ತದ್ದೇವಾಡಿ ಹಳ್ಳಿಯ ಜಾನಪದ ಸಿರಿ ಸಮ್ಮೇಳನ | ಎತ್ತಿನ ಬಂಡಿಯಲ್ಲಿ ಸರ್ವಾಧ್ಯಕ್ಷರ ಮೆರವಣಿಗೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಜಾನಪದ ಕಲೆಗಳು ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ನಮ್ಮ ಸಂಸ್ಕೃತಿ ಹಾಗೂ ದೇ
ಶಿಯ ಸೊಗಡಾಗಿರುವ ಇವು ನಮ್ಮ ನಾಗರಿಕತೆಯ ಸಂಕೇತವಾಗಿವೆ. ಈ ಕಲೆಗಳನ್ನು ಉಳಿಸಿ ಬೆಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಿಲ್ಲಾ ಬಂಜಾರಾ ಪ್ರೌಢ ಶಾಲೆಯ ಅಧ್ಯಕ್ಷರಾದ ಡಿ.ಎಲ್.ಚವ್ಹಾಣ್ರವರು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಚಡಚಣ ತಾಲೂಕು ಘಟಕ ಹಾಗೂ ಶ್ರೀ ಗುರು ಚಂದ್ರಶೇಖರ ಮಹಾಸಂಸ್ಥಾನ ಹಿರೇಮಠ ತದ್ದೇವಾಡಿ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರು ಪೂರ್ಣಿಮೆಯ ನಿಮಿತ್ತ ಹಮ್ಮಿಕೊಂಡಿದ್ದ ‘ಹಳ್ಳಿಯ ಜಾನಪದ ಸಿರಿ-೪’ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವಹಿಸಿ ಮಾತನಾಡಿದ ಅವರು. ಜನಪದ ಹಾಡು, ಜನಪದ ನೃತ್ಯ, ಬೀಸುಕಲ್ಲಿನ ಪದ, ಜೋಗುಳ ಪದ ಇಂತಹ ಅನೇಕ ಹಾಡುಕುಣಿತಗಳು ಕೃಷಿ ಬದುಕು ಹಾಗೂ ಹಳ್ಳಿ ಬದುಕಿನಲ್ಲಿ ಮೂಡಿ ಬಂದ ಅತ್ಯಧ್ಭುತ ಕಲೆಗಳಾಗಿವೆ. ಇವುಗಳಲ್ಲಿ ದೇಸೀಯ ಸೊಗಡಿನ ಜೊತೆಗೆ ಸಮಾಜದ ಅಂತಕರಣ ಅದರಲ್ಲಿ ಅಡಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಎಲ್.ಜಿ.ಹಿರೇಮಠ ಆಶೀರ್ವಚನ ನೀಡಿ, ಹಳ್ಳಿ ಬದುಕಿನಲ್ಲಿ ಜನಪದ ಮೂಡಿದೆ. ಬೆವರಿನ ಸಂಸ್ಕೃತಿಯೇ ಜನಪದ ಸಂಸ್ಕೃತಿ. ದುಡಿಯುತ್ತಾ ದುಡಿಯುತ್ತಾ ನಮ್ಮ ಪೂರ್ವಜರು ಬದುಕು ಕಟ್ಟಿಕೊಳ್ಳುವ ಬಗ್ಗೆ ತಮ್ಮ ಅನುಭವದ ಮೂಲಕ ಜನಪದ ಗೀತೆ, ಗೀಗೀ ಪದ, ತತ್ತ್ವಪದ ಇನ್ನೂ ಇತ್ಯಾದಿ ಗೀತೆಗಳನ್ನು ಸಮಾಜದ ಜನರಲ್ಲಿ ತೋರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೇಣುಕಾಶಿವಾಚಾರ್ಯರು, ಎಂ.ಆರ್.ಪಾಟೀಲ, ಶಿವು ಮೇತ್ರಿ, ಎಸ್.ಎಂ.ಚೋಳಖೆ, ಮಹಾಂತೇಶ ಬಿರಾದಾರ, ಬಾಪುರಾಯಗೌಡ ಪಾಟೀಲ, ರಮೇಶ ದೇಸಾಯಿ, ಉಸ್ಮಾನ ಶೇಖ, ಶಮಷಾದ ಬಿರಾದಾರ, ಎಂಕೆ.ಬಿರಾದಾರ, ರಾಜುಗೌಡ ಝಳಕಿ, ಶಾಂತೇಶ ಬಿರಾದಾರ, ರಾಘವೇಂದ್ರ ಪುರಾಣಿಕ, ಸದಾಶಿವ ಪಾಟೀಲ, ಸಾಯಬಗೌಡ ಬಿರಾದಾರ, ಕರಬಸಪ್ಪ ಲವಗಿ, ಕಾಶಿನಾಥ ಪಾಟೀಲ, ಭೀಮಾಶಂಕರ ವಡಗಾಂವ ಹಾಗೂ ಚಡಚಣ ತಾಲೂಕಿನ ಜನಪದ ಕಲಾ ತಂಡದ ಸರ್ವ ಸದಸ್ಯರುಗಳು, ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಉಪಸ್ಥಿತರಿದ್ದರು.

