ಭೂಸೇನಾ ನಿವೃತ್ತ ಹವಾಲ್ದಾರ್ ಕಲ್ಮೇಶ ಆಸಂಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮನಸ್ಸು ಮಾಡಿ ಪ್ರಯತ್ನ ಪಟ್ಟರೆ ಯಾರು ಬೇಕಾದರೂ ಸಹ ಎಂಥದೇ ಕೆಲಸವನ್ನು ಪಡೆದುಕೊಳ್ಳಬಹುದು. ಆದರೆ ಭಾರತಾಂಬೆಗಾಗಿ ಹಗಲಿರುಳು ಶ್ರಮಿಸಿ ಅವಕಾಶ ಸಿಕ್ಕಾಗ ಪ್ರಾಣಾರ್ಪಣೆ ಮಾಡುವ ಅವಕಾಶ ಕೇವಲ ಪುಣ್ಯವಂತರಿಗೆ ಮಾತ್ರ ದೊರೆಯುತ್ತದೆ ಎಂದು ಭೂಸೇನಾ ನಿವೃತ್ತ ಹವಲ್ದಾರ್ ಹಾಗೂ ದ್ರೋಣಾ ಸೋಲ್ರ್ಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಕಲ್ಮೇಶ ಆಸಂಗಿ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ ಹಾಗೂ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು; ಭಾರತ ದೇಶದಲ್ಲಿ ದುಡಿಯುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಭಾರತಾಂಬೆಯ ಸೇವೆ ಮಾಡುತ್ತಾರೆ. ಆದರೆ ಪ್ರಾಣವನ್ನು ಅರ್ಪಿಸಿ ಋಣವನ್ನು ತೀರಿಸುವ ಅವಕಾಶ ಕೇವಲ ಸೈನಿಕನಿಗೆ ಮಾತ್ರ ದೊರೆಯುತ್ತದೆ. ಹಾಗೆಯೇ ಸೈನ್ಯಕ್ಕೆ ಸೇರುವ ಅವಕಾಶವು ಸಹ ಕೇವಲ ಪುಣ್ಯವಂತರಿಗೆ ಮಾತ್ರ ಅವಕಾಶ ಲಭಿಸುತ್ತದೆ. ಅಂಥ ಪುಣ್ಯವಂತರಲ್ಲಿ ನಾನು ಕೂಡ ಒಬ್ಬನಾಗಿದ್ದು ನನಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್ಮನ್ ಬಸವರಾಜ್ ಕೌಲಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ ಮಾತನಾಡಿದರು.
ವಿಡಿಸಿಸಿ ಬ್ಯಾಂಕ್ನ ನಿವೃತ್ತ ವ್ಯವಸ್ಥಾಕ ವಿ.ಡಿ.ಮಾದನಶೆಟ್ಟಿ, ಕಾಲೇಜಿನ ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಮಾರಿ ರತ್ನಾ ಕ್ಷತ್ರಿ ಪ್ರಾರ್ಥಿಸಿದರು, ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ನಿರೂಪಿಸಿದರು.

“ಏಕೆಂದರೆ ಇಂದು ನಾವು ಏನೇ ಆಗಿದ್ದರೂ ಅದರ ಹಿಂದಿರುವ ಶಕ್ತಿ ಗುರುವಾಗಿತ್ತಾನೆ. ಒಂದು ವೇಳೆ ಅಂದು ಗುರು ಸರಿದಾರಿ ತೋರದೇ ಇದ್ದಲ್ಲಿ ಇಂದು ನಾವು ಅಡ್ಡದಾರಿಯ ಅಧಿಪತಿಗಳಾಗಬೇಕಾಗುತ್ತಿತ್ತು. ಹೀಗಾಗಿ ದೇಶ ಕಾಯುವ ಯೋಧ ಹೊರಗಿನ ಶತ್ರುಗಳನ್ನು ಸಂಹರಿಸಿ ನಮ್ಮನ್ನು ರಕ್ಷಿಸಿದರೆ ಸಮಾಜ ಕಟ್ಟುವ ಗುರು ಎನ್ನುವ ಯೋಧ ನಮ್ಮ ಆತಂರ್ಯದಲ್ಲಿರುವ ಕೆಟ್ಟ ಗುಣಗಳೆನ್ನುವ ವೈರಿಯನ್ನು ಸಂಹರಿಸಿ ಸಮಾಜದಲ್ಲಿ ನಮ್ಮ ಒಳಿತನ್ನು ಕಾಯುವ ಕೆಲಸ ಮಾಡುತ್ತಾರೆ. ಅದಕ್ಕಾಗಿಯೇ ಈರ್ವರನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ.”
– ಬಸವರಾಜ್ ಕೌಲಗಿ
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್ಮನ್

