ಸಿಂದಗಿಯ ಜಮೀನುಗಳಲ್ಲಿ ಬಿಜೆಪಿ ಮುಖಂಡರಿಂದ ಬೆಳೆ ಸಮೀಕ್ಷೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯದಲ್ಲಿ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ರಾಜ್ಯವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರೈತರಿಗೆ ಪ್ರತಿ ಹೆಕ್ಟೇರ್ಗೆ ರೂ.೧ಲಕ್ಷ ಹಾಗೂ ಎಕರೆಗೆ ರೂ.೫೦ ಸಾವಿರ ಪರಿಹಾರ ನೀಡಬೇಕು. ಬಿತ್ತನೆ ಮಾಡದ ಖಾಲಿ ಜಮೀನುಗಳಿಗೆ ಬಿತ್ತನೆ ಮಾಡಲು ತತ್ಕ್ಷಣದಲ್ಲಿ ರೂ.೨೫ಸಾವಿರ ವಿಶೇಷ ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ರಾ.ಪ್ರ.ಕಾರ್ಯದರ್ಶಿ, ವಿಪ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಆಗ್ರಹಿಸಿದರು.
ಬಿಜೆಪಿಯ ರಾಜ್ಯ ವ್ಯಾಪಿ ಬೆಳೆ ಸಮೀಕ್ಷೆ ಅಭಿಯಾನದ ಅಂಗವಾಗಿ ಮುದ್ದೇಬಿಹಾಳದಿಂದ ಆರಂಭವಾಗಿ ಕುಂಟೋಜಿ, ಮಿಣಜಗಿ, ತಾಳಿಕೋಟೆ, ಬಿಬಿ.ಇಂಗಳಗಿ, ಕೆರುಟಗಿ, ಸಿಂದಗಿ ತಾಲೂಕಿನ ಹಂದಿಗನೂರ, ಬನ್ನೇಟ್ಟಿ ಪಿ.ಎ., ಬ್ಯಾಕೋಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಇದುವರೆಗೆ ಬರಪೀಡಿತ ಪ್ರದೇಶವೆಂದು ಘೋಷಿಸದೇ ಇರುವುದನ್ನು ಟೀಕಿಸಿದ ಅವರು, ಮಳೆ ಕೊರತೆಯಿಂದ ರೈತರು ಉದ್ಯೋಗ ಅರಸಿ ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ವಲಸೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ. ರೈತರಿಗೆ ಬೆಳೆ ವಿಮೆ ಕಟ್ಟಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಳೆ ವಿಮೆ ಪ್ರೀಮಿಯಂನ್ನು ಸರ್ಕಾರವೇ ಭರಿಸಬೇಕು. ರೈತರಿಗೆ ಮೋಸ ಮಾಡುತ್ತಿರುವ ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ರೈತರ ಸಂಕಷ್ಟವನ್ನು ಅರಿಯಲು ಎಲ್ಲ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸುತ್ತಿರುವಾಗ, ರಾಜ್ಯ ಸರ್ಕಾರ ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ತಕ್ಷಣ ಬರ ಘೋಷಿಸಿ ರೈತರ ನೆರವಿಗೆ ಬರದಿದ್ದರೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧಿವೇಶನ ಸುಗಮವಾಗಿ ನಡೆಯಲು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅವಕಾಶ ನೀಡುವುದಿಲ್ಲ. ಜೊತೆಗೆ ರಾಜ್ಯಾದ್ಯಂತ ರೈತರೊಂದಿಗೆ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರು ಬೆಳೆ ಬಿತ್ತನೆ ಮಾಡಿದ ಬಳಿಕ ಸಮರ್ಪಕ ಮಳೆಯಾಗದೆ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತ್ತೀಚೆಗೆ ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಯಿಂದ ಬೆಳೆಗೆ ಜೀವ ಬಂದಿದೆಯೇ ಹೊರತು, ಇಲ್ಲದಿದ್ದರೆ ಸಂಪೂರ್ಣ ಬೆಳೆ ನಾಶವಾಗುತ್ತಿತ್ತು. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬಿತ್ತನೆಯಾಗಿದ್ದು, ಒಬ್ಬ ರೈತ ಎಕರೆಗೆ ಕನಿಷ್ಠ ರೂ.೨೫ ಸಾವಿರ ಹಾಗೂ ಹೆಕ್ಟೇರ್ಗೆ ೬೦-೭೦ ಸಾವಿರವರೆಗೆ ವೆಚ್ಚ ಮಾಡುತ್ತಾನೆ. ಮತ್ತೊಮ್ಮೆ ಬಿತ್ತನೆ ಮಾಡುವುದು ರೈತನಿಗೆ ಅಸಾಧ್ಯವಾಗಿದ್ದು, ಸರ್ಕಾರ ತಕ್ಷಣ ನೆರವಿಗೆ ಬರಬೇಕಾಗಿದೆ ಎಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಶಾಸಕ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಯಭಾಗ ಶಾಸಕ ದುರ್ಯೋಧನ ಐಹೊಳೆ, ಹಣಮಂತ ನಿರಾಣಿ, ಮಾಜಿ ಶಾಸಕ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ನಾಗಪ್ಪ ಶಿರೂರ ಈರಣ್ಣ ರಾವೂರ, ಸಿದ್ದು ಬುಳ್ಳಾ, ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ರೈತ ಮೋರ್ಚಾ ಅಧ್ಯಕ್ಷ ಪೀರೂ ಕೆರೂರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಸೇರಿದಂತೆ ಬಿಜೆಪಿ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

