ಸಚಿವ ಎಂ.ಬಿ.ಪಾಟೀಲರೂ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ | ಮರು ಪರೀಕ್ಷೆ ನಡೆಸಲಿ | ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿಕೋಟಾ ಪಟ್ಟಣದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದ್ದು, ಕೂಡಲೇ ಈ ವಿಷಯವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಎಂ.ಬಿ. ಪಾಟೀಲರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವಂತೆ ಹಾಗೂ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂಧ ಆರಂಭಗೊಂಡ ರ್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.
ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ತಿಕೋಟಾ ಪಟ್ಟಣದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡಿದೆ, ಓಎಂಆರ್ – ಪ್ರಶ್ನೆ ಪತ್ರಿಕೆ ಗೊಂದಲ ಬಗೆ ಹರಿಸುವುದನ್ನು ಬಿಟ್ಟು ಅದನ್ನು ಪ್ರಶ್ನಿಸಿರುವ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿ ಅಮಾನವೀಯ ರೀತಿಯಲ್ಲಿ ವರ್ತಿಸಿದೆ, ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ಕಂಡು ಬಂದರೆ ಅದನ್ನು ಪ್ರಶ್ನಿಸುವುದು ಅಪರಾಧವೇ ಎಂದು ಖಾರವಾಗಿ ಪ್ರಶ್ನಿಸಿದರು.
ಈ ವಿಷಯವಾಗಿ ಅಧಿಕಾರಿಗಳು ನಿಷ್ಪಕ್ಷಪಾತದಿಂದ ವರ್ತಿಸಬೇಕು ಹೊರತು ಆಡಳಿತಾರೂಢ ಪಕ್ಷದ ಅಣತಿಯಂತೆ ವರ್ತಿಸಬಾರದು, ವಿದ್ಯಾರ್ಥಿಗಳಿಗೆ ಕೂಡಲೇ ನ್ಯಾಯ ಒದಗಿಸಬೇಕಾದ ಕೆಲಸ ಮಾಡಬೇಕಿದ್ದು, ಕೂಡಲೇ ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ಶೀಘ್ರವೇ ಗೊಂದಲಕ್ಕೆ ಕಾರಣವಾದವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಈ ಎಲ್ಲ ವಿಷಯಗಳಿಗೂ ನೈತಿಕ ಹೊಣೆ ಹೊತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಎಂ.ಬಿ. ಪಾಟೀಲರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳು ಸಾಕಷ್ಟು ಆತಂಕಗೊಂಡಿದ್ದು ಕೂಡಲೇ ಮರು ಪರೀಕ್ಷೆ ನಡೆಸುವಂತೆ ಪ್ರತಿಭಟನಾ ನಿರತರರು ಹಕ್ಕೊತ್ತಾಯ ಮಂಡಿಸಿದರು.
ಪಾಲಿಕೆ ಸದಸ್ಯೆ ಹಾಗೂ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ ಮಾತನಾಡಿ, ವಿದ್ಯಾರ್ಥಿಗಳು ಅನ್ಯಾಯವನ್ನು, ಅಕ್ರಮವನ್ನು ಪ್ರಶ್ನಿಸಿದ್ದಾರೆ, ಆದರೆ ವಿದ್ಯಾರ್ಥಿಗಳಿಗೆ ಲಾಠಿ ಪ್ರಹಾರ ನಡೆಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಮುಖಂಡರಾದ ಮಂಜುನಾಥ ಮೀಸೆ, ವಿಜಯಕುಮಾರ ಕುಡಿಗನೂರ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಉಮೇಶ ಕಾರಜೋಳ, ವಿವೇಕ ಡಬ್ಬಿ, ಬಸವರಾಜ ಬೈಚಬಾಳ, ಗೋಪಾಲ ಘಟಕಾಂಬಳೆ, ಮಹೇಂದ್ರ ನಾಯಕ, ಶರತ್ ಬಿರಾದಾರ, ಚಿದಾನಂದ ಚಲವಾದಿ, ಪ್ರಕಾಶ ಮಿರ್ಜಿ, ಈರಣ್ಣ ರಾ ರಾವೂರ್. ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ರಮೇಶ ಮಸಬಿನಾಳ, ಸಿದ್ದು ಬುಳ್ಳಾ, ಜಗು ಮುಚ್ಚಂಡಿ, ಸಂದೀಪ ಪಾಟೀಲ, ಗುರು ತಳ್ವಾರ್ ರಾಜೇಶ ತಾವಸೆ, ಕೃಷ್ಣಾ ಗುನ್ನಾಳಕರ, ರಾಘವೇಂದ್ರ ಕಾಪಸೆ, ಆನಂದ ಮುಚ್ಚಂಡಿ, ವಿಜಯ ಜೋಶಿ, ಕಾಂತು ಶಿಂಧೆ, ಮಲ್ಲಮ್ಮ ಜೋಗೂರ, ಭಾರತಿ ಭುಯ್ಯಾರ, ರಾಮಚಂದ್ರ ಚವ್ಹಾಣ, ಅಶೋಕ ರಾಠೋಡ, ಸಂತೋಷ ಕುರದೊಡ್ಡಿ, ಭರತ ಕೋಳಿ, ಚಿನ್ನು ಚಿನಗುಂಡಿ, ಮಂಥನ ಗಾಯಕವಾಡ, ಮಹಾನಗರ ಪಾಲಿಕೆಯ ಉಪಮಾಪೌರರಾದ ಶ್ರೀಮತಿ ಸುಮಿತ್ರಾ ಜಾಧವ, ಬಸವರಾಜ ರೆಡ್ಡಿ, ಬಸವರಾ ಮನ್ಸೂರ್, ವಿವೇಕ ತಾವರೇಗೇರಿ, ವಿಕಾಸ ಪದಕಿ, ಪ್ರಫುಲ್ ಪವಾರ ಪಾಲ್ಗೊಂಡಿದ್ದರು.

