ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್.
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ನಮ್ಮ ಸುತ್ತಲಿನ ಪ್ರಕೃತಿಯನ್ನು ನಾವು ಸದಾ ನೋಡುತ್ತಿದ್ದು ಅದರಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಲೇ ಇರುತ್ತೇವೆ. ಹಾಗೆಯೇ ನಮ್ಮ ಈ ಶರೀರವನ್ನು ಕೂಡ ನಾವು ಗಮನಿಸಲೇಬೇಕು. ನಮ್ಮ ದೇಹದೊಳಗಿರುವ ಅಂಗಗಳ ಕಾರ್ಯನಿರ್ವಹಣೆ, ಶರೀರದಲ್ಲಾಗುವ ಬದಲಾವಣೆಗಳನ್ನು ಕೂಡ ನಾವು ಅರಿಯಲೇಬೇಕು. ದೇಹದ ವೈಜ್ಞಾನಿಕ ಸತ್ಯದ ಅರಿವು ನಮಗೆ ಇರಬೇಕು.
ನಾವು ತಿನ್ನುಣ್ಣುವ ಆಹಾರದ ಹಿಂದೆ ನೂರಾರು ಜನರ ಶ್ರಮವಿದೆ. ನಮ್ಮ ತಟ್ಟೆಗೆ ಬಂದು ಬೀಳುವ ಆಹಾರದ ಹಿಂದೆ ಒಬ್ಬ ರೈತನ ಶ್ರಮವಿದ್ದು ಹದವಾದ ಮಳೆ ಬೀಳುವ ಮುನ್ನವೇ ತನ್ನ ಹೊಲವನ್ನು ತಯಾರಿಸಿ ಇಟ್ಟುಕೊಳ್ಳುವ ರೈತ ಒಂದು ಪುಟ್ಟ ಮಳೆಯಾದೊಡನೆ ಆಯ್ದ ಬೀಜಗಳನ್ನು ಹೊಲದಲ್ಲಿ ಬಿತ್ತುತ್ತಾನೆ. ನೀರು ಹಾಯಿಸುತ್ತಾನೆ, ಕಳೆ ತೆಗೆಯುತ್ತಾನೆ, ಹುಲುಸಾದ ಬೆಳೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ಹಕ್ಕಿ ಪಕ್ಷಿಗಳು ತೆನೆಯನ್ನು ಹಾಳುಗೆಡವದಂತೆ, ಹುಳು ಹುಪ್ಪಟೆಗಳು ಬೀಳದಂತೆ ಗೊಬ್ಬರ, ರಾಸಾಯನಿಕಗಳನ್ನು ಬಳಸಿ ರಕ್ಷಿಸುತ್ತಾನೆ. ನಂತರ ಬೆಳೆದ ಬೆಳೆಯನ್ನು ತೆನೆ ಮುರಿದು ರಾಶಿ ಮಾಡಿ ಚೀಲಗಳಲ್ಲಿ ತುಂಬಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು ಮಾರುವ ಮತ್ತು ನಾವು ಅದನ್ನು ಕೊಳ್ಳುವ ಹಸನು ಮಾಡುವ ಹಿಟ್ಟು ಮಾಡಿ ಜರಡಿಯಾಡಿ ಅದನ್ನು ರೊಟ್ಟಿ ಮಾಡಿ, ಆ ರೊಟ್ಟಿ ನಮ್ಮ ತಟ್ಟೆಗೆ ಬಂದು ಬೀಳುವ ಮಧ್ಯದಲ್ಲಿ ನೂರಾರು ಜನರ ಬೆವರಿನ ಶ್ರಮವಿರುತ್ತದೆ ಆದ್ದರಿಂದ ನಾವು ನಮಗೆ ಕಿಂಚಿತ್ ಸಹಾಯ ಮಾಡಿದ ವ್ಯಕ್ತಿಯ ಕುರಿತು ಕೂಡ ಅಷ್ಟೇ ಕೃತಜ್ಞತಾ ಭಾವವನ್ನು ಯಾವಾಗಲೂ ಹೊಂದಿರಲೇಬೇಕು.
