ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಜ್ಞಾನದ ಮೂಲವಾಗಿರುವ ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ ಮಹರ್ಷಿ ವೇದವ್ಯಾಸರ ಜನ್ಮದಿನವನ್ನು ಗುರು ಪೂರ್ಣಿಮೆ ಎಂದು ಹಿರಿಯ ಸಾಹಿತಿ, ಲಿಂಗನಗೌಡ ಮಾಲಿ ಪಾಟೀಲ್ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಜಗವ ಬೆಳಗಲು ಸೂರ್ಯ ಚಂದ್ರರು ಹೇಗೆ ಮುಖ್ಯವೋ ಹಾಗೆಯೇ ಪ್ರತಿಯೊಬ್ಬರ ಜೀವನ ಬೆಳಗಲು ಸದ್ಗುರುವಿನ ಸಾಮಿಪ್ಯ ಅಷ್ಟೇ ಮುಖ್ಯ ಎಂದವರು, ಶ್ರೀಮಠದಲ್ಲಿ ಆರಂಭವಾದ ಶಿವಾನುಭವ ಗೋಷ್ಠಿ ಯಶಸ್ವಿಯಾಗಿ ಹನ್ನೊಂದು ವರ್ಷಗಳನ್ನು ಪೂರೈಸಿ ಹನ್ನೆರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಅತೀವ ಸಂತಸ ತಿಂದಿದೆ ಎಂದರು.
ಉಪನ್ಯಾಸ ನೀಡಿದ ಮಲ್ಲಯ್ಯ ಸ್ವಾಮಿ ವಡಿಗೇರಿ ದುರಹಂಕಾರ, ದುರ್ಬುದ್ಧಿ ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಗುರು ಯಾವತ್ತೂ ದೊರೆಯುವುದಿಲ್ಲ, ಕಾಯ, ವಾಚ, ಮನಸಾರೆ ಭಜಿಸಿದಾಗ ಗುರು ಕೃಪೆ ಸುಲಭ ಸಾಧ್ಯ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಚನ್ನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಇದೇ ವೇಳೆ ಸಾಸನೂರಿನ ಚಿಂಚರಕಿ ಮಠದ ಶ್ರೀಕಾಂತಯ್ಯ ಶಾಸ್ತ್ರಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಾಯಕಿ ಮಹಾದೇವಿ ಸರ್ಜಾಪುರ ಮಾತನಾಡಿದರು,
ಪುರಸಭೆ ನೂತನ ಅಧ್ಯಕ್ಷೆ ಗಿರೀಜಾ ರಮೇಶ ಕೊಡಗಾನೂರು ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಶರಣು ಕುಮಾರ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು,
ಪ್ರಮುಖರಾದ ಪುರಸಭೆ ಉಪಾಧ್ಯಕ್ಷೆ ಸುಪುತ್ರ ಶಿವಪ್ಪ ಕಂಬಾರ, ಪುರಸಭೆ ಸದಸ್ಯ ಚಳಿಗೆಪ್ಪ ಮ್ಯಾಗೇರಿ, ಸಾಹಿತಿ ನಿಂಗನಗೌಡ ದೇಸಾಯಿ, ದೇವಿ ಆರಾಧಕ ಬಸವರಾಜ, ಯಲ್ಲಾಲಿಂಗ ನಡಿಗೇರಿ, ಅಭಿಷೇಕ ಪಾಟೀಲ್ ಸೇರಿದಂತೆ ಅನೇಕ ಸದ್ಭಕ್ತರು ಉಪಸ್ಥಿತರಿದ್ದರು.
ಡಾ ಯಂಕನಗೌಡ ಪಾಟೀಲ್ ನಿರೂಪಿಸಿ ವಂದಿಸಿದರು.

