ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಮಾನವನ ಮನಸ್ಸು ಒಂದು ಅದ್ಭುತ ಶಕ್ತಿ. ಆದರೆ ಅದೇ ಮನಸ್ಸು ನಿಯಂತ್ರಣ ತಪ್ಪಿ ಒಂದೇ ವಿಷಯವನ್ನು ಪದೇ ಪದೇ ಯೋಚಿಸಲು ಶುರುಮಾಡಿದಾಗ, ಅದು ‘ಅತಿಯಾದ ಆಲೋಚನೆ’ ಅಥವಾ ‘ಓವರ್ಥಿಂಕಿಂಗ್’ ಎಂಬ ಮಾನಸಿಕ ಸುಳಿಯಾಗುತ್ತದೆ. ಇದು ನಮ್ಮ ಇಂದಿನ ಶಾಂತಿ ಮತ್ತು ಉತ್ಪಾದಕತೆಯನ್ನು ನಾಶಪಡಿಸುತ್ತದೆ. ಅತಿಯಾದ ಯೋಚನೆ ತಲೆಗೊಂದು ಓವರ್ ಲೋಡ್ ವಿಲನ್ ಇದ್ದಂತೆ. ಸೈಲಂಟ್ ಕಿಲ್ಲರ್ ಇದ್ದಂತೆ ಆಲೋಚನೆಗಳ ಸುಳಿಯಿಂದ, ಮನಸ್ಸಿನೊಳಗಿನ ಮಾಯಾಜಾಲದಿಂದ ಹೊರ ಬರುವುದು ಹೇಗೆ ಎಂಬ ಪ್ರಶ್ನೆ ಬಹುತೇಕ ಬಹಳಷ್ಟು ಜನರನ್ನು ಕಾಡಿಸುತ್ತದೆ. ಇದನ್ನು ಒಂದು ಸುಂದರ ಕಥೆ ಮತ್ತು ಜಗತ್ತಿನ ಶ್ರೇಷ್ಠ ಸಾಧಕರ ಉದಾಹರಣೆಗಳ ಮೂಲಕ ಅರ್ಥಮಾಡಿಕೊಳ್ಳೋಣ.
ಪ್ರೇರಣಾದಾಯಿ ಕಥೆ
ಒಂದಾನೊಂದು ಕಾಲದಲ್ಲಿ, ಪ್ರಯಾಣಿಕನೊಬ್ಬ ದೂರದ ಊರಿಗೆ ಕಾಲ್ನನಡಿಗೆಯಲ್ಲಿ ಹೊರಟಿದ್ದನು. ದಾರಿಯಲ್ಲಿ ಹೋಗುವಾಗ ಆತನಿಗೆ ಹಠಾತ್ ಒಂದು ಆಲೋಚನೆ ಬಂದಿತು: “ಮುಂದೆ ಸಿಗುವ ಕಾಡಿನ ನದಿಗೆ ಇರುವ ಏಕೈಕ ಹಳೆಯ ಮರದ ಸೇತುವೆ ಮುರಿದು ಬಿದ್ದಿದ್ದರೆ ನಾನು ಏನು ಮಾಡಲಿ? ನಾನು ನದಿಗೆ ಬಿದ್ದು ಪ್ರಾಣ ಕಳೆದುಕೊಂಡರೆ ನನ್ನ ಕುಟುಂಬದ ಗತಿಯೇನು? “ಈ ಆಲೋಚನೆ ಆತನ ತಲೆಯಲ್ಲಿ ಗಾಢವಾಗಿ ಕುಳಿತುಕೊಂಡಿತು. ಆತ ಮುಂದೆ ನಡೆಯುತ್ತಲೇ ಇದ್ದರೂ, ಆತನ ಮನಸ್ಸು ಮಾತ್ರ ಆ ಮುರಿದ ಸೇತುವೆಯ ಮೇಲೆಯೇ ಇತ್ತು. ಭಯದಿಂದ ಆತನ ಕೈಕಾಲುಗಳು ನಡುಗುತ್ತಿದ್ದವು, ಬೆವರುತ್ತಿದ್ದವು. ದಾರಿಯುದ್ದಕ್ಕೂ ಸಿಕ್ಕ ಸುಂದರ ಪ್ರಕೃತಿ, ಹಕ್ಕಿಗಳ ಗಾನ ಯಾವುದೂ ಆತನ ಕಣ್ಣಿಗೆ ಬೀಳಲಿಲ್ಲ. ಆತ ಮನಸ್ಸಿನಲ್ಲೇ ನೂರು ಬಾರಿ ನದಿಗೆ ಬಿದ್ದು ಒದ್ದಾಡುವ ದೃಶ್ಯವನ್ನು ಕಲ್ಪಿಸಿಕೊಂಡು ತೀವ್ರ ಮಾನಸಿಕ ಯಾತನೆ ಅನುಭವಿಸಿದನು. ಕೊನೆಗೆ ಆತ ನದಿಯ ದಡವನ್ನು ತಲುಪಿದಾಗ, ಅಲ್ಲಿನ ದೃಶ್ಯ ಕಂಡು ಆಶ್ಚರ್ಯಚಕಿತನಾದನು. ಆ ಹಳೆಯ ಸೇತುವೆಯ ಪಕ್ಕದಲ್ಲೇ ಸರ್ಕಾರವು ಹೊಸದಾದ, ಸುಭದ್ರವಾದ ಕಾಂಕ್ರೀಟ್ ಸೇತುವೆಯನ್ನು ನಿರ್ಮಿಸಿತ್ತು! ಜನರು ಯಾವುದೇ ಭಯವಿಲ್ಲದೆ ಅದರ ಮೇಲೆ ಓಡಾಡುತ್ತಿದ್ದರು. ಆತ ನಿಟ್ಟುಸಿರು ಬಿಟ್ಟು ಅಲ್ಲಿನ ಮರದ ಕೆಳಗೆ ಕುಳಿತಾಗ, ಅಲ್ಲೇ ಇದ್ದ ಒಬ್ಬ ಜ್ಞಾನಿ ವೃದ್ಧೆ ನಗುತ್ತಾ ಹೀಗೆಂದಳು. “ಮಗನೇ, ನೀನು ಆ ಸೇತುವೆಯನ್ನು ತಲುಪುವ ಮುನ್ನವೇ ನಿನ್ನ ಮನಸ್ಸಿನಲ್ಲಿ ನೂರು ಬಾರಿ ಬಿದ್ದು ಸತ್ತೆ. ಆದರೆ ವಾಸ್ತವದಲ್ಲಿ ಬದುಕು ಅತ್ಯಂತ ಸುಲಭವಾಗಿತ್ತು. ಚಿಂತೆಯು ಇಂದಿನ ಶಕ್ತಿಯನ್ನು ಕಳೆಯುತ್ತದೆಯೇ ಹೊರತು ನಾಳೆಯ ಸಮಸ್ಯೆಯನ್ನು ಪರಿಹರಿಸುವುದಿಲ್ಲ.”
ಅತಿಯಾದ ಆಲೋಚನೆಯನ್ನು ಗೆಲ್ಲುವುದು ಹೇಗೆ?
ಆಲೋಚನೆಯ ಅತಿರೇಕವೇ ಅತಿಯಾದ ಆಲೋಚನೆ ಮನಸ್ಸಿನ ಗಾಡಿಗೆ ತಡೆಗೋಡೆಯಾಗಿದೆ. ಅದರಿಂದ ಹೊರಬರಲು ಪ್ರಮುಖ ಹಂತಗಳು ಮತ್ತು ಸಾಧಕರ ಉದಾಹರಣೆಗಳು ಇಲ್ಲಿವೆ.

