ಮೊದಲ ಪುಟ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಹಾಗೂ ಸಬಲಾ– ಮಹಿಳಾ ಸಬಲೀಕರಣ ಘಟಕದ ವತಿಯಿಂದ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿಗಾಗಿ ಸ್ವಾವಲಂಬಿ ಸಬಲಾ ಎಂಬ ಉಪಯುಕ್ತ ಕಾಗದದ ಚೀಲ ಹಾಗೂ ಪ್ಯಾಕೆಟ್ ತಯಾರಿಕಾ ಕಾರ್ಯಾಗಾರ ಶುಕ್ರವಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್. ಪ್ರೌಢಶಾಲೆ ‘ಎ’ ವಿಭಾಗದ ನಿವೃತ್ತ ಕರಕುಶಲ ಶಿಕ್ಷಕಿ ಸಂಗೀತಾ ನಿಂಬಾಳ ಮಾತನಾಡಿ, ನಾನಾ ಗಾತ್ರ ಮತ್ತು ಗುಣಮಟ್ಟದ ಕಾಗದದ ಚೀಲಗಳು ಮತ್ತು ಪ್ಯಾಕೆಟ್ಗಳನ್ನು ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿದರು. ಅಲ್ಲದೇ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಔಷಧ ವಿತರಣೆ ಸೇರಿದಂತೆ ನಾಬಾ ದೈನಂದಿನ ಕಾರ್ಯಗಳಲ್ಲಿ ಅವುಗಳ ಉಪಯುಕ್ತತೆಯನ್ನು ವಿವರಿಸಿ, ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಕಾಗದದ ಚೀಲಗಳ ಬಳಕೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾತನಾಡಿ, ಮಹಿಳಾ ಸಬಲೀಕರಣ ಘಟಕವನ್ನು ಇನ್ನಷ್ಟು ಬಲಪಡಿಸುವ ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದರು. ಈ ತರಬೇತಿಯು ಬೋಧಕರ ಹೊರತಾದ ಮಹಿಳಾ ಸಿಬ್ಬಂದಿಗೆ ಹೆಚ್ಚುವರಿ ಆದಾಯ ಗಳಿಸಲು ನೆರವಾಗಲಿದ್ದು, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದರ ಜೊತೆಗೆ ಮಹಾವಿದ್ಯಾಲಯವನ್ನು ಪ್ಲಾಸ್ಟಿಕ್ ಮುಕ್ತ ಆವರಣವನ್ನಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಬಲ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಡಾ. ಅಶ್ವಿನಿ ಎ. ನಿಂಬಾಳ, ಸದಸ್ಯ ಕಾರ್ಯದರ್ಶಿ ವಿದ್ಯಾಲಕ್ಷ್ಮಿ ಪೂಜಾರಿ, ಡಾ. ಮಲ್ಲಮ್ಮಾ ಬಿರಾದಾರ, ಡಾ. ಕಸ್ತೂರಿ ಪಾಟೀಲ, ಸಬಲಾ ಮಹಿಳಾ ಸಬಲೀಕರಣ ಘಟಕದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿ ಭಾಗವಹಿಸಿ ಮಹಿಳಾ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶಗಳನ್ನು ತಿಳಿದುಕೊಂಡರು.

