿಗದಿಪಡಿಸಿಲ್ಲ. ಇದರಿಂದ ಜೀವನ ನಡೆಸುವುದೇ ಕಷ್ಟಕರವಾಗಿದೆ ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣ ಚಾರಿ ತಮ್ಮ ಅಳಲನ್ನು ತೋಡಿಕೊಂಡರು.
ಬೀದಿಬದಿ ವ್ಯಾಪಾರಿ ಲೋಹಿತ್ ಕುಮಾರ್ ಮಾತನಾಡಿ, ಹೆಚ್ ಡಿ ಕೋಟೆ- ಮಾನಂದವಾಡಿ ರಸ್ತೆಗೆ ಹೊಂದಿಕೊಂಡಿರುವ ಯರಹಳ್ಳಿ ಗ್ರಾಮದ ಸರ್ವೇ ನಂ. 33 ರಲ್ಲಿ 36 ಗುಂಟೆ ಗುಂಡುತೋಪು ಸರ್ಕಾರಿ ಜಮೀನಿದ್ದು, ಇದು ಉಳ್ಳವರ ಪಾಲಾಗಿದೆ. ಅದೆಷ್ಟೋ ವರ್ಷಗಳಿಂದ ಆ ಜಾಗವನ್ನು ಬಿಟ್ಟುಕೊಡದೆ ಅಲ್ಲೇ ವಾಣಿಜ್ಯ ಚಟುವಟಿಕೆ ನಡೆಸುತ್ತಾ ಬರುತ್ತಿದ್ದಾರೆ. ಮೊದಲು ಇಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡ ತೆರವುಗೊಳಿಸಿ, ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಕಟ್ಟಡ ನಿರ್ಮಾಣ ಮಾಡಿಕೊಡುವ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ನೇರವಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಶ್ರೀ ಚಿಕ್ಕದೇವಮ್ಮ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲಕ್ಷ್ಮಣಾಚಾರಿ, ಕಾರ್ಯದರ್ಶಿ ಉಮೇಶ್, ಉಪಾಧ್ಯಕ್ಷೆ ನಾಗಮ್ಮ, ಖಜಾಂಚಿ ಶಿವಣ್ಣ, ಗೌರವ ಅಧ್ಯಕ್ಷ ಗೋಪಾಲ, ಕೇಶವ, ಲೋಹಿತ್ ಕುಮಾರ್ ವೈ ಬಿ. ಹೂ ಸ್ವಾಮಿ, ಮಾಯಮ್ಮ, ಪುಷ್ಪ, ರತ್ನಮ್ಮ, ಪುಷ್ಪ, ಪಾನಿಪುರಿ ಕುಮಾರ, ಬಸವರಾಜು ಗೋಬಿ, ಸುಂದರ್ ಗೋಬಿ, ವಾಟರ್ ಉಮೇಶ್, ಸುರೇಶ, ಜಯಪ್ರಕಾಶ್, ರಮೇಶ್, ಶಾಮಿಯಾನ ಮಲ್ಲಿಕಾರ್ಜುನ, ಹೆಚ್.ಪಿ ಲೋಕೇಶ್, ಪ್ರತಾಪ್, ಹೆಗ್ಗನೂರು ನಿಂಗರಾಜು, ಜೀವಿಕ ಬಸವರಾಜು, ಅನುಷಾ ಸೇರಿದಂತೆ ಅನೇಕ ಮಂದಿ ವ್ಯಾಪಾರಿಗಳು ಇದ್ದರು.

