ಬಿ.ಎಲ್.ಡಿ.ಇ. ಸಂಸ್ಥೆಯ ಪದವಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ರವಿಶಂಕರ್ ಬಿ.ಎಸ್. ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ (ಜಮಖಂಡಿ): ವ್ಯಸನ ಎನ್ನುವುದು ಕೇವಲ ಮದ್ಯ, ಗುಟ್ಕಾ, ಸಿಗರೇಟ್ ಅಥವಾ ಮಾದಕ ವಸ್ತುಗಳ ಸೇವನೆಗೆ ಮಾತ್ರ ಸೀಮಿತವಲ್ಲ. ಸಮಯದ ದುರ್ಬಳಕೆ, ಮೊಬೈಲ್ಗಳ ಅತಿಯಾದ ಬಳಕೆ ಸೇರಿದಂತೆ ಜೀವನಶೈಲಿಯಲ್ಲಿನ ಅನಾರೋಗ್ಯಕರ ಅಭ್ಯಾಸಗಳೂ ವ್ಯಸನಗಳೇ ಆಗಿದ್ದು, ಇವು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತವೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಪದವಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ರವಿಶಂಕರ್ ಬಿ.ಎಸ್. ಹೇಳಿದರು.
ಡಾ.ಮಹಾಂತ ಶಿವಯೋಗಿ ಸ್ವಾಮೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಆರ್.ಎಸ್. ಕಾಗವಾಡೆ ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸುವ ಹೊಣೆಗಾರಿಕೆ ಪೋಷಕರ ಮೇಲಿದೆ. ಇಂದಿನ ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ದುಶ್ಚಟಗಳಿಂದ ದೂರವಿಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳು ಡಾ. ಮಹಾಂತ ಶಿವಯೋಗಿ ಸ್ವಾಮೀಜಿಯವರ ದುಶ್ಚಟಗಳ ವಿರುದ್ಧದ ಹೋರಾಟವನ್ನು ಬಿಂಬಿಸುವ ಜಾಗೃತಿ ನಾಟಕವನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.
ಪ್ರೊ. ಕೆ.ಜೆ. ಜೀರಗಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೊ. ಪ್ರೇಮಾನಂದ ಹಿರೇಮಠ ವ್ಯಸನಮುಕ್ತ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಶಿಕ್ಷಣಾರ್ಥಿಗಳಾದ ಅಭಿಷೇಕಗೌಡ ಪಾಟೀಲ ಹಾಗೂ ಪ್ರತಿಭಾ ಜಂಬಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸೌಜನ್ಯ ಕೊಣ್ಣೂರ ಪ್ರಾರ್ಥನೆ ಸಲ್ಲಿಸಿದರು. ಕಮಲವ್ವ ಒನಕಿ ಸ್ವಾಗತಿಸಿದರು. ರವೀನಾ ನದಾಫ್ ಪರಿಚಯಿಸಿದರು. ಪ್ರದೀಪ ಹುಕ್ಕೇರಿ ಹಾಗೂ ರೇಣುಕಾ ಚಂಡಕಿ ಕಾರ್ಯಕ್ರಮ ನಿರೂಪಿಸಿದರು. ಕಾಡಪ್ಪ ಜನವಾಡ ವಂದನಾರ್ಪಣೆ ಸಲ್ಲಿಸಿದರು.

