ಯಡ್ರಾಮಿ ವಿರಕ್ತಮಠದಲ್ಲಿ ಲಿಂಗೈಕ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯ ತನ್ನಿಮಿತ್ತ ಶ್ರೀಮಠದಿಂದ ವಿಶೇಷ ಸತ್ಕಾರ ಹಾಗೂ ಶ್ರೀರಕ್ಷೆ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತ ಮಠದ ಲಿಂ. ಸಿದ್ದರಾಮ ಮಹಾಸ್ವಾಮಿಗಳ ಐದನೇ ಪುಣ್ಯ ಸ್ಮರಣೆ ಅಂಗವಾಗಿ
ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಕಳೆದ ಹತ್ತು ದಿನಗಳಿಂದ ಗೋಲಗೇರಿಯ ಶ್ರೀ ಗೊಲ್ಲಾಳೇಶ್ವರರ ಮಹಾಪುರಾಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಗಿ ಬರುತ್ತಲಿವೆ.
ಶುಕ್ರವಾರ ನೂತನವಾಗಿ ನಿರ್ಮಿಸಿದ ಲಿಂ. ಸಿದ್ದರಾಮ ಮಹಾಸ್ವಾಮಿಗಳ ಪಂಚಲೋಹದ ಮೂರ್ತಿ ಪ್ರತಿಷ್ಠಾಪನೆ ಗೊಳ್ಳಲಿದೆ. ಇದಕ್ಕೂ ಮುನ್ನ ಬೆಳಗ್ಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ನೂತನ ಮೂರ್ತಿಯ ಭವ್ಯ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ನಂತರ ಸಾಯಂಕಾಲ ಪುರಾಣ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಹಾಗೂ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅವರನ್ನು ಶ್ರೀಮಠದಿಂದ ವಿಶೇಷ ಸತ್ಕಾರ ಹಾಗೂ ಶ್ರೀರಕ್ಷೆ ಕಾರ್ಯಕ್ರಮ ನಡೆಯಲಿದೆ ಎಂದು ಪೂಜ್ಯ ಸಿದ್ಧಲಿಂಗ ಸ್ವಾಮಿಗಳು ತಿಳಿಸಿದ್ದಾರೆ.

ಲಕ್ಷಾಂತರ ರೂ. ಮೌಲ್ಯದ ಪುಸ್ತಕ ಕೊಡುಗೆ
ವಿಜಯಪುರ ಜಿಲ್ಲೆಯ ಹಿರಿಯ ಪತ್ರಕರ್ತರು ಲೇಖಕರು ಆದ ಇಂದುಶೇಖರ ಮಣೂರ ಅವರು ತಮ್ಮ ಸಿಂದಗಿ ಪಟ್ಟಣದ ಮನೆಯಲ್ಲಿನ ಅಂದಾಜು ರೂ.೨.೫ ಲಕ್ಷ ಮೌಲ್ಯದ ಪುಸ್ತಕ ಭಂಡಾರವನ್ನು ಯಡ್ರಾಮಿಯ ವಿರಕ್ತಮಠಕ್ಕೆ ತಮ್ಮ ತಂದೆಯವರಾದ ದಿ. ಸಿದ್ದಣ್ಣ ಮಾಸ್ತರ ಮಣೂರವರ ಸ್ಮರಣಾರ್ಥವಾಗಿ ಕೊಡುಗೆಯಾಗಿ ನೀಡಿದ್ದಾರೆ.
ಯಡ್ರಾಮಿ ಪಟ್ಟಣದ ವಿದ್ಯಾರ್ಥಿಗಳು ಓದುಗ ಸಹೃದಯರಿಗೆ ಹಾಗೂ ಶ್ರೀಮಠದ ಭಕ್ತರಿಗೆ ಜ್ಞಾನದ ಹಸಿವನ್ನು ನೀಗಿಸುವ ಮಹತ್ತರ ಕಾರ್ಯಗೈದಿರುವುದು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ.
ಮಣೂರವರ ಪುಸ್ತಕ ಪ್ರೇಮ ಹಾಗೂ ಪುಸ್ತಕ ಭಂಡಾರವನ್ನು ದಾನ ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಸಗರಾದ್ರಿ ಸಾಂಸ್ಕೃತಿಕ ಸಂಗಮ ವೇದಿಕೆ ಹರ್ಷ ವ್ಯಕ್ತಪಡಿಸಿದೆ.

