ಲೇಖನ
– ಶ್ರದ್ಧಾ ಮುಂಡಾಜೆ
ಮುಂಡಾಜೆ
ದಕ್ಷಿಣ ಕನ್ನಡ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
“ಈ ಹಾಳೆಗಳ ಮೇಲೆ ಸಹಿ ಹಾಕಿ ಮೇಡಂ. ನೀವು ಸೈನ್ ಮಾಡಿದ ನಂತರ “ಲೀಗಲಿ ಯೂ ಬೋತ್ ಆರ್ ಡೈವೋರ್ಸ್ಡ್” ಎನ್ನುತ್ತಾ ವಕೀಲರು ತಮ್ಮ ಕುರ್ಚಿಗೆ ಒರಗಿ ಕುಳಿತರು. ಅವರ ಮಾತುಗಳನ್ನು ಕೇಳಿ ಸೀತಾಳ ಮನವು ದುಃಖ, ನೋವು, ಹತಾಶೆ ಯಿಂದ ಸ್ತಬ್ದವಾಗತೊಡಗಿತು . ಜೀವಕ್ಕೆ ಜೀವವಾಗಿರುತ್ತೇನೆಂದು ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದ ಗಂಡ ಇಂದು ನನ್ನನ್ನು ಯಾವುದೋ ಕಾರಣಕ್ಕೆ ದೂರ ಇಟ್ಟುಕೊಂಡಿರುವುದನ್ನು ಅರಗಿಸಲು ಸಾಧ್ಯವಾಗದೆ ಆಕೆಯ ಮನಸ್ಸೆಂಬ ಗಾಜಿಗೆ ಮೋಸವೆಂಬ ಕಲ್ಲು ಜೋರಾಗಿ ಬಡಿದು, ಅವಳ ಮನಸ್ಸು ಮುರಿದೆ ಹೋಗಿತ್ತು.

ಇಬ್ಬರು ಪುಟಾಣಿ ಮಕ್ಕಳು, ಜೀವನ ನಡೆಸಲು ನೌಕರಿಯಿಲ್ಲ, ಗಂಡನಿಂದ ಒಂದು ಪೈಸೆಗೂ ಕೈ ಚಾಚಲಿಲ್ಲ. ಖಾಲಿ ಕೈ, ಖಾಲಿ ಮನಸ್ಸು , ಭಾರವಾದ ಹೃದಯ ಹೊತ್ತು ಹೊರ ನಡೆದಳು ಸೀತಾ. ಮಕ್ಕಳನ್ನು ಕರೆದುಕೊಂಡು ನಡೆಯುತ್ತಾ ನಡೆಯುತ್ತಾ ದೇವಸ್ಥಾನ ತಲುಪಿದ ಆಕೆಗೆ ಕೇಳಿಸಿದ್ದು ಗುರುಗಳು ತಮ್ಮ ಶಿಷ್ಯಯರಿಗೆ ನೀಡುತ್ತಿದ್ದ ಅಂದಿನ ಪ್ರವಚನ.
” ಶಿಷ್ಯರೇ.. ಇಂದಿನ ದಿನ ಅತ್ಯಂತ ಶುಭವಾಗಿದೆ. ಇಂದು ನಿಮಗೆಲ್ಲ ಯಾವ ಪ್ರವಚನ ಕೇಳುವ ಮನಸ್ಸಾಗಿದೆಯೋ ಅದನ್ನೇ ಹೇಳುತ್ತೇನೆ” ಎಂದು ಗುರುಗಳು ನುಡಿದರು. ಅವರ ಮಾತಿಗೆ ಅದರಲ್ಲಿದ್ದ ಒಬ್ಬ ಬಾಲಕ “ಗುರುಗಳೇ, ಜೀವನದಲ್ಲಿ ಆತ್ಮವಿಶ್ವಾಸದ* ಮಹತ್ವವೇನು? ” ಎಂದು ಪ್ರಶ್ನಿಸಿದನು. ಆಗ ಗುರುಗಳು ಇಬ್ಬರು ಬಾಲಕರನ್ನು ಗುಂಪಿನಿಂದ ಕರೆದು ” ಅಗೋ ಅಲ್ಲಿ ನೋಡಿ.. ಅಷ್ಟು ದೂರದಲ್ಲಿರುವ ಆ ಸಂಪಿಗೆಮರದ ತುದಿಯಲ್ಲಿರುವ ಸಂಪಿಗೆ ಹೂವನ್ನು ನೀವು ನನಗೆ ತಂದುಕೊಡಬೇಕು. ನೆನಪಿಡಿ, ಆ ಮರ ತುಂಬಾ ಎತ್ತರವಿದೆ. ಅಲ್ಲಿಂದ ಬಿದ್ದರೆ ನಿಮ್ಮ ಪ್ರಾಣಕ್ಕೆ ಅಪಾಯ” ಎಂದು ಎಚ್ಚರಿಸಿದರು.
