ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳು ಏಕಾಗ್ರತೆ, ಶಿಸ್ತು ಹಾಗೂ ನಿರಂತರವಾಗಿ ಅಧ್ಯಯನಶೀಲರಾದರೆ ಯಾವುದೇ ಕಠಿಣ ಪರೀಕ್ಷೆಗಳಲ್ಲಿಯೂ ಯಶಸ್ವಿಯಾಗಬಹುದು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಹಣಕಾಸು ಉಪಅಧಿಕಾರಿ ಯಲ್ಲಾಲಿಂಗ ಜನವಾಡ ಹೇಳಿದ್ದಾರೆ.
ಶುಕ್ರವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜ ಮತ್ತು ಅಲೆನ್ ಕರಿಯರ್ ಇನ್ಸ್ಟಿಟ್ಯೂಟ್ ವತಿಯಿಂದ ಆಯೋಜಿಸಲಾದ ನೂತನ ವಿದ್ಯಾರ್ಥಿಗಳ ಸ್ವಾಗತ ಹಾಗೂ ನೀಟ್-2026ರ ಸಾದಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕವಾಗಿ ಶ್ರೇಷ್ಠತೆಯನ್ನು ಸಾಧಿಸಲು ಎಲ್ಲರೂ ಬದ್ಧತೆಯಿಂದ ವಿದ್ಯಾಭ್ಯಾಸ ಮಾಡಬೇಕು. ಸಮರ್ಪಣೆ, ಕಠಿಣ ಪರಿಶ್ರಮ ಮಾಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಅಲೆನ್ ಕರಿಯರ್ ಇನಸ್ಟಿಟ್ಯೂಟ್ ಸಂಯೋಜಕ ಪ್ರೇಮ ಕಿಶೋರ ಚೌಧರಿ ಅವರು ಸಾಧಕರಿಗೆ ಬೆಳ್ಳಿ ಪದಕಗಳನ್ನು ನೀಡಿ ಗೌರವಿಸಿ ಮಾತನಾಡಿ, ಕಳೆದ ವರ್ಷ ಅಲೆನ್-ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ತರಬೇತಿ ಪಡೆದ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಯಶಸ್ವಿಯಾಗಿ ಅರ್ಹತೆ ಪಡೆದಿದ್ದಾರೆ. ಇದು ಸಂಸ್ಥೆಯ ಸ್ಥಿರ ಶೈಕ್ಷಣಿಕ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಇದೇ ವೇಳೆ ನೀಟ್ ಸಾಧಕರು ತಮ್ಮ ತಯಾರಿ ತಂತ್ರಗಳು, ಅಧ್ಯಯನ ತಂತ್ರಗಳು, ಸಮಯ ನಿರ್ವಹಣಾ ಕೌಶಲ್ಯಗಳು ಮತ್ತು ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಕಿರಿಯರು ತಮ್ಮ ಗುರಿಗಳನ್ನು ಆತ್ಮವಿಶ್ವಾಸ ಮತ್ತು ದೃಢನಿಶ್ಚಯದಿಂದ ಅನುಸರಿಸಬೇಕು ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಸಂಗೀತ, ನೃತ್ಯ ಮತ್ತು ಇತರ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ಪ್ರಾಂಶುಪಾಲ ಬೊಡ್ಡು ಮಹೇಶ್ವರರಾವ, ಕಾಲೇಜಿನ ಸಂಯೋಜಕಿ ಡಾ. ಮುಕ್ತಾ ಬನ್ನೂರ ಮುಂತಾದವರು ಉಪಸ್ಥಿತರಿದ್ದರು.

