ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಶರಣರ, ಸಂತರ ನಾಡು. ಸಂಸ್ಕೃತಿ, ಸಂಸ್ಕಾರ ಆಚಾರ-ವಿಚಾರಗಳು ನಮ್ಮ ಈ ಮಣ್ಣಿನ ಗುಣ ಧರ್ಮದಲ್ಲಿಯೇ ಅಡಗಿವೆ. ೧೨ನೇ ಶತಮಾನದ ಶರಣರ ಕಾಯಕ ಸಂದೇಶಗಳು ಸಮಾನತೆ, ಕಾಯಕನಿಷ್ಠೆ ಮತ್ತು ಮಾನವೀಯತೆಯ ಮೇಲೆ ಆಧಾರಿತವಾಗಿದ್ದು, ಜಾತಿ ಬೇಧವಿಲ್ಲದೇ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿರುವ ಸಮಾಜ ನಿರ್ಮಾಣವೇ ಅವರ ಮುಖ್ಯ ಗುರಿಯಾಗಿತ್ತು. ಇಂದು ನಾವೆಲ್ಲರೂ ಮೌಲ್ಯಾಧಾರಿತ ಬದುಕನ್ನು ನಡೆಸಲು ಶರಣರ ಕಾಯಕ ತತ್ವಗಳೇ ದಾರಿದೀಪವಾಗಿವೆ ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷರು ಭಾರತೀಯ ಜನತಾಪಕ್ಷ ವಿಜಯಪುರದ ಆರ್.ಎಸ್ ಪಾಟೀಲ ಅಭಿಪ್ರಾಯಪಟ್ಟರು.
ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಗುರುಬಾಯಿ ಬಸನಗೌಡ ಪಾಟೀಲ ದತ್ತಿ, ಡಾ. ರಾಮರಾವ ಮಲ್ಲರಾವ ನಾಡಗೇರ, ದಿ. ಮಲ್ಲಪ್ಪ ರುದ್ರಪ್ಪ ತೋಟದ ದತ್ತಿ, ಲಿಂ.ಅಮರಪ್ಪ ಬಸಪ್ಪ ಸಾಲಕ್ಕಿ ದತ್ತಿ . ದತ್ತಿನಿಧಿಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ದತ್ತಿಗೋಷ್ಠಿಗಳ ಮೂಲಕ ಶರಣರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರದ ವಿಶ್ರಾಂತ ಪ್ರಾಚಾರ್ಯರಾದ ಬಿ. ಎಮ್. ಅಜೂರ ಮಾತನಾಡಿ, ಶರಣರ ಸಂದೇಶಗಳು ನಮ್ಮೆಲ್ಲರ ಬಾಳಿಗೆ ಬೆಳಕಾಗಿ ನಿಲ್ಲಬಲ್ಲ ಅನೇಕ ದಿಕ್ಸೂಚಿಯಾದ ವಚನಗಳಲ್ಲಿ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳಿದ್ದು ಅದರ ಸಂದೇಶಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
“ಶರಣ ಹಡಪದ ಅಪ್ಪಣ್ಣ ಜೀವನ ಪರಿಚಯ” ಎಂಬ ವಿಷಯದ ಕುರಿತು ಪ್ರವಚನಕಾರರಾದ ಸುಖದೇವಿ ಅಲಬಾಳಮಠ ಉಪನ್ಯಾಸ ನೀಡಿದರು.
“ಬಸವಾದಿ ಶರಣರ ಕಾಯಕ ತತ್ವ”ಎಂಬ ವಿಷಯದ ಕುರಿತು ಶಿಕ್ಷಕ, ಸಾಹಿತಿ ಬಸವರಾಜ ಹಂಚಲಿ ಮಾತನಾಡಿದರು.
ಬಸವಣ್ಣನ ಸಮಕಾಲೀನ ವಚನಕಾರರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಆಯ್ದಕ್ಕಿ ಮಾರಯ್ಯ- ಆಯ್ದಕ್ಕಿ ಲಕ್ಕಮ್ಮ, ಜೇಡರ ದಾಸಿಮಯ್ಯ, ಮಡಿವಾಳ ಮಾಚಿದೇವ, ಚನ್ನಬಸವಣ್ಣ, ಅಂಬಿಗೇರ ಚೌಡಯ್ಯ. ಸೂಳೆ ಸಂಕವ್ವೆ, ಹಡಪದ ಅಪ್ಪಣ್ಣ, ಶರಣೆ ಲಿಂಗಮ್ಮ ಹೀಗೆ ಅನೇಕ ಶರಣ-ಶರಣೆಯರು ಈ ಸಮಾಜಕ್ಕೆ ನೀಡಿದ ಕಾಯಕ ಸಂದೇಶಗಳನ್ನು ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟರು.
ಗಂಗಾಧರ ಸಾಲಕ್ಕಿ. ಸಿದ್ರಾಮಪ್ಪ ತೋಟದ. ಎಸ್ ವಿ ಬುರ್ಲಿ ಮಾತನಾಡಿದರು. ದತ್ತಿ ಸಂಚಾಲಕ ಅರ್ಜುನ ಶಿರೂರ ವೇದಿಕೆಯ ಮೇಲಿದ್ದರು.
ತಿಗಣಿಬಿದರಿ ತಾಯಂದಿರು ಪ್ರಾರ್ಥಿಸಿದರು. ಪರವೀನ ಶೇಖ್ ಸ್ವಾಗತಿಸಿ ಗೌರವಿಸಿದರು. ಡಾ.ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು. ಜಿಲ್ಲಾ ಕಸಾಪ ಸಂಚಾಲಕ ಅರ್ಜುನ ಶಿರೂರ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಜಿ.ಎಸ್.ಬಳ್ಳೂರ, ರವಿ ಕಿತ್ತೂರ, ಮಹೆತಾಬ ಕಾಗವಾಡ, ಶ್ರೀಕಾಂತ ನಾಡಗೌಡ, ರಾಜಶೇಖರ ಕಂಬಾರ, ಸಿದ್ರಾಮಪ್ಪ ಜಂಗಮಶೆಟ್ಟಿ, ಮಹಾದೇವಿ ತೆಲಗಿ ಮುಂತಾದವರು ಉಪಸ್ಥಿತರಿದ್ದರು.