ನಮ್ಮ ಬದುಕಿನಲ್ಲಿ ಸಾಮಾನ್ಯ ಜ್ಞಾನದ ಜೊತೆ ವಿಜ್ಞಾನವು ಬೆರೆತಿದೆ. ನಮಗೆ ಗೊತ್ತಿಲ್ಲದೆ ನಾವು ವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಕಪ್ ನೀರಿಗೆ ಮೂರು ಚಮಚ ಚಹಾ ಪುಡಿ ಹಾಕಿ ಕುದಿಸಿದಾಗ ಚಹಾ ತುಸು ಒಗರು, ಕಹಿ ಎನಿಸುತ್ತದೆ. ಹಾಗೆಂದು ಚಹಾದಲ್ಲಿರುವ ಕಹಿಯನ್ನು ತೆಗೆಯಲು ಸಾಧ್ಯವೇ ಎಂದರೆ ವೈಜ್ಞಾನಿಕವಾಗಿ ಅದು ಕೂಡ ಸಾಧ್ಯವಿಲ್ಲ. ಕಾರಣ ಚಹಾದ ಎಸರಿನಲ್ಲಿರುವ ಒಗರುತನವನ್ನು ಕಡಿಮೆ ಮಾಡಬೇಕೆಂದರೆ ಅದಕ್ಕೆ ನೀರನ್ನು ಹಾಕಬೇಕು. ಹಾಲನ್ನು ಹಾಕಿದರೆ ಮತ್ತಷ್ಟು ತಟಸ್ಥಗೊಳಿಸಬಹುದು. ಇಲ್ಲಿ ಚಹಾ ಪುಡಿ ಆಸಿಡ್ನಂತೆ( ಆಮ್ಲ) ಕಾರ್ಯನಿರ್ವಹಿಸಿದರೆ ನೀರು( ಪ್ರತ್ಯಾಮ್ಲ) ಬೇಸನಂತೆ ವರ್ತಿಸುತ್ತದೆ ಮತ್ತು ಹಾಲು ತಟಸ್ಥತೆಯನ್ನು ತೋರುತ್ತದೆ.

ಸಾಂಬಾರ್ ನಲ್ಲಿ ಗಟ್ಟಿಯಾದ ಬೇಳೆಯ ಗಸಿ ಮತ್ತು ತರಕಾರಿ ಹೋಳುಗಳು ತಳದಲ್ಲಿ ಇದ್ದರೆ ಮೇಲೆ ತಿಳಿಯಾದ ನೀರು ನಿಂತಿರುತ್ತದೆ.. ಇದರ ಮೂಲಕ ನಾವು ಸ್ಥಿತಿಸ್ಥಾಪಕತ್ವವನ್ನು ಕಲಿಯಬಹುದು.
ಇನ್ನು ಘನಪದಾರ್ಥವಾದ ಸಿಲಿಂಡರ್ ನಲ್ಲಿ ದ್ರವೀಕೃತ ಅನಿಲವನ್ನು ಸೇರಿಸಿದ್ದು ಗ್ಯಾಸ್ ಅನ್ನು ಆನ್ ಮಾಡಿದಾಗ ಅನಿಲವು ಇಂಧನದ ರೂಪದಲ್ಲಿ ಹೊರಹೊಮ್ಮುತ್ತದೆ.. ಇದು ನಮ್ಮ ವಿಜ್ಞಾನದಲ್ಲಿ ಘನ ದ್ರವ ಮತ್ತು ಅನಿಲದ ಸ್ಥಿತಿಗಳನ್ನು ತೋರಲು ಅನುಕೂಲ ಅಲ್ಲವೇ?
ನಮ್ಮ ಆರೋಗ್ಯವನ್ನು ಕಾಯಲು ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ ಮತ್ತು ಹಸಿರು ತರಕಾರಿಗಳು ಅತ್ಯವಶ್ಯಕ.. ನಮ್ಮ ತಟ್ಟೆಯಲ್ಲಿ ಇರುವ ತರಕಾರಿ ಕಾಳು ಬೇಳೆ ಹಸಿರು ತಪ್ಪಲು ಪಲ್ಯಗಳು ನಮ್ಮ ಆಹಾರದ ತಟ್ಟೆಯಲ್ಲಿ ನಮಗೆ ಸಿಗುತ್ತವೆ ಅಲ್ಲವೇ?
ಅಡುಗೆ ಮನೆಯಲ್ಲಿ ನಾವು ಆವಿಯಾಗುವುದು, ಕುದಿಯುವುದು ಕಾಯಿಸುವುದು ಹೀಗೆ ಹತ್ತು ಹಲವು ವೈಜ್ಞಾನಿಕ ಸಂಗತಿಗಳನ್ನು ಕಲಿಯುತ್ತೇವೆ.
ಚಿಕ್ಕಂದಿನಲ್ಲಿ ಮಕ್ಕಳಿಗೆ ಪಾಠಗಳನ್ನು ನಾವು ಕಲಿಸಿಕೊಡಲೇಬೇಕು.. ನಾವು ಆಗ ಕಲಿಸಿಕೊಡದೆ ಇದ್ದರೆ ಮುಂದೆ ಮಕ್ಕಳು ತಮ್ಮ ಟೀಚರ್ ಹೇಳಿರುವುದನ್ನೆ ಸರಿ ಎಂದು ಪಾಲಕರು ಹೇಳುವ ವಿಷಯಗಳು ತಪ್ಪು ಎಂದು ಹೇಳುವ ಸಾಧ್ಯತೆಗಳು ಬಹಳ ಇರುತ್ತದೆ. ಇದಕ್ಕೆ ಕಾರಣ ಪಾಲಕರು! ಎಂದರೆ ತಪ್ಪಿಲ್ಲ. ಚಿಕ್ಕಂದಿನಲ್ಲಿ ಮಕ್ಕಳಿಗೆ ಎಲ್ಲ ವಿಷಯಗಳ ಅರಿವನ್ನು ಮೂಡಿಸಲು ಪಾಲಕರು ಪ್ರಯತ್ನಿಸಲೇಬೇಕು.


