ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಯಿ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ಸದೃಢ ಮಗುವಿನ
ಆರೋಗ್ಯದ ದೃಷ್ಠಿಯಿಂದ ತಾಯಂದಿರು ನವಜಾತ ಶಿಶುಗಳಿಗೆ ಎದೆಹಾಲು ನೀಡುವಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಲ್ಲನಗೌಡ ಬಿರಾದಾರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ವಿಜಯಪುರ, ಸುಸೇನಾ ಹೆಲ್ತ್ ಪೌಂಡೇಶನ್, ದಾತ್ರಿ ಮದರ್ಸ ಮಿಲ್ಕ್ ಬ್ಯಾಂಕ್ ಮತ್ತು ಸಿ.ಎಲ್.ಎಮ್.ಸಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವರ್ಷದ ಘೋಷವಾಕ್ಯದಂತೆ ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನ ಸದೃಢಗೊಳಿಸೋಣ ಎಂಬ ಸಂದೇಶವನ್ನು ಎಲ್ಲ ತಾಯಿಂದರಿಗೆ ಸಮರ್ಪಕವಾಗಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಗರ್ಭಿಣಿ ಹಾಗೂ ಬಾಣಂತಿಯರಿಗಾಗಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ತಾಯಿ ತನ್ನ ಎದೆಹಾಲು ಉಣಿಸುವುದರಿಂದ ಮಗುವಿನ ಆರೋಗ್ಯದಲ್ಲಿ ಧನಾತ್ಮಕ ಪರಿಣಾಮಗಳಾಗುತ್ತವೆ. ಮಗುವಿನ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಅಂತರ ಹೊಂದುವುದುರಿಂದ ಅಂಡಾಶಯ ಕ್ಯಾನ್ಸರ್ ಮತ್ತು ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಸಾಧ್ಯವಿದೆ ಎಂದ ಅವರು, ಮಗುವಿಗೆ ಹಾಲುಣಿಸುವಿಕೆಯಿಂದ ಸಾಂಕ್ರಾಮಿಕ ಕಾಯಿಲೆಗಳಾದ ಅತಿಸಾರ, ಉಸಿರಾಟದ ಸೋಂಕುಗಳನ್ನು ದೂರವಿಡಬಹುದು ಎಂದು ಹೇಳಿದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ಪರಸುರಾಮ ಹಿಟ್ನಳ್ಳಿ ಮಾತನಾಡಿ, ತಾಯಿ ಹಾಗೂ ತಾಯಿ ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ತಾಯಿಯ ಎದೆ ಹಾಲಿಗೆ ಪ್ರಪಂಚದಲ್ಲಿ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಎದೆ ಹಾಲುಣಿಸುವ ಮೂಲಕ ದೇಶದ ಆರೋಗ್ಯವಂತ ಪ್ರಜೆಯನ್ನಾಗಿ ರೂಪಿಸಬೇಕು. ಹುಟ್ಟಿದ ಮಗುವಿಗೆ ಅರು ತಿಂಗಳವರೆಗೆ ತಾಯಿಯ ಎದೆ ಹಾಲುಣಿಸಬೇಕು. ಮಗು ಬೇರೆ ಪದಾರ್ಥಗಳನ್ನು ಸೇವಿಸುವ ಮಗುವಿಗಿಂತ ಕಾಯಿಲೆಗೊಳಗಾಗುತ್ತದೆ ಮತ್ತು ಹೆಚ್ಚು ಆರೋಗ್ಯಕರವಾಗಿರುತ್ತದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಸಂತೋಷ ಶೆಟ್ಟಿ ಮಾತನಾಡಿ, ಮಗುವಿಗೆ ಎದೆ ಹಾಲು ಅಮೃತವಿದ್ದಂತೆ. ಪೌಷ್ಠಿಕ ಆಹಾರವನ್ನು ತಾಯಂದಿರು ಸೇವಿಸಬೇಕು. ಯಾವುದಕ್ಕೂ ಮಗುವಿಗೆ ಎದೆ ಹಾಲು ನೀಡುವುದನ್ನು ತಪ್ಪಿಸಬಾರದು. ಎಲ್ಲ ತಾಯಂದಿರು ತಮ್ಮ ಮಗುವಿಗೆ ಹುಟ್ಟಿನಿಂದ ೨ ವರ್ಷದ ವರೆಗೆ ತಾಯಿ ಹಾಲುಣಿಸಬೇಕು ಎಂದರು.
ಜಿಲ್ಲಾ ಆಸ್ಪತ್ರೆಯ ದಾತ್ರಿ ಮದರ್ಸ ಮಿಲ್ಕ್ ಬ್ಯಾಂಕ್ ನ ಡಾ. ಗಾಯತ್ತಿ ಮಿಸಾಳೆ ಮಾತನಾಡಿ, ತಾಯಿ ಎದೆ ಹಾಲು ಅಗತ್ಯವಿರುವ ನವಜಾತ ಶಿಶುಗಳಿಗೆ ದಾನಿಗಳಿಂದ ಪಡೆದ ತಾಯಂದಿರ ಹಾಲನ್ನು ಶಿಶುಗಳಿಗೆ ನೀಡಲಾಗುತ್ತದೆ. ಈ ಮಹತ್ವದ ಸೇವೆಯನ್ನು ಎಲ್ಲ ತಾಯಂದಿರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಾಯಂದಿರು ಜಿಲ್ಲಾ ಆಸ್ಪತ್ರೆಯ ದಾತ್ರಿ ಮದರ್ಸ ಮಿಲ್ಕ್ ಬ್ಯಾಂಕ್ ವಿಜಯಪುರಲ್ಲಿ ನೀಡುವಂತೆ ತಿಳಿಸಿದರು. ಯಾವ ತಾಯಿ ಮಗುವಿಗೆ ಪೌಡರ್ ಹಾಲ ಮತ್ತು ಸಕ್ಕರೆ ನೀರನ್ನು ಮಗುವಿಗೆ ನೀಡಬಾರದೆಂದರು.
ಬಾಂಗಿ ಎಜುಕೇಶನ್ ಮತ್ತು ಸೋಷಿಯಲ್ ಟ್ರಸ್ಟ್ ನ ಡಾ. ಮುನೀರ ಭಾಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಸೈಯಿದಾಜಿಭಾ ಭಾಂಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೋಳೂರ, ರೇಖಾ ದಶವಂತ, ಶಂಕರ ಚಲವಾದಿ, ಎನ್. ಆರ್. ಬಾಗವಾನ, ಸುರೇಂದ್ರ ಮಾನಕರ, ಭಾಂಗಿ ನರ್ಸಿಂಗ್, ಡೋಣೂರ, ಕಾಲೇಜಿನ ಜುಬೇರ ಪ್ರಾಂಶುಪಾಲರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