ಆಲೋಚನೆಯನ್ನು ಗುರುತಿಸಿ
ಆಲೋಚನೆಯ ಅತಿರೇಕವೇ ಅತಿಯಾದ ಆಲೋಚನೆ. ಒಮ್ಮೆ ಈ ಓವರ್ ಥಿಂಕಿಂಗ್ ಗೀಳು ಹತ್ತಿದರೆ ಅದು ನಮ್ಮನ್ನು ಯೋಚನೆಯ ಜಾಲದಲ್ಲಿ ಬೀಳಿಸಿಬಿಡುತ್ತದೆ. ಅತಿಯಾದ ಆಲೋಚನೆಯ ಮನಕ್ಕೆ ಬೇಲಿ ಹಾಕಬೇಕೆಂದರೆ, ಆಲೋಚನೆಯನ್ನು ಗುರುತಿಸಿ ಮತ್ತು ಒಪ್ಪಿಕೊಳ್ಳಿ ನಾವು ಅತಿಯಾಗಿ ಯೋಚಿಸುತ್ತಿದ್ದೇವೆ ಎಂದು ನಮ್ಮ ಮನಸ್ಸಿಗೆ ನಾವೇ ಎಚ್ಚರಿಕೆ ನೀಡುವುದು ಮೊದಲ ಹಂತ. ಸಮಸ್ಯೆಯನ್ನು ಒಪ್ಪಿಕೊಂಡಾಗ ಮಾತ್ರ ಅದಕ್ಕೆ ಪರಿಹಾರ ಹುಡುಕಲು ಸಾಧ್ಯ. ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ನ ದೈತ್ಯ ಆಟಗಾರ ವಿರಾಟ್ ಕೊಹ್ಲಿ ಅವರು ಒಂದು ಕಾಲದಲ್ಲಿ ರನ್ ಗಳಿಸಲು ತೀವ್ರವಾಗಿ ಒದ್ದಾಡುತ್ತಿದ್ದರು. ಮಾಧ್ಯಮಗಳ ಟೀಕೆ ಮತ್ತು ನಿರಂತರ ವೈಫಲ್ಯದಿಂದ ಅವರು ತೀವ್ರ ಮಾನಸಿಕ ಒತ್ತಡ ಹಾಗೂ ಅತಿಯಾದ ಆಲೋಚನೆಗೆ ಒಳಗಾಗಿದ್ದರು. ಆಗ ಅವರು ಮಾಡಿದ್ದಿಷ್ಟೇ ಕ್ರಿಕೆಟ್ನಿಂದ ಕೊಂಚ ದಿನಗಳ ಕಾಲ ಸಂಪೂರ್ಣವಾಗಿ ದೂರ ಸರಿದರು. ತಾನು ಮಾನಸಿಕವಾಗಿ ದಣಿದಿದ್ದೇನೆ ಎಂಬುದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರು. ಆ ಆಲೋಚನೆಗಳ ಓಟಕ್ಕೆ ವಿರಾಮ ನೀಡಿ, ಮೈದಾನಕ್ಕÉ ಮರಳಿದಾಗ ಅವರು ಮತ್ತೆ ಹಳೆಯ ಫಾರ್ಮ್ಗೆ ಬಂದು ಶತಕಗಳ ಸುರಿಮಳೆಗರೆದರು. “ಅತಿಯಾದ ಆಲೋಚನೆಯು ಅಸ್ತಿತ್ವದಲ್ಲಿಲ್ಲದ ಸಮಸ್ಯೆಗಳನ್ನು ಸೃಷ್ಟಿಸುವ ಒಂದು ಕಲೆಯಾಗಿದೆ.” ಎಂಬುದನ್ನು ತಿಳಿದುಕೊಳ್ಳಬೇಕು.