ಇಬ್ಬರು ಬಾಲಕರು ಆ ಮರವನ್ನೊಮ್ಮೆ ದಿಟ್ಟಿಸಿ ನೋಡಿದರು. ಅವರಿಬ್ಬರ ಮುಖ ನೋಡಿದ ಗುರುಗಳು, ಯಾರು ಹೋಗುವಿರಿ ? ಎಂದು ಕೇಳಿದಾಗ ಒಬ್ಬ ಬಾಲಕ ಹೆದರಿ ಹಿಂಜರಿದರೆ ಇನ್ನೊಬ್ಬ ತನ್ನಿಂದ ಸಾಧ್ಯ ಎಂದು ಮುನ್ನಡೆಯಲು ನಿರ್ಧರಿಸಿರುತ್ತಾನೆ. ಆಗ ಗುರುಗಳು ಎಲ್ಲರನ್ನು ಉದ್ದೇಶಿಸಿ “ಶಿಷ್ಯರೇ, ಇವರಿಬ್ಬರಲ್ಲೂ ಆತ್ಮವಿಶ್ವಾಸದ ವ್ಯತ್ಯಾಸವಿದೆ. ಒಬ್ಬ ಹೆದರಿ ಹಿಂಜರಿದ, ಇನ್ನೊಬ್ಬ ಮುನ್ನಡೆದ. ಹೀಗೆ ನಾವು ಕೂಡ ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯಬೇಕು. ಯಾವ ತೊಂದರೆಗೂ ಬಗ್ಗದೆ ಅದನ್ನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ, ಆತ್ಮಸ್ಥೈರ್ಯ ನಮ್ಮಲ್ಲಿರಬೇಕು. ಕಷ್ಟ ಬಂದಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಬದುಕಿನ ಏಳುಬೀಳುಗಳನ್ನು ನಾನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ಸದಾ ನಮ್ಮಲ್ಲಿರಬೇಕು. ಯಾವ ಸಮಸ್ಯೆಯು ನಮ್ಮ ಮನೋಸ್ಥೈರ್ಯಕ್ಕಿಂತ ದೊಡ್ಡದಲ್ಲ. ಅದನ್ನು ಮೆಟ್ಟಿ ನಿಂತು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ, ಮತ್ತೊಬ್ಬರಿಗೆ ಮಾದರಿಯಾಗಿ ಬದುಕಬೇಕು. “ಎಲ್ಲಿ ಆತ್ಮವಿಶ್ವಾಸವಿರುತ್ತದೆಯೋ , ಅಲ್ಲಿ ಜಯ ಕಟ್ಟಿಟ್ಟ ಬುತ್ತಿ ” ಎಂದು ಉಪದೇಶ ಮುಗಿಸಿದರು.
ಇದೆಲ್ಲವನ್ನು ಆಲಿಸುತ್ತ ಅಲ್ಲೇ ಕುಳಿತ್ತಿದ್ದ ಸೀತಾ ತಾನು ತನ್ನ ಮೋಸಗಾರ ಪತಿಯ ಎದುರು ಆತ್ಮವಿಶ್ವಾಸದಿಂದ ನಿಂತು ಸಾಧಿಸಿ ತೋರಿಸಬೇಕು ಎಂದು ನಿರ್ಧರಿಸಿ ಎದ್ದು ನಿಂತಳು.


