ಲೇಖನ
– ಶೀತಲ್ ಹೆಗಡೆ.
ನಿರ್ವಾಹಕಿ
’ನಮ್ಮ ಕಥಾ ಅರಮನೆ’
ಉದಯರಶ್ಮಿ ದಿನಪತ್ರಿಕೆ
ಮನುಷ್ಯನ ಜೀವನವನ್ನು ಮುನ್ನಡೆಸುವ ಅತ್ಯಂತ ಪ್ರಭಾವಶಾಲಿ ಪ್ರೇರಣೆಯೇ ಕನಸು. ಕಣ್ಣು ಮುಚ್ಚಿದಾಗ ಕಾಣುವುದು ಕನಸಲ್ಲ, ಬದಲಾಗಿ ಕಣ್ಣು ತೆರೆದ ನಂತರವೂ ನಮ್ಮನ್ನ ನಿದ್ರಿಸದಂತೆ ಮಾಡುವ ಗುರಿಯೇ ನಿಜವಾದ ಕನಸು. ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಅನೇಕ ಕನಸುಗಳು ಅಡಗಿರುತ್ತವೆ. ಆ ಕನಸುಗಳೇ ಬದುಕಿಗೆ ದಿಕ್ಕು, ಧೈರ್ಯ ಮತ್ತು ಅರ್ಥವನ್ನು ನೀಡುತ್ತವೆ.
ಕನಸುಗಳು ಕೇವಲ ಕಲ್ಪನೆಗಳಾಗಿರಬಾರದು. ಅದರಲ್ಲಿ ಪರಿಶ್ರಮ, ಶಿಸ್ತು, ಸಂಯಮ ಮತ್ತು ನಿರಂತರ ಪ್ರಯತ್ನದೊಂದಿಗೆ ಬೆರೆತಾಗ ಮಾತ್ರ ಸಾಧನೆಯ ಮೆಟ್ಟಿಲಾಗುತ್ತದೆ. ಎಷ್ಟೇ ಅಡೆತಡೆಗಳು ಬಂದರೂ ಕನಸಿನ ಮೇಲಿನ ನಂಬಿಕೆ ಕಳೆದುಕೊಳ್ಳದವರು ಅಂತಿಮವಾಗಿ ಯಶಸ್ಸಿನ ಶಿಖರವನ್ನೇರುತ್ತಾರೆ. ಇತಿಹಾಸದಲ್ಲಿರುವ ಎಲ್ಲ ಮಹಾನ್ ವ್ಯಕ್ತಿಗಳೆಲ್ಲರೂ ತಮ್ಮ ಕಾರ್ಯದ ಮೂಲಕ ಕನಸನ್ನು ಸಾಕಾರಗೊಳಿಸಿಕೊಂಡವರೇ.

ಪ್ರತಿಯೊಂದೂ ಕನಸಿನ ಹಿಂದೆ ಒಂದು ಹೊಣೆಗಾರಿಕೆ ಇರುತ್ತದೆ. ಸ್ವಂತ ಯಶಸ್ಸಿಗಾಗಿ ಅಲ್ಲ, ಸಮಾಜದ ಒಳಿತಿಗಾಗಿ ಕಂಡ ಕನಸುಗಳು ಇನ್ನಷ್ಟು ಮೌಲ್ಯಯುತವಾಗಿರುತ್ತವೆ. ಒಬ್ಬ ಯುವಕ ತನ್ನ ಕುಟುಂಬದ ಹಿತರಕ್ಷಣೆಗೆ ಕನಸು ಕಾಣಬಹುದು, ಒಬ್ಬ ಶಿಕ್ಷಕ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಕನಸು ಕಾಣಬಹುದು, ಒಬ್ಬ ರೈತ ಸಮೃದ್ಧ ಬೆಳೆಯ ಕನಸು ಕಾಣಬಹುದು. ಇಂತಹ ಕನಸುಗಳೇ ಸಮಾಜದ ಹಿತರಕ್ಷಣೆ ಮತ್ತು ಉತ್ತಮ ಸಮಾಜದ ಅಡಿಪಾಯವಾಗಿದೆ.
ಕನಸುಗಳ ಕಣಜ ಅಂದರೆ ಆಸೆಗಳ ಸಂಗ್ರಹವಲ್ಲ, ಅದು ಪರಿಶ್ರಮ, ಭರವಸೆ ಮತ್ತು ಆತ್ಮವಿಶ್ವಾಸದ ನಿಧಿ. ಕನಸುಗಳು ಎತ್ತರವಾಗಿದ್ದಷ್ಟು ನಮ್ಮ ಪ್ರಯತ್ನವೂ ದೃಢವಾಗಿರಬೇಕು. ಕನಸು ಕಾಣುವುದು ಮೊದಲ ಹೆಜ್ಜೆಯಾದರೆ ಅದನ್ನು ನನಸಾಗಿಸುವುದೇ ನಿಜವಾದ ಸಾಧನೆ.