ಗಮನ ಹರಿಸಿ
‘ಬಿಲ್ಲುಗಾರನ ದೃಷ್ಟಿ ಹಕ್ಕಿಯ ಕಣ್ಣಿನ ಮೇಲಿರಬೇಕೇ ಹೊರತು, ಹಕ್ಕಿ ಕುಳಿತಿರುವ ಮರದ ಮೇಲಲ್ಲ.’ ಪ್ರಸ್ತುತ ಕ್ಷಣದ ಮೇಲೆ ಗಮನ ಹರಿಸಿ ಅತಿಯಾದ ಆಲೋಚನೆಯು ಹೆಚ್ಚಾಗಿ ಭೂತಕಾಲದ ಪಶ್ಚಾತ್ತಾಪ ಅಥವಾ ಭವಿಷ್ಯದ ಆತಂಕದಿಂದ ಕೂಡಿರುತ್ತದೆ. ಇವೆರಡನ್ನೂ ಬಿಟ್ಟು ‘ಈ ಕ್ಷಣ’ ದಲ್ಲಿ ಬದುಕುವುದನ್ನು ಕಲಿಯಬೇಕು. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಹೆಸರಾಂತ ಲೇಖಕಿ ಸುಧಾ ಮೂರ್ತಿ ಅವರು ತಮ್ಮ ಜೀವನದಲ್ಲಿ ಎದುರಾದ ನೂರಾರು ಸವಾಲುಗಳನ್ನು ಅತ್ಯಂತ ಸರಳವಾಗಿ ಎದುರಿಸಿದ್ದಾರೆ. ಅವರ ಯಶಸ್ಸಿನ ರಹಸ್ಯವೆಂದರೆ ಪ್ರಸ್ತುತ ಕ್ಷಣದಲ್ಲಿ ತಮಗೆ ಸಿಕ್ಕ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದು. “ನಾಳೆಯ ದಿನ ನಮ್ಮ ಕೈಯಲ್ಲಿಲ್ಲ, ನಿನ್ನೆಯ ದಿನ ಮುಗಿದುಹೋಗಿದೆ. ಇಂದು ನಮ್ಮ ಕೈಲಾಗಿರುವುದನ್ನು ಮಾಡೋಣ” ಎಂಬುದು ಅವರ ಸರಳ ಸಿದ್ಧಾಂತ. ಇದು ಅವರ ಮನಸ್ಸನ್ನು ಸದಾ ಪ್ರಶಾಂತವಾಗಿಡುತ್ತದೆ. ನಮಗೆ ನಾಳೆಯ ದಿನವನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ಇಂದಿನ ದಿನವನ್ನು ಉತ್ತಮಗೊಳಿಸಬಹುದು.”ಎಂದಿದ್ದಾರೆ ಮಹಾತ್ಮ ಗಾಂಧಿ.
ಜ್ಞಾನ ಎಷ್ಟೇ ಇದ್ದರೂ ಗಮನ ಕೇಂದ್ರೀಕರಿಸದಿದ್ದರೆ ಯಾವುದೇ ಕೆಲಸದಲ್ಲಿ ಪರಿಣಾಮಕಾರಿ ಫಲಿತಾಂಶ ಸಿಗುವುದಿಲ್ಲ. ಸೂರ್ಯನ ಕಿರಣಗಳನ್ನು ಒಂದೆಡೆ ಕೇಂದ್ರೀಕರಿಸಿದಾಗ ಮಾತ್ರ ಕಾಗದ ಸುಡಲು ಸಾಧ್ಯ. ಅದೇ ರೀತಿ ನಮ್ಮ ಗಮನ ಒಂದೆಡೆ ಕೇಂದ್ರಿತವಾದಾಗ ಯಶಸ್ಸು ಸಿಗುತ್ತದೆ.

