ಸಿಂದಗಿಯಲ್ಲಿ ನಶೆ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರತಿಯೊಬ್ಬರೂ ನಶೆ ಮುಕ್ತ ಜೀವನದ ಸಂಕಲ್ಪ ಕೈಗೊಂಡು, ಇತರರಲ್ಲೂ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಬೇಕು. ಮಿಷನ್ ಸ್ಪಂದನ ಹಾಗೂ ನಶೆ ಮುಕ್ತ ಭಾರತ ಅಭಿಯಾನದಡಿ ದೇಶದ ೧೦ಕೋಟಿ ಜನರನ್ನು ವ್ಯಸನಮುಕ್ತರನ್ನಾಗಿಸುವ ಬ್ರಹ್ಮಕುಮಾರಿ ಸಂಸ್ಥೆಯ ಮಹಾ ಸಂಕಲ್ಪ ಶ್ಲಾಘನೀಯವಾಗಿದ್ದು, ಇಂತಹ ಜನಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ಬದಲಾವಣೆ ತರಲಿವೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಸಿಂದಗಿ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪೂಜ್ಯ ದಾದಿ ಪ್ರಕಾಶಮಣಿ ಜೀ ಅವರ ಪವಿತ್ರ ಸ್ಮರಣಾರ್ಥ ಆಯೋಜಿಸಿದ ನಶೆ ಮುಕ್ತ ಭಾರತ ಅಭಿಯಾನದಲ್ಲಿ ವಿಕಸಿತ ಭಾರತದತ್ತ ಒಂದು ಸಬಲವಾದ ಹೆಜ್ಜೆ ೧೦ಕೋಟಿ ನಶೆ ಮುಕ್ತರ ಪ್ರತಿಜ್ಞೆಗಳ ಮಹಾ ಅಭಿಯಾನದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಶೆ ಮುಕ್ತ ಸಮಾಜವೇ ಆರೋಗ್ಯವಂತ, ಸುಶಿಕ್ಷಿತ ಮತ್ತು ಸಂಸ್ಕಾರಯುತ ರಾಷ್ಟ್ರದ ಭದ್ರ ಅಡಿಪಾಯವಾಗಿದೆ. ಯುವಜನತೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಕುಟುಂಬ, ಸಮಾಜ ಹಾಗೂ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಈ ವೇಳೆ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಅಶೋಕ ಮನಗೂಳಿ ಮಾತನಾಡಿ, ಯುವಕರು ವ್ಯಸನ ಮತ್ತು ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಪೋಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ವ್ಯಸನಮುಕ್ತ ಹಾಗೂ ವಿದ್ಯಾವಂತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸ್ವಸ್ಥ ಸಮಾಜ, ಸಮರ್ಥ ಭಾರತ ಎಂಬ ಧ್ಯೇಯದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಸದಸ್ಯರು, ಗಣ್ಯರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ನಶೆ ಮುಕ್ತ ಜೀವನದ ಪ್ರತಿಜ್ಞೆ ಸ್ವೀಕರಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ಓಂ ಶಾಂತಿಯ ಪವಿತ್ರಾ ಅಕ್ಕಾಜಿ ವಹಿಸಿದ್ದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶಂಕರರಾವ್ ದೇಶಮುಖ ಸೇರಿದಂತೆ ಇತರರು ಇದ್ದರು.

