ಬಸರಕೋಡ ಬಸವೇಶ್ವರ ದೇವಸ್ಥಾನ ಕಳ್ಳತನ ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು | ಗುಜರಾತ್, ರಾಜಸ್ಥಾನದ ಮೂವರು ಆರೋಪಿಗಳ ಬಂಧನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ಬಹುಚರ್ಚಿತ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ₹52.70 ಲಕ್ಷ ಮೌಲ್ಯದ ಕಳುವಾದ ಮೂರ್ತಿ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷಣ ನಿಂಬರಗಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 5ರ ರಾತ್ರಿ ದೇವಸ್ಥಾನದ ಎರಡು ಕಬ್ಬಿಣದ ಬಾಗಿಲುಗಳ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಗರ್ಭಗುಡಿಯಲ್ಲಿದ್ದ 32 ಕೆ.ಜಿ. ತೂಕದ, ಅಂದಾಜು ₹51.20 ಲಕ್ಷ ಮೌಲ್ಯದ ಶ್ರೀ ಪವಾಡ ಬಸವೇಶ್ವರರ ಬೆಳ್ಳಿ ಮೂರ್ತಿಯನ್ನು ಕಳವು ಮಾಡಿದ್ದರು. ಈ ಕುರಿತು ದೇವಸ್ಥಾನ ಸಮಿತಿ ಅಧ್ಯಕ್ಷ ಕರನಂದೆಪ್ಪ ಯಮನಪ್ಪ ಬಿರಾದಾರ ನೀಡಿದ ದೂರಿನ ಮೇರೆಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಡಿಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಮಹಮ್ಮದ್ ಫಸಿಯುದ್ದೀನ್, ಪಿಎಸ್ಐ ಸಂಜಯ ತಿಪ್ಪರೆಡ್ಡಿ ಹಾಗೂ ಪಿಎಸ್ಐ ಆರ್.ಎಸ್. ಭಂಗಿ ನೇತೃತ್ವದಲ್ಲಿ ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು.
ತನಿಖೆಯಲ್ಲಿ ದೊರೆತ ತಾಂತ್ರಿಕ ಹಾಗೂ ಇತರ ಸುಳಿವಿನ ಆಧಾರದ ಮೇಲೆ ಗುಜರಾತ್ನಲ್ಲಿ ವಾಸವಾಗಿದ್ದ ರಾಜಸ್ಥಾನ ಮೂಲದ ಸುರೇಶಕುಮಾರ ಶಾಂತಿಲಾಲ ಸೋನಿ (51) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಕಳ್ಳತನವನ್ನು ಒಪ್ಪಿಕೊಂಡಿದ್ದಲ್ಲದೆ, ತನ್ನೊಂದಿಗೆ ಬ್ರಹ್ಮಾರ್ ಟೋಪಿಯಾ ನೇಟ್ (35) ಹಾಗೂ ಇಂದ್ರಜೀತ್ ಮನಿಯಾರ್ ನೇಟ್ (33) ಕೂಡ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಉಳಿದ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳು ಜೂನ್ 20ರಂದು ಬಸರಕೋಡಕ್ಕೆ ಬಂದು ದೇವಸ್ಥಾನದ ಪರಿಶೀಲನೆ ನಡೆಸಿ ಕಳ್ಳತನದ ಸಂಚು ರೂಪಿಸಿದ್ದರೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ನಂತರ ಜುಲೈ 5ರ ರಾತ್ರಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಕಳವು ಮಾಡಿದ ಬೆಳ್ಳಿ ಮೂರ್ತಿಯ ಪ್ರಮುಖ ಭಾಗವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ, ಉಳಿದ ಭಾಗವನ್ನು ಕರಗಿಸಿ ಬೆಳ್ಳಿಯ ಗಟ್ಟಿಗಳನ್ನಾಗಿ ಮಾಡಿರುವುದಾಗಿ ತಿಳಿಸಿದ್ದಾರೆ ಎಂದರು.
ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳ ಪಾತ್ರವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.
ಈ ಸಂಕೀರ್ಣ ಪ್ರಕರಣವನ್ನು ತಾಂತ್ರಿಕ ನೈಪುಣ್ಯ ಹಾಗೂ ಪರಿಣಾಮಕಾರಿ ತನಿಖೆಯ ಮೂಲಕ ಭೇದಿಸಿದ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿ, ಉತ್ತರ ವಲಯ ಐಜಿಪಿ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರತ್ಯೇಕ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಶಪಡಿಸಿಕೊಂಡ ವಸ್ತುಗಳು
*4 ಕೆ.ಜಿ. ತೂಕದ ಬೆಳ್ಳಿ ಮೂರ್ತಿಯ ತುಂಡುಗಳು
*23 ಕೆ.ಜಿ. ತೂಕದ ಕರಗಿಸಿದ ಬೆಳ್ಳಿಯ ಗಟ್ಟಿಗಳು
*₹67,600 ನಗದು
*2 ಮೊಬೈಲ್ ಫೋನ್ಗಳು
*ಕೃತ್ಯಕ್ಕೆ ಬಳಸಿದ ಕಾರು (GJ-01/KS-4317)
*2 ಕಬ್ಬಿಣದ ರಾಡ್ಗಳು
ಸೇರಿದಂತೆ ಒಟ್ಟು ₹52.70 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