ಪುಟ್ಟ ಕೆರೆಯಲ್ಲಿ ಸಾವಿರಾರು ಕಪ್ಪೆಗಳು ಜೀವಿಸುತ್ತಿದ್ದವು. ಅದರಲ್ಲಿ ಒಂದು ಕಪ್ಪೆಮರಿ ದಿನವೂ ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಕಂಡು ಅದಕ್ಕೂ ಹಾರಾಡಬೇಕೆಂಬ ಆಸೆಯಾಗುತ್ತಿತ್ತು. ಅದನ್ನು ತಿಳಿದ ಸಹ ಕಪ್ಪೆಗಳು ಅಪಹಾಸ್ಯ ಮಾಡುತ್ತಿದ್ದವು. ಆದರೂ ಪ್ರಯತ್ನ ಬಿಡದೇ ದಿನವೂ ಚಂಗನೆ ನೆಗೆನೆಗೆದು ಹಾರಲು ಯತ್ನಿಸುತ್ತಿತ್ತು. ಅದೆಷ್ಟೇ ನಗೆಯಲು ಹೋದರೂ ಅದರ ಪ್ರಯತ್ನ ವ್ಯರ್ಥವಾಗುತ್ತಿತ್ತು. ಇಷ್ಟಾದರೂ ಬಿಡದಿರೇ ಹಕ್ಕಿಗಳನ್ನು ಕಂಡು ನಲಿದಾಡಿ ದಿನವೂ ಅದರ ಹಾರಾಟದ ಕಸರತ್ತು ಸಾಗಿತ್ತು.
ಹೀಗಿರುವಾಗ ಒಂದು ದಿನ ಕೆರೆಯಲ್ಲಿ ಇದ್ದಕ್ಕಿಂದಂತೆ ಎಲ್ಲ ಕಪ್ಪೆಗಳು ಒತ್ತಟ್ಟಿಗೆ ಸೇರಿ ತಮ್ಮತಮ್ಮಲ್ಲೇ ಜೋರಾಗಿ ಮಾತಾಡುತ್ತಾ ಇರುವಾಗ ಈ ಮರಿ ಕಪ್ಪೆ “ವಿಷಯವೇನೆಂದು” ಕೇಳಿತು. ಅದಕ್ಕೆ ಹಿರಿಯ ಕಪ್ಪೆ “ನಮ್ಮ ಕೆರೆಗೆ ಹೊಸತಾಗಿ ಹಾವೊಂದು ಬಂದಿದೆ. ಈಗಾಗಲೇ ಮೀನುಗಳನ್ನು ನುಂಗಿದೆ. ನಮ್ಮ ಬಾರಿ ಯಾವಾಗಲೋ ಅಂತ ಹೆದರಿಕೆಯಾಗುತ್ತಿದೆ” ಅಂದಾಗ ಮರಿ ಕಪ್ಪೆ ಅಚಲ ಆತ್ಮವಿಶ್ವಾಸದಿಂದ “ನೀವೆಲ್ಲರೂ ನನ್ನ ಜೊತೆ ಸೇರಿ ಹಾರಲು ಪ್ರಯತ್ನಿಸಿ” ಅಂದಾಗ ಅವರೆಲ್ಲರ ಮೊಗದಲ್ಲಿ ಭಯ ಹೋಗಿ ಮಂದಹಾಸ ಮೂಡಿತು.
ಇಲ್ಲಿ ಮರಿಕಪ್ಪೆ ತನ್ನ ಹಾರುವ ಕನಸನ್ನು ಬದುಕಿಗೆ ಆಸರೆಯಾಗಿ, ತಮ್ಮವರ ಹಿತಕ್ಕಾಗಿ, ಪ್ರಾಣದ ಉಳಿವಿಗಾಗಿ ಬಳಸುವ ಯೋಚನೆ ಮಾಡಿರುವುದು ಅದರ ದಿನಂಪ್ರತಿಯ ಅವಿರತ ಅಭ್ಯಾಸ ಹಾಗೂ ಕನಸನ್ನು ನನಸು ಮಾಡುವುದರ ಕಡೆಗೆ ಕಪ್ಪೆಯ ಆತ್ಮವಿಶ್ವಾಸ. ಕನಸನ್ನು ಜೀವಿಸುವುದರ ಕಡೆಗೆ ವಾಲಿದ ಕಪ್ಪೆಯ ನಿಜವಾದ ಸಾಧನೆಯಾಗಿತ್ತು.
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿರುವ ಕನಸುಗಳ ಕಣಜವನ್ನು ಕಾಪಾಡಿಕೊಳ್ಳಬೇಕು. ಅದಕ್ಕೆ ಪರಿಶ್ರಮದ ನೀರೆರೆದು ಆತ್ಮವಿಶ್ವಾಸದ ಬೆಳಕು ನೀಡಿ, ನಿರಂತರ ಪ್ರಯತ್ನದಿಂದ ಪೋಷಿಸಿದಾಗ ಮಾತ್ರ ಆ ಕನಸುಗಳು ಬದುಕಿನ ಸುಂದರ ವಾಸ್ತವವಾಗುತ್ತದೆ. ಕನಸುಗಳು ಬದುಕಿನ ಅಲಂಕಾರವಲ್ಲ, ಬದುಕಿನ ವಾಸ್ತವಗಳು.