ವಿಶ್ಲೇಷಣೆ ನಿಲ್ಲಿಸಿ
ಒಂದು ದೊಡ್ಡ ಬೆಟ್ಟವನ್ನು ಏರಬೇಕಾದರೂ ಮೊದಲು ಹೆಜ್ಜೆಯಿಂದಲೇ ಆರಂಭಿಸಬೇಕು. ದಿನನಿತ್ಯದ ಸಣ್ಣ ಸಕಾರಾತ್ಮಕ ಬದಲಾವಣೆಗಳನ್ನು ತರಬೇಕು. ಸಣ್ಣ ಹೆಜ್ಜೆ ಇಡಿ, ಯೋಜನೆಗಳನ್ನು ರೂಪಿಸುವುದರಲ್ಲೇ ಸಮಯ ಕಳೆಯುವ ಬದಲು, ತಕ್ಷಣವೇ ಒಂದು ಸಣ್ಣ ಕೆಲಸವನ್ನು ಆರಂಭಿಸಬೇಕು. ಕ್ರಿಯೆಯು ಆತಂಕವನ್ನು ಕೊಲ್ಲುತ್ತದೆ. ಇಸ್ರೋ ವಿಜ್ಞಾನಿಗಳು ೨೦೧೯ ರಲ್ಲಿ ‘ಚಂದ್ರಯಾನ-೨’ ಮಿಷನ್ ಕೊನೆಯ ಕ್ಷಣದಲ್ಲಿ ವಿಫಲವಾದಾಗ ಇಡೀ ದೇಶವೇ ಕಣ್ಣೀರು ಹಾಕಿತ್ತು. ವಿಜ್ಞಾನಿಗಳು ಅತಿಯಾಗಿ ಯೋಚಿಸುತ್ತಾ ಕಾಲಹರಣ ಮಾಡಿದ್ದರೆ ಇಂದು ಭಾರತ ಇತಿಹಾಸ ಸೃಷ್ಟಿಸುತ್ತಿರಲಿಲ್ಲ. ಅವರು ವೈಫಲ್ಯದ ಆಲೋಚನೆಯನ್ನು ಬದಿಗಿಟ್ಟು, ತಕ್ಷಣವೇ ಮುಂದಿನ ಸಣ್ಣ ಹೆಜ್ಜೆಯಾಗಿ ತಪ್ಪುಗಳನ್ನು ವಿಶ್ಲೇಷಿಸಲು ಶುರುಮಾಡಿದರು. ದಿನದ ಇಪ್ಪತ್ನಾಲ್ಕು ಗಂಟೆಯೂ ಶ್ರಮಪಟ್ಟು ‘ಚಂದ್ರಯಾನ-೩’ ಯೋಜನೆಗೆ ಕೈಹಾಕಿದರು. ಅದರ ಫಲವಾಗಿ ಭಾರತವು ಚಂದ್ರನ ದಕ್ಷಿಣ ಧ್ರುವ ಮುಟ್ಟಿದ ವಿಶ್ವದ ಮೊದಲ ದೇಶವಾಯಿತು”ಸಾವಿರ ಮೈಲಿಗಳ ಸುದೀರ್ಘ ಪ್ರಯಾಣವು ಕೇವಲ ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗುತ್ತದೆ.” ಲಾವೋತ್ಸÄ ಅವರು ಹೇಳಿದ ಮಾತು ಇಲ್ಲಿ ಸೂಕ್ತವೆನಿಸುತ್ತದೆ. ವೇಗವಾಗಿ ಓಡಿ ಅರ್ಧಕ್ಕೆ ನಿಲ್ಲುವುದುಕ್ಕಿಂತ, ಪ್ರತಿದಿನ ಸಣ್ಣ ಹೆಜ್ಜೆಯನ್ನಿಡುತ್ತ ಮುನ್ನಡೆಯುವುದು ನಮ್ಮಲ್ಲಿ ನಿರಂತರತೆಯನ್ನು ಕಾಪಡುತ್ತದೆ. ಮತ್ತು ಅತಿಯಾದ ಯೋಚನೆಗೆ ಬ್ರೆಕ್ ಹಾಕುತ್ತದೆ.
ಕೊನೆ ಹನಿ
ಅತಿಯಾದ ಆಲೋಚನೆಯು ನಮ್ಮ ಮನಸ್ಸನ್ನು ಹಿಡಿದಿಡುವ ಒಂದು ತಾತ್ಕಾಲಿಕ ಜೈಲು ಅಷ್ಟೇ. ಅದರ ಬೀಗದ ಕೈ ನಮ್ಮ ಕೈಯಲ್ಲೇ ಇರುತ್ತದೆ. ಧೃತಿಗೆಡದೆ, ಯೋಚನೆಗಳ ಸುಳಿಯಿಂದ ಹೊರಬಂದು ಕರಾರುವಕ್ಕಾದ ಕೆಲಸದಲ್ಲಿ ತೊಡಗಿಸಿಕೊಂಡಾಗ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ.


