ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಾವಿನಾಳ ಸಕ್ಕರೆ ಕಾರ್ಖಾನೆಯ ವತಿಯಿಂದ 2025-26ನೇ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಟನೇಜ್ ಆಧಾರದ ಮೇಲೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಖಾನೆಯ ವ್ಯಾಪ್ತಿಯ ಒಳಗಿನ ಹಾಗೂ ಹೊರಗಿನ ಕಬ್ಬು ಬೆಳೆಗಾರ ರೈತರಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಅರ್ಧ ಕೆ.ಜಿ. ಸಕ್ಕರೆಯನ್ನು ಕಾರ್ಖಾನೆ ಆವರಣದಲ್ಲಿ ವಿತರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಖಾನೆಯ ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ, ರೈತರು ಕಾರ್ಖಾನೆಯ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಹೇಳಿದರು. 2025-26ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಕಬ್ಬಿನ ಬಿಲ್, ಕಟಾವು ಹಾಗೂ ಸಾಗಾಣಿಕೆ ವೆಚ್ಚ ಸೇರಿದಂತೆ ಎಲ್ಲಾ ಪಾವತಿಗಳನ್ನು ನಿಗದಿತ ಸಮಯಕ್ಕೆ ಮಾಡಲಾಗಿದೆ. ಮುಂದಿನ ಹಂಗಾಮಿನಲ್ಲಿಯೂ ಇದೇ ಪಾರದರ್ಶಕತೆ ಹಾಗೂ ಸಮಯಪಾಲನೆಯನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಖಾನೆಯ ವ್ಯಾಪ್ತಿಯೊಳಗಿನ ಹಾಗೂ ಹೊರಗಿನ ಎಲ್ಲಾ ಕಬ್ಬು ಬೆಳೆಗಾರರು ತಮ್ಮ ಬೆಳೆದ ಸಂಪೂರ್ಣ ಕಬ್ಬನ್ನು ನೋಂದಣಿ ಮಾಡಿಸಿ ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಾವಿನಾಳ ಕಾರ್ಖಾನೆಗೆ ನುರಿಸಲು ಕಳುಹಿಸುವಂತೆ ಅವರು ಮನವಿ ಮಾಡಿದರು. ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಸೇವೆ ಹಾಗೂ ಸಕಾಲಿಕ ಪಾವತಿಗೆ ಕಾರ್ಖಾನೆ ಆದ್ಯತೆ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶ್ರಾವಣ ಮಾಸ ಹಾಗೂ ನಾಗ ಪಂಚಮಿ ಹಬ್ಬದ ಅಂಗವಾಗಿ ಕಬ್ಬು ಬೆಳೆಗಾರ ರೈತರಿಗೆ ಶುಭಾಶಯಗಳನ್ನು ತಿಳಿಸಿದ ಮೃತ್ಯುಂಜಯ ಶಿಂಧೆ, ರೈತರು ಮತ್ತು ಕಾರ್ಖಾನೆಯ ನಡುವಿನ ಪರಸ್ಪರ ಸಹಕಾರ ಮತ್ತಷ್ಟು ಬಲವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜನರಲ್ ಮ್ಯಾನೇಜರ್ ಶರದ್ ಮೋರೆ, ಅಮೋಲ ಶಿಂಧೆ, ಆಡಳಿತಾಧಿಕಾರಿ ರವೀಂದ್ರ ಗಾಯಕವಾಡ, ಜನರಲ್ ಮ್ಯಾನೇಜರ್ ರವಿರಾಜ ಭೋಸಲೆ, ಸಹಾಯಕ ಜನರಲ್ ಮ್ಯಾನೇಜರ್ ಅನಿರುದ್ಧ ಪಾಟೀಲ, ಜಿತೇಂದ್ರ ಮೆಟಕರಿ, ವೆಂಕಟೇಶ ರಾವ್, ವಿನಾಯಕ ಪೂಜಾರಿ, ಚಂದ್ರಕಾಂತ ಬಿರಾಜದಾರ, ಎಚ್.ಆರ್. ಮ್ಯಾನೇಜರ್ ವಿಜಯ ಹತ್ತೂರೆ, ಕೃಷಿ ಅಧಿಕಾರಿಗಳಾದ ರವೀಂದ್ರ ಬಿರಾಜದಾರ, ಸಚಿನ್ ನಿಕ್ಕಂ, ಧನಂಜಯ ಪಾಟೀಲ, ಸಂಗ್ರಾಮ ಸೂರ್ಯವಂಶಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆಗಾರ ರೈತರು ಉಪಸ್ಥಿತರಿದ್ದರು.

