ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ತಿಕೋಟಾ ಪರೀಕ್ಷಾ ಕೇಂದ್ರದಲ್ಲಿ ನಡೆದ ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯನ್ನು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ, ಅತ್ಯಂತ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಿದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ದ್ರಾವಿಡ ವಿದ್ಯಾರ್ಥಿ ಪರಿಷತ್ ಮುಕ್ತಕಂಠದಿಂದ ಶ್ಲಾಘಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಸಂಘಟನೆಯ ನಿಯೋಗವು, ಯಶಸ್ವಿ ಪರೀಕ್ಷಾ ನಿರ್ವಹಣೆಗಾಗಿ ಖುದ್ದಾಗಿ ಸ್ಥಳದಲ್ಲಿದ್ದು ತತ್ತಕ್ಷಣದ ಕ್ರಮ ವಹಿಸಿದ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿಗಳಿಗೆ ಪುಸ್ತಕ ಹಾಗೂ ಧನ್ಯವಾದ ಪ್ರಶಂಸನೀಯ ಪತ್ರ ನೀಡಿ ಸನ್ಮಾನಿಸಲಾಯಿತು.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಹಿತರಕ್ಷಣೆಗೆ ಜಿಲ್ಲಾಡಳಿತ ಭದ್ರವಾಗಿ ನಿಂತಿರುವುದು ಶ್ಲಾಘನೀಯ.
ಸಮಾಜಘಾತುಕ ಶಕ್ತಿಗಳು ಅಥವಾ ವದಂತಿ ಹರಡುವವರು ಎಷ್ಟೇ ಗೊಂದಲ ಸೃಷ್ಟಿಸಲು ಯತ್ನಿಸಿದರೂ ಜಿಲ್ಲಾಡಳಿತವು ಧೃತಿಗೆಡಬಾರದು ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರು ಹೇಳಿದರು. ಕಟ್ಟುನಿಟ್ಟಿನ ಭದ್ರತೆ ಮತ್ತು ನಿಯಮಾವಳಿಗಳಂತೆ ಪರೀಕ್ಷೆ ನಡೆಸಿ ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸುವ ಮೂಲಕ ಜಿಲ್ಲಾಡಳಿತವು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಿದೆ. ವಿದ್ಯಾರ್ಥಿ ಸಮೂಹವು ಯಾವಾಗಲೂ ಪಾರದರ್ಶಕ ಆಡಳಿತದ ಪರವಾಗಿದ್ದು, ಜಿಲ್ಲಾಡಳಿತಕ್ಕೆ ಸಂಪೂರ್ಣ ಸ್ಥೈರ್ಯ ತುಂಬುತ್ತದೆ ಎಂದು ಸಂಘಟನೆ ತಿಳಿಸಿದೆ.
ಈ ಸಂದರ್ಭದಲ್ಲಿ ಗೌಡಪ್ಪ ಬಡಿಗೇರ, ಅಕ್ಷಯ್ ಕುಮಾರ್ ಅಜಮನಿ, ಪ್ರವೀಣ್ ಕರವಿನಾಳ, ಹುಚ್ಚಪ್ಪ ಬಾವಿಮನಿ, ಸಂಜೀವ್, ಕಿರಣ್, ಪ್ರಭು ಇತರ ಹಲವಾರು ವಿದ್ಯಾರ್ಥಿಗಳಿದ್ದರು.

