ವಿಜಯಪುರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರಾಗೃಹ ಬಂದಿಗಳಿಗೆ ಔದ್ಯೋಗಿಕ ತರಬೇತಿ ನೀಡುವುದು ತುಂಬಾ ಸಂತೋಷದ ವಿಷಯ. ಬಿಡುಗಡೆ ಹೊಂದಿದ ನಂತರ ಅವರ ಆರ್ಥಿಕ ಸದೃಡತೆಗೆ ಇದು ಸಹಾಯಕಾರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಹಾಗರಗಿ ಹೇಳಿದರು.
ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಾರಾಗೃಹದ ಪುರುಷ ಬಂದಿಗಳಿಗೆ ಕಂಪ್ಯೂಟರ್ ಹಾಗೂ ತಾಂತ್ರಿಕ ಸೇವಾ ತರಬೇತಿ ಹಾಗೂ ಮಹಿಳಾ ಬಂದಿಗಳಿಗೆ ಸಾಂಪ್ರದಾಯಿಕ ಕೈಕಸೂತಿ ಮತ್ತು ಡಿಸೈನಿಂಗ್ ಔದ್ಯೋಗಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಬಳಕೆ ಅತೀ ಅಗತ್ಯವಾದ ತಂತ್ರಜ್ಞಾನವಾಗಿದೆ. ಹಾಗಾಗಿ ಈ ತರಬೇತಿಯನ್ನು ಸಮಯ ವ್ಯರ್ಥ ಮಾಡದೇ ದಕ್ಷತೆಯಿಂದ ಕಲಿತು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರಾಗೃಹ ಅಧೀಕ್ಷಕರಾದ ಮಲ್ಲಿಕಾರ್ಜುನ ಎಸ್ ಮಾಳಿ ಅಧ್ಯಕ್ಷತೆ ವಹಿಸಿ, ಇದು ಕೇವಲ ಕಾರಾಗೃಹ ಮಾತ್ರವಲ್ಲ. ಇದು ಸುಧಾರಣಾ ಕೇಂದ್ರ, ಬಂದಿಗಳಲ್ಲಿ ಪರಿವರ್ತನೆಯನ್ನು ತರುವ ಪರಿವರ್ತನಾ ನಿಲಯವಾಗಿದೆ. ಆ ನಿಟ್ಟಿನಲ್ಲಿ ಬಂದಿಗಳಿಗೆ ಪ್ರತಿದಿನ ಯೋಗ, ಧ್ಯಾನ ಪ್ರಾಣಾಯಾಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜೊತೆಗೆ ಔದ್ಯೋಗಿಕ ತರಬೇತಿ ನೀಡಿ ಸಮಾಜದ ಮುಖ್ಯ ವಾಹಿನಿಗೆ ಕಳುಹಿಸಲು ಇಲಾಖೆ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳು, ಹೈಟೆಕ್ ಕಂಪ್ಯೂಟರ್ ತರಬೇತಿ ಕೇಂದ್ರದ ಮುಖ್ಯಸ್ಥರಾದ ಸುಭಾಷ, ಮತ್ತಿತರರು ಇದ್ದರು. ಡಿ. ಎಸ್. ದೀಕ್ಷಿತ್ ನಿರೂಪಿಸಿ, ವಂದಿಸಿದರು.

