ಲೇಖನ
– ಸಂತೋಷ್ ರಾವ್ ಪೆರ್ಮುಡ.
ಪೆರ್ಮುಡ ಮನೆ,
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಎಲ್ಲರಿಗೂ ಜೀವನದಲ್ಲಿ ಏನಾದರೊಂದು ಸಾಧನೆಯನ್ನು ಮಾಡಬೇಕು ಎನ್ನುವ ಹಂಬಲವಿರುವುದು ಸಹಜ. ಅದರಲ್ಲೂ ಎಲ್ಲರೂ ಗುರುತಿಸುವಂತಹ ಸಾಧನೆಯನ್ನು ಮಾಡಬೇಕು ಎನ್ನುವ ಆಸೆಯಿರುವವರು ಒಂದಷ್ಟು ಮಂದಿ. ಇದಕ್ಕಾಗಿ ‘ಎಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎನ್ನುವ ವಿವೇಕಾನಂದರ ವಾಣಿಯನ್ನು ನೆನಪಿಸಿಕೊಳ್ಳುತ್ತಾರೆ. ಈ ಬದುಕಿರುವುದೇ ಸಾಧಿಸುವುದಕ್ಕಾಗಿ, ಸಾಧನೆಯಿಲ್ಲದ ಈ ಬದುಕೇ ವ್ಯರ್ಥವೆಂದು ಒಂದಷ್ಟು ಮಂದಿ ಭಾವಿಸಿರುತ್ತಾರೆ. ಇದಕ್ಕಾಗಿ ವಿವಿಧ ರೀತಿಯ ಸಾಧನೆಯನ್ನು ಮಾಡಲು ಹೊರಟು ಅಂತಿಮವಾಗಿ ಅವರು ತಲುಪುವುದೇ ಸ್ವಾರ್ಥದ ಬದುಕಿಗೆ. ಇಂಥಹ ಬಹುತೇಕ ಸಾಧಕರು ತಮ್ಮ ಸ್ವಾರ್ಥ ಸಾಧನೆಯಲ್ಲಿ ಕಳೆದೇ ಹೋಗುತ್ತಾರೆ. ನಿಜವಾದ ಸಾಧನೆಯೆಂದರೆ ಒಂದಷ್ಟು ಮಂದಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿ, ಅದನ್ನು ಜನರೇ ಗುರುತಿಸುವಂತಹ ಸಾಧನೆ.

ಒಂದು ದಟ್ಟವಾದ ಕಾಡಿನಲ್ಲಿ ಸೋಮಾರಿಯಾದ ಕ್ರೂರಿ ಸಿಂಹವೊಂದು ಇತ್ತು. ಸಿಂಹವೆಂದರೆ ಎಲ್ಲೆಡೆ ಕಾಡಿನ ರಾಜನೆಂದೇ ಚಿರಪರಿಚಿತ. ಈ ಸಿಂಹವು ಕಾಡಿನ ರಾಜನಾಗಿ ಯಾವುದೇ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸದೇ ಸೋಮಾರಿಯಾಗಿ ಕಾಲವನ್ನು ಕಳೆಯುತ್ತಿತ್ತು. ಕಾಲಕ್ರಮೇಣ ತನ್ನ ಸೋಮಾರಿತನದ ಕಾರಣದಿಂದಾಗಿ ಸಿಂಹದ ಜನಪ್ರಿಯತೆಯು ಕಡಿಮೆಯಾಗುತ್ತಾ ಹೋಯಿತು. ಇದನ್ನರಿತ ಸಿಂಹವು ಕಾಡಿನಲ್ಲೇ ಅತ್ಯಂತ ಎತ್ತರವಾದ ಬಂಡೆಕಲ್ಲನ್ನೇರಿ ನಿಂತು ತಾನು ಎಲ್ಲರಿಗೂ ಕಾಣಿಸುತ್ತಿದ್ದೇನೆಯೇ ಎಂದು ಕೇಳಿ, ನಾನು ಈ ಕಾಡಿನ ರಾಜನೆಂದು ಕೂಗಿ ಹೇಳಿತು. ಇದನ್ನು ಕೇಳಿದ ಕಾಡಿನ ಇತರ ಪ್ರಾಣಿಗಳು ‘ಕೇವಲ ಎತ್ತರದಲ್ಲಿ ಏರಿ ನಿಂತ ಮಾತ್ರಕ್ಕೆ ರಾಜನಾಗುತ್ತಾರೆಯೇ’ ಎಂದು ನಗಲಾರಂಭಿಸಿದವು.
ಅದೇ ರೀತಿ ಜನರೆಲ್ಲರೂ ನನ್ನನ್ನು ನೋಡಬೇಕು ಎಂಬ ಕಾರಣಕ್ಕಾಗಿ ಎತ್ತರದ ಸ್ಥಾನ/ಸ್ಥಳ/ಹುದ್ದೆಗೆ ಏರಿಕೊಂಡು ಕುಳಿತುಕೊಳ್ಳಬಾರದು. ಬದಲಿಗೆ ಆ ಸ್ಥಾನದಲ್ಲಿ ಕುಳಿತಾಗ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆಗೆ ಜಗತ್ತೆಲ್ಲಾ (ತನ್ನ ಕಾರ್ಯ ವ್ಯಾಪ್ತಿಯ ಜನರ ಕಷ್ಟ ಸುಖಗಳು) ಸಂಪೂರ್ಣವಾಗಿ ನನಗೆ ಕಾಣಲಿ, ಜಗತ್ತಿನೆಲ್ಲಾ ಆಗು ಹೋಗುಗಳೆಲ್ಲಾ ನನಗೆ ಕಾಣಿಸಬೇಕು, ಅದನ್ನು ನಾನು ತಿಳಿದುಕೊಳ್ಳಬೇಕು ಎನ್ನುವಂತ ಹಂಬಲದಿಂದ ಆ ಸ್ಥಾನ/ಹುದ್ದೆ/ಸ್ಥಳಕ್ಕೆ ಏರಬೇಕು. ಸಾಧಕನಾಗುವ ಹಂಬಲವಿರುವ ಎಲ್ಲರೂ ಜಗತ್ತಿನೆಲ್ಲಾ ವಿಚಾರಗಳನ್ನು ಅರಿಯಬೇಕೆಂಬ ಹಂಬಲವನ್ನು ಹೊಂದಿದಲ್ಲಿ ನಿಧಾನವಾಗಿ ಸಾಧನೆಯ ಹಾದಿಯಲ್ಲಿ ಸಾಗಬಹುದು. ಇಲ್ಲವಾದರೆ ಸ್ವಾರ್ಥ ಸಾಧನೆಯಾಗಬಹುದು. ಇದಕ್ಕೇ ಹಿರಿಯರು ಸಾಧನೆಯು ಸಾಧಕನ ಸ್ವತ್ತಲ್ಲದೇ ಸೋಮಾರಿಯ ಸ್ವತ್ತಲ್ಲ ಎನ್ನುವ ಗಾದೆ ಪ್ರಚಲಿತದಲ್ಲಿದೆ.


