ದೇವರಹಿಪ್ಪರಗಿ ಸಮೃದ್ಧಿ ಸಹಕಾರ ಸಂಘದ ೫ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂಘದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಸದಸ್ಯರು, ಠೇವುದಾರರು, ನಿರ್ದೇಶಕ ಮಂಡಳಿ ಸೇರಿದಂತೆ ಗ್ರಾಹಕರ ಪಾತ್ರ ಬಹುಮುಖ್ಯವಾಗಿದೆ ಎಂದು ಸಮೃದ್ಧಿ ಸಹಕಾರ ಸಂಘದ ಅಧ್ಯಕ್ಷೆ ಸಂಗೀತಾ ನಾಯಿಕ್ ಹೇಳಿದರು.
ಪಟ್ಟಣದ ಕಲ್ಮೇಶ್ವರ ಮಂಗಲ ಭವನದಲ್ಲಿ ಶುಕ್ರವಾರ ಜರುಗಿದ ಸಮೃದ್ಧಿ ಸಹಕಾರ ಸಂಘದ ೫ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಪ್ರಗತಿಗೆ ಕಳೆದ ೪ ವರ್ಷಗಳಿಂದ ನೀಡುತ್ತಿರುವ ಸದಸ್ಯರ ಸಹಕಾರ ಶ್ಲಾಘನೀಯ ಎಂದರು.
ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ ಮಾತನಾಡಿ, ಒಟ್ಟು ೯೯೮ ಸದಸ್ಯ ಬಲದ ಸಂಘವು ೧೦.೨೪ ಲಕ್ಷ ಶೇರು ಬಂಡವಾಳದೊಂದಿಗೆ ಕಾರ್ಯಾರಂಭ ಮಾಡಿ ಈಗ ೧.೨೪ ಕೋಟಿ ಶೇರು ಬಂಡವಾಳದೊಂದಿಗೆ ಸುಮಾರು ೧೧.೦೩ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ೨೦೨೫-೨೬ನೇ ಸಾಲಿನಲ್ಲಿ ೫೧.೪೭ ಕೋಟಿ ವ್ಯವಹಾರ ನಡೆಸಿ ೪೬.೬೬ ಲಕ್ಷ ರೂ.ಗಳ ನಿವ್ವಳ ಆದಾಯ ಗಳಿಸಿದೆ. ಮುಂಬರುವ ವರ್ಷಗಳಲ್ಲಿ ಠೇವುಗಳನ್ನು ರೂ. ೧೫ ಕೋಟಿಗೆ ಹೆಚ್ಚಿಸಿಕೊಳ್ಳುವುದು. ಶೇರು ಬಂಡವಾಳವನ್ನು ರೂ. ೨ ಕೋಟಿಗಳಿಗೆ ಹೆಚ್ಚಿಸಿಕೊಳ್ಳುವುದು. ಹಾಗೂ ದುಡಿಯುವ ಬಂಡವಾಳವನ್ನು ರೂ.೨೦ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಸAಘದ ಮಾರ್ಗದರ್ಶಕ ಡಾ.ಆರ್.ಆರ್.ನಾಯಿಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸಾಧನೆಯ ಹಿಂದೆ ಸದಸ್ಯರ, ಗ್ರಾಹಕರ ಸದ್ಭಾವನೆ ಸಹಕಾರ, ಆಡಳಿತ ಮಂಡಳಿ ಸದಸ್ಯರ ಕಳಕಳಿ ಪ್ರಾಮಾಣಿಕ ಸೇವೆ ಹಾಗೂ ಮಾರ್ಗದರ್ಶನ, ಸಿಬ್ಬಂದಿಗಳ ಅವಿರತ ಪರಿಶ್ರಮ ಹಾಗೂ ಸೇವಾ ಮನೋಭಾವನೆಗಳೇ ಮುಖ್ಯ ಕಾರಣಗಳಾಗಿವೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರ ಕುದರಿ, ಚೈತನ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗುರುರಾಜ ಕುಲಕರ್ಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಲೀಲಾವತಿಗೌಡ (ಸಹಕಾರ), ಶೈಲಜಾ ಸ್ಥಾವರಮಠ (ಸಾಮಾಜಿಕ), ವಿ.ಸಿ.ಕುಲಕರ್ಣಿ(ಅಂಚೆ) ಜಿ.ಎಸ್.ಕರಭಂಟನಾಳ(ಉದ್ಯಮ), ಎಮ್.ಎಚ್.ಪಾನಪರೋಶ(ಶಿಕ್ಷಣ) ಬಿ.ಸಿ.ಹಿರೇಮಠ (ರಂಗಭೂಮಿ) ಅವರನ್ನು ಸನ್ಮಾನಿಸಲಾಯಿತು. ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಿರ್ದೇಶಕರಾದ ಪ್ರಭುದೇವ ಹಿರೇಮಠ, ಬಿ.ಎನ್.ಬಬಲೇಶ್ವರ, ಕೆ.ಎಸ್.ಕೋರಿ, ಎ.ಕೆ.ಹಿರೇಮಠ, ವೆಂಕಟೇಶ ಕುಲಕರ್ಣಿ, ಉಮೇಶ ಹಳಪಾಣಿ, ಗುರು ಕರಭಂಟನಾಳ, ಮಂಜುನಾಥ ಒಂಟೆತ್ತಿನ್, ಸುಭಾಸ್ ಜಾಧವ, ಶಕುಂತಲಾ ಬಿರಾದಾರ ಸೇರಿದಂತೆ ಬಿ.ಆರ್.ಬಿರಾದಾರ, ಅಯ್ಯನಗೌಡ ಬಿರಾದಾರ, ಪಿ.ಎನ್.ಗಂಜ್ಯಾಳ, ಸಂಗಪ್ಪ ತಡವಲ್, ಎ.ಕೆ.ನಾಡಗೌಡ ಸಹಿತ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.

