ಸ್ಥಳ ಬದಲಾವಣೆಗೆ ಸಾರ್ವಜನಿಕರ ಆಗ್ರಹ | ಸ್ಥಳ ಬದಲಾವಣೆ ಪ್ರಶ್ನೆಯೇ ಇಲ್ಲ” ಎಂದ ಕಾರ್ಯದರ್ಶಿ ಔರಂಗಾಬಾದ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಮಾರು ಮೂರುಕೋಟಿ(3ಕೋಟಿ)ರೂಪಾಯಿಗಳ ವಿವಿಧ ಕಾಮಗಾರಿಗಳ ಕ್ಯಾಂಟೀನ್, ಗೋಡವಾನ್ ನಿರ್ಮಾಣ,ನಾಲ್ಕು ವ್ಯಾಪಾರ ಮಳಿಗೆ, ಹೈಟೆಕ್ ಆಫೀಸ್ ಹಾಗೂ ಶೌಚಾಲಯಗಳ ಕಟ್ಟಡ ಕಾಮಗಾರಿಗಳಿಗೆ ಮಂಜುರಾತಿ ದೊರೆತಿದ್ದು ಶೀಘ್ರದಲ್ಲಿಯೆ ಕಾಮಗಾರಿ ನಡೆಯಲಿದೆ ಎಂದು ಕಾರ್ಯದರ್ಶಿ ಐ.ಎಸ್.ಔರಂಗಾಬಾದ ಅವರು ಚಡಚಣದ ಎಪಿಎಮ್ಸಿ ಯಲ್ಲಿ ಹೇಳಿದರು.
ಚಡಚಣ ಎಪಿಎಮ್ಸಿ ಉಪಮಾರುಕಟ್ಟೆಯ ಒಟ್ಟು ಜಾಗ 7 ಎಕರೆ 10 ಗುಂಟೆ ಇದ್ದು ಈಗ ಕೇವಲ 6 ಎಕರೆ 20 ಗುಂಟೆ ಜಾಗ ಮಾತ್ರ ಲಭ್ಯವಿದೆ ಎಂದು ತಮ್ಮ ಅಳಲನ್ನು ಪತ್ರಕರ್ತರ ಮುಂದೆ ತೋಡಿಕೊಂಡರು.
ಹೈಟೆಕ್ ಶೌಚಾಲಯದ ಸ್ಥಳ ಆಯ್ಕೆ ವಿವಾದಕ್ಕೆ ಕಾರಣವಾಗಿದ್ದು, ಸಾರ್ವಜನಿಕರ ವಾಸದ ಮನೆಗಳಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಲು ಮುಂದಾಗಿರುವ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ಪರಿಸರ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಈ ಸ್ಥಳ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿರುವ ನಿವಾಸಿಗಳು, ಯಾರಿಗೂ ತೊಂದರೆಯಾಗದ ಪರ್ಯಾಯ ಸ್ಥಳದಲ್ಲಿ ಶೌಚಾಲಯ ನಿರ್ಮಿಸುವಂತೆ ಎಪಿಎಂಸಿ ಕಾರ್ಯದರ್ಶಿ ಐ.ಎಸ್.ಔರಂಗಾಬಾದ ಹಾಗೂ ಆಡಳಿತವನ್ನು ಒತ್ತಾಯಿಸಿದ್ದಾರೆ.
ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣಕ್ಕೆ ಹೊಂದಿಕೊಂಡಿರುವ ನಿವಾಸಿಗಳ ಪ್ರಕಾರ ಮತ್ತು ನಿಲೇಶ ಸಿಂಗ್ ಹಜೇರಿ ಅವರು ಮಾತನಾಡಿ, ಪ್ರಸ್ತುತ ಆಯ್ಕೆ ಮಾಡಿರುವ ಸ್ಥಳದ ಪಕ್ಕದಲ್ಲೇ ಹಲವು ಕುಟುಂಬಗಳು ಸುಮಾರು ವರ್ಷಗಳಿಂದ ವಾಸಿಸುತ್ತಿವೆ. ಈಗಾಗಲೇ ಆ ಭಾಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಶೌಚಾಲಯದ ಮಲಿನ ನೀರನ್ನು ಚರಂಡಿಗೆ ಸಂಪರ್ಕಿಸಿದರೂ ಅಥವಾ ಇಂಗುಬಚ್ಚಲು (ಸೋಕ್ ಪಿಟ್) ನಿರ್ಮಿಸಿದರೂ ಕಾಲಕ್ರಮೇಣ ದುರ್ವಾಸನೆ, ನೈರ್ಮಲ್ಯ ಸಮಸ್ಯೆ ಹಾಗೂ ಸೊಳ್ಳೆಗಳ ಕಾಟ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿವಾಸಿಗಳು ಜು.೨೭ ರಂದು ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಎಪಿಎಂಸಿ ಕಾರ್ಯದರ್ಶಿ ಐ.ಎಸ್.ಔರಂಗಬಾದ್ ಅವರು ಸಾರ್ವಜನಿಕರ ಆಕ್ಷೇಪವನ್ನು ತಳ್ಳಿ ಹಾಕಿದರು. “ಶೌಚಾಲಯ ನಿರ್ಮಾಣಕ್ಕೆ ನಮ್ಮ ಇಂಜಿನಿಯರ್ಗಳು ತಾಂತ್ರಿಕವಾಗಿ ಸೂಕ್ತ ಸ್ಥಳವನ್ನು ಈಗಾಗಲೇ ಗುರುತಿಸಿದ್ದಾರೆ. ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೂ ಕಾಮಗಾರಿ ವಹಿಸಲಾಗಿದೆ. ಇದು ಎಪಿಎಂಸಿಯ ಸ್ವಂತ ಜಾಗವಾಗಿದ್ದು, ಯಾವ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಎಪಿಎಂಸಿಗೇ ಇದೆ” ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, “ಈ ಕಾಮಗಾರಿಗೆ ಪಟ್ಟಣ ಪಂಚಾಯಿತಿ, ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಇತರ ಯಾವುದೇ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿಲ್ಲ. ಹೀಗಾಗಿ ಶೌಚಾಲಯವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಅವರು ಖಡಾಖಂಡಿತವಾಗಿ ತಳ್ಳಿಹಾಕಿದರು.
ಆದರೆ ಎಪಿಎಂಸಿ ಆಡಳಿತದ ಈ ನಿಲುವಿನಿಂದ ಅಸಮಾಧಾನಗೊಂಡಿರುವ ಸ್ಥಳೀಯರು, ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಹಿತಾಸಕ್ತಿಗೆ ಆದ್ಯತೆ ನೀಡಿ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಪುನಃ ಆಗ್ರಹಿಸಿದರಲ್ಲದೆ, ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು.
ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈ ಸಂದರ್ಭದಲ್ಲಿ ಅರವಿಂದ ಗಡ್ಡದೇವರಮಠ ಹಾಗೂ ಸ್ಥಳಿಯರು, ಎಪಿಎಮ್ಸಿ ಸಿಬ್ಬಂದಿ ಇತರರು ಇದ್ದರು.

