ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಸ್ಥಳೀಯ ಶಾಸಕ ಯಶವಂತಗೌಡ ಪಾಟೀಲರು ನಾನು ಬದ್ದತೆಯ ಸಿದ್ದಾಂತದ ರಾಜಕಾರಣಿ ಎಂದು ಹೇಳುತ್ತಾರೆ. ಈಗ ಅತೃಪ್ತರಾಗಿ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮತ್ತೆ ಮೂರು ದಿನಗಳಾದ ಮೇಲೆ ರಾಜಿನಾಮೆ ಹಿಂದೆ ಪಡೆದಿದ್ದೇನೆ ಎಂದು ನಾಟಕ ಮಾಡಬಾರದು. ರಾಜಿನಾಮೆಗೆ ಬದ್ದರಾಗಿರಬೇಕು ಎಂದು ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲರು ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಭಿವೃದ್ದಿಯಲ್ಲಿ ವಂಚನೆ ಆಗಿದ್ದರೆ ರಾಜಿನಾಮೆ ನೀಡಲಿ ಅಧಿಕಾರ ಬೇಕೆಂದು ರಾಜಿನಾಮೆ ನೀಡಿರುವದು ಅವರಿಗೆ ಶೋಬೆ ತರುವಂಥದ್ದಲ್ಲ. ಈಗಾಗಲೇ ಅವರು ರಾಜಿನಾಮೆ ನೀಡಿದ್ದು ಅದಕ್ಕೆ ಕಾರ್ಯಕರ್ತರ ಮತಕ್ಷೇತ್ರದ ಜನರ ಅಭಿಪ್ರಾಯ ಕೇಳಿಲ್ಲ. ನಾಳೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮತಕ್ಷೇತ್ರದ ಜನರಿಗೆ ತಲೆಬಾಗಿ ರಾಜಿನಾಮೆ ಮರಳಿ ಪಡೆಯುತ್ತೇನೆ ಎಂದು ನಾಟಕವಾಡಬಾರದು ಎಂದರು.
ತಾಲೂಕು ಬರದಿಂದ ತತ್ತರಿಸುತ್ತಿದೆ, ಮಳೆ ಸರಿಯಾಗಿ ಆಗಿಲ್ಲ, ಕುಡಿಯುವ ನೀರಿನ ತೊಂದರೆ ಆಗುತ್ತಿದೆ. ಈ ಸಮಯದಲ್ಲಿ ರಾಜೀನಾಮೆ ಎಂಬ ನಾಟಕ ಎಷ್ಟು ಸರಿ, ಹಿರಿಯ ಶಾಸಕರು ಮೂರು ಬಾರಿ ಜನರು ಆಯ್ಕೆ ಮಾಡಿದ್ದು ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದರು.
ಕಳೆದ ಮೂರು ತಿಂಗಳಿಂದ ಸಚಿವ ಸ್ಥಾನಕ್ಕಾಗಿ ಬೆಂಗಳೂರು ದೆಹಲಿ ಅಡ್ಡಾಡುತ್ತಿದ್ದಾರೆ. ಗ್ರಾಮಗಳ ಕಡೆಗೆ ಗಮನವೇ ಹರಿಸಿಲ್ಲ, ಆಡಳಿತ ಕುಸಿದು ಬಿದ್ದಿದೆ. ಕಳೆದ ಬಾರಿ ಚುನಾವಣೆಯಲ್ಲಿ ತಾಲೂಕನ್ನು ಜಿಲ್ಲೆ ಮಾಡುತ್ತೇನೆಂದು ನಂಬಿಸಿ ಮೋಸ ಮಾಡಿದರು. ಈಗ ರಾಜಿನಾಮೆಯ ನಾಟಕವಾಡುತ್ತಿದ್ದಾರೆ. ಸ್ವಾರ್ಥ ಮುಂದೆ ಇಟ್ಟುಕೊಂಡು ರಾಜಿನಾಮೆ ನೀಡಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ರೋಡಗಿ, ಖೇಡಗಿ ಹಾಗೂ ಭುಯ್ಯಾರ ಗ್ರಾಮಗಳ ಜನರಿಗೆ ಕುಡಿಯಲು ಹಾಗೂ ದೈನಂದಿನ ಬಳಕೆಗೆ ಕನಿಷ್ಠ ನೀರು ಕೂಡ ಸಿಗುತಿರಲಿಲ್ಲ. ಅಂತಹ ಗಂಭೀರ ಪರಿಸ್ಥಿತಿಯಲ್ಲೂ ಶಾಸಕರು ಜನರ ಸಂಕಷ್ಟ ಆಲಿಸದೆ ಸ್ವಾರ್ಥ ರಾಜಕೀಯಕ್ಕಾಗಿ ಓಡಾಡಿದ್ದು ನಮ್ಮ ಭಾಗದ ಜನರ ದುರ್ದೈವ ಎಂದರು.
ರಾಜೀನಾಮೆ ಕೈ ಬರಹದ ಮೂಲಕ ಸ್ಪೀಕರ ಅವರಿಗೆ ಸಲ್ಲಿಸಬೇಕು. ಟೈಪ್ ಮಾಡಿದ ಪತ್ರ ಸಮಂಜಸವಲ್ಲ. ಕುರ್ಚಿ ಆಸೆಗಾಗಿ ಮತಕ್ಷೇತ್ರದ ಜನರನ್ನು ಕೇಳದೇ ರಾಜಿನಾಮೆ ನೀಡಿದ್ದೀರಿ ಅದನ್ನು ಮರಳಿ ಪಡೆಯಬಾರದು. ತತ್ವ ಸಿದ್ದಾಂತ ಬದ್ದತೆಯ ಮಾತುಗಳು ಕೇವಲ ಬಾಯಿಯಿಂದ ಬರಬಾರದು ಆಚರಣೆಯಲ್ಲಿ ಇರಬೇಕು ಎಂದರು.
ಕಾಸುಗೌಡ ಬಿರಾದಾರ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ, ರವಿ ವಗ್ಗೆ ದೇವೆಂದ್ರ ಕುಂಬಾರ ಮಾತನಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಾಳು ಮುಳಜಿ, ಮಹೇಶ ಹೂಗಾರ, ಸಂತೋಷ ಪಾಟೀಲ, ಪ್ರಶಾಂತ ಗವಳಿ, ಸಂತೋಷ ಪಾಟೀಲ, ಭೀಮರಾಯ ಬಬಲಾದ, ರಾಜಶೇಖರ ಭತಗುಣಕಿ ಮತ್ತಿತರಿದ್ದರು.

