ಸಿಂದಗಿ ಸಾರಂಗಮಠದಲ್ಲಿ ೩೫೭ನೇ ಸದ್ವಿಚಾರ ಗೋಷ್ಠಿ | ಯಾತ್ರಿಕರಿಗೆ ಸನ್ಮಾನ | ಗ್ರಂಥ ಬಿಡುಗಡೆ | ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಿಮಾಲಯದ ಶಾಂತ ವಾತಾವರಣದಲ್ಲಿ ದೇವರ ಸಾನ್ನಿಧ್ಯವನ್ನು ಅನುಭವಿಸುವ ಅವಕಾಶ ನೀಡುವ ಕೈಲಾಸ–ಮಾನಸಸರೋವರ ಯಾತ್ರೆ ಭಕ್ತರಿಗೆ ಕೇವಲ ಪ್ರವಾಸವಲ್ಲ, ಅದು ಜೀವನದಲ್ಲಿ ಮರೆಯಲಾಗದ ಆಧ್ಯಾತ್ಮಿಕ ಅನುಭವವಾಗಿದೆ. ಈ ಯಾತ್ರೆಯು ಅತ್ಯಂತ ಪ್ರಮುಖ ಹಂತವಾಗಿದೆ ಎಂದು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹೇಳಿದರು.
ಸಿಂದಗಿ ನಗರದ ಸಾರಂಗಮಠದಲ್ಲಿ ಗುರುಪೂರ್ಣಿಮೆ (ಕಡ್ಲಿಗರ ಹುಣ್ಣಿಮೆ) ಅಂಗವಾಗಿ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡ ೩೫೭ನೇ ಸದ್ವಿಚಾರಗೋಷ್ಠಿ ಹಾಗೂ ನೇಪಾಳ, ಚೀನಾ ಹಾಗೂ ಟಿಬೆಟ್ ಗಡಿ ಭಾಗದಲ್ಲಿರುವ ಹಿಮಾಲಯದ ಕೈಲಾಸ ಮಾನಸ ಸರೋವರ ತೀರ್ಥಯಾತ್ರೆಯ ಅನುಭವ ಉದ್ದೇಶಿಸಿ ಮಾತನಾಡಿದ ಅವರು, ಕೈಲಾಸ ಮಾನಸ ಸರೋವರವು ವಿಶ್ವದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಅಲ್ಲಿನ ದೈವಿಕ ವಾತಾವರಣ, ಆಧ್ಯಾತ್ಮಿಕ ಅನುಭವ ಮತ್ತು ಪ್ರಕೃತಿಯ ಸೌಂದರ್ಯ ಮನಸ್ಸಿಗೆ ಅಪಾರ ಸಂತಸ ಹಾಗೂ ನೆಮ್ಮದಿಯನ್ನು ನೀಡುತ್ತದೆ. ಈ ಯಾತ್ರೆ ಜೀವನದಲ್ಲಿ ಮರೆಯಲಾಗದ ಅನುಭವವಾಗಿದೆ ಎಂದು ಕೈಲಾಸ-ಮಾನಸ ಸರೋವರದ ಪವಿತ್ರ ಯಾತ್ರೆಯು ಜೀವನದಲ್ಲಿ ಆತ್ಮಸಾಕ್ಷಾತ್ಕಾರ ಮತ್ತು ಭಕ್ತಿಭಾವವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಾಧನೆಯಾಗಿದೆ. ಧರ್ಮ ಮತ್ತು ಕರ್ಮ ಎಂಬ ಎರಡು ಪವಿತ್ರ ಹೊಂಡಗಳಲ್ಲಿ ಭಕ್ತರು ಸಂಪ್ರದಾಯದಂತೆ ಸ್ನಾನ ಮಾಡುವ ಅವಕಾಶ ದೊರೆಯಿತು. ಜೊತೆಗೆ ನೇಪಾಳದ ಭಕ್ತಪೂರ ಗ್ರಾಮದಲ್ಲಿರುವ ವೀರಭಕ್ತ ಲಿಂಗ ಜಂಗಮ ಮಠಕ್ಕೂ ಭೇಟಿ ನೀಡಿದೇವು. ಸದ್ಗುರುವಿನ ಆಶೀರ್ವಾದ ಮತ್ತು ಹಾರೈಕೆಯಿಂದಲೇ ಕೈಲಾಸ ಯಾತ್ರೆಯನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಲು ಸಾಧ್ಯವಾಯಿತು. ಈ ಪವಿತ್ರ ಯಾತ್ರೆಯು ನಮ್ಮ ಮನಸ್ಸಿನಲ್ಲಿ ಹೊಸ ಚೈತನ್ಯ, ಭಕ್ತಿ ಮತ್ತು ಆಧ್ಯಾತ್ಮಿಕ ತೃಪ್ತಿಯನ್ನು ಮೂಡಿಸಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಈ ವೇಳೆ ಡೋಣೂರು-ಕೊಟ್ಟೂರು ಡಾ.ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ಶಿಕ್ಷಣದ ಬೆಳಕನ್ನು ಹರಡಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸಿ, ಸಿಂದಗಿಯನ್ನು ಶಿಕ್ಷಣದ ಕಾಶಿಯನ್ನಾಗಿ ರೂಪಿಸುವಲ್ಲಿ ಶ್ರೀಮಠದ ಪೂಜ್ಯರ ಕೊಡುಗೆ ಅವಿಸ್ಮರಣೀಯವಾಗಿದೆ. ಅವರ ದೂರದೃಷ್ಟಿ, ಶಿಕ್ಷಣಪ್ರೇಮ ಹಾಗೂ ಮಾನವೀಯ ಮೌಲ್ಯಗಳ ಸೇವೆಗೆ ಈ ಸಂದರ್ಭದಲ್ಲಿ ಗೌರವಪೂರ್ವಕ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದ ಅವರು, ಯಾತ್ರೆಯ ಆಧ್ಯಾತ್ಮಿಕ ಮಹತ್ವ, ಪ್ರಕೃತಿಯ ವೈಭವ, ಯಾತ್ರೆಯಲ್ಲಿನ ಸವಾಲುಗಳು ಹಾಗೂ ಭಕ್ತರು ಅನುಭವಿಸುವ ದೈವಿಕ ಅನುಭೂತಿಗಳ ಕುರಿತು ವಿವರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತೀರ್ಥಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಆಗಮಿಸಿದ ಡೋಣೂರು-ಕೊಟ್ಟೂರು ಡಾ.ಸಿದ್ದಲಿಂಗ ಶಿವಾಚಾರ್ಯರು ಹಾಗೂ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರಿಗೆ ಭಕ್ತಿಪೂರ್ವಕವಾಗಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ವಿವಿಧ ಅಂಗ ಸಂಸ್ಥೆಗಳಿಂದ ಗೌರವಿಸಿ ಸನ್ಮಾನಿಸಲಾಯಿತು. ಮಹಾದೇವಿ ಹಿರೇಮಠ ಅವರ ವಿರಚಿತ ಸಿಂದಗಿ ಚೆನ್ನವೀರ ಅಪ್ಪಗಳ ನಾಮಾವಳಿ ಹಾಗೂ ಹಾಡುಗಳ ಗ್ರಂಥ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿದ್ದರು. ಊರನ ಹಿರಿಯ ಮಠದ ಪೂಜ್ಯರಾದ ಶಿವಾನಂದ ಶಿವಾಚಾರ್ಯರು ಇದ್ದರು. ಡಾ.ಶರಣಬಸವ ಜೋಗುರ ಸ್ವಾಗತಿಸಿದರು. ಪೂಜಾ ಹಿರೇಮಠ ಪ್ರಾರ್ಥಿಸಿ, ನಿರೂಪಿಸಿದರು ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಶೋಕ ವಾರದ, ಗಂಗಾಧರ ಜೋಗುರ, ಅಶೋಕ ಮಸಳಿ, ಅಶೋಕ ಬೂದಿಹಾಳ, ವಿವೇಕಾನಂದ ಸಾಲಿಮಠ, ಆಡಳಿತಾಧಿಕಾರಿ ಡಾ.ಬಿ.ಜಿ.ಮಠ, ಎಸ್.ಎಸ್.ಮಲ್ಲೇದ, ಡಾ.ಮಹಾಂತೇಶ ಹಿರೇಮಠ, ಡಾ.ಪ್ರಶಾಂತ ಬಮ್ಮಣ್ಣಿ ಸೇರಿದಂತೆ ಸಂಸ್ಥೆಯ ವಿವಿಧ ಅಂಗ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು, ಶ್ರೀಮಠದ ಶಿಷ್ಯವೃಂದ, ಗ್ರಾಮಸ್ಥರು ಮತ್ತು ಅಪಾರ ಸಂಖ್ಯೆಯ ಸದ್ಭಕ್ತರು ಇದ್ದರು.

